ರಾಜ್ಯದಲ್ಲೇ ಅತ್ಯಧಿಕ ಆದಾಯ ತರುವ ದೇವಾಲಯ ಮಲೆ ಮಹದೇಶ್ವರ
Recommended Video
ಚಾಮರಾಜನಗರ, ನವೆಂಬರ್.04:ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನೆಲೆ ನಿಂತಿರುವ ಪವಾಡ ಪುರುಷ ಮಲೆ ಮಹದೇಶ್ವರ ಕೋಟ್ಯಾಧಿಪತಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾನೆ. ಪ್ರತಿ ಸಲ ಹುಂಡಿಗಳ ಕಾಣಿಕೆ ಹಣವನ್ನು ಎಣಿಕೆ ಮಾಡುವಾಗಲೆಲ್ಲ ಕೋಟಿ ರೂ. ಮೇಲೆ ಸಂಗ್ರಹವಾಗುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.
ತಿಂಗಳಿಗೊಮ್ಮೆ ಎಣಿಕೆ ಕಾರ್ಯವನ್ನು ಮಾಡಲಾಗುತ್ತಿದ್ದು, ಪ್ರತಿ ತಿಂಗಳೂ ಮಹದೇಶ್ವರನ ಸನ್ನಿಧಿಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆಯಲ್ಲದೆ, ಅವರು ಭಕ್ತಿಯಿಂದ ಅರ್ಪಿಸುತ್ತಿರುವ ಕಾಣಿಕೆಯೂ ಹೆಚ್ಚುತ್ತಿದೆ. ಹೀಗಾಗಿ ಕೋಟಿ ರೂ.ನ ಗಡಿದಾಟಿ ಕೋಟ್ಯಾಧಿಪತಿಯಾಗಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿದ್ದಾನೆ ಮಲೆಮಹದೇಶ್ವರ.
ಮಲೆಮಹದೇಶ್ವರ ಬೆಟ್ಟದಲ್ಲಿ ಕಣ್ಮನಸೆಳೆದ ಮಹಾರಥೋತ್ಸವ
ದಸರಾ ವೇಳೆ ಪ್ರವಾಸಿಗರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡಿದ್ದರು. ಹೀಗಾಗಿ ಎಂದಿನಂತೆ ಒಂದು ತಿಂಗಳ ಅವಧಿಯ ಕಾಣಿಕೆ ಹಣವನ್ನು ಎಣಿಕೆ ಮಾಡಲಾಗಿದ್ದು, ಈ ಬಾರಿ ಒಂದು ಕೋಟಿ ಮೂವತ್ತೆರಡು ಲಕ್ಷದ ಎಂಭತ್ಮೂರು ಸಾವಿರದ ಎಂಟನೂರು ಇಪ್ಪತ್ತೊಂದು ರೂಪಾಯಿ ಕಾಣಿಕೆ ಹಣ ಮತ್ತು 45 ಗ್ರಾಂ ಚಿನ್ನ, ಒಂದು ಕೆಜಿ ಐವತ್ತು ಗ್ರಾಂ ಬೆಳ್ಳಿ ಪದಾರ್ಥಗಳು ಸಂಗ್ರಹವಾಗಿದೆ.
ಪೊಲೀಸ್ ಭದ್ರತೆಯೊಂದಿಗೆ ಎಣಿಕೆ
ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಂ. ಗಾಯತ್ರಿರವರ ನೇತೃತ್ವದಲ್ಲಿ ದೇವಾಲಯದ ಹುಂಡಿಗಳನ್ನು ಭಾರೀ ಪೊಲೀಸ್ ಭದ್ರತೆಯೊಂದಿಗೆ ಎಣಿಕೆ ಮಾಡಲಾಗಿದ್ದು, ಈ ವೇಳೆ ಸಾಲೂರು ಬೃಹನ್ಮಠಾಧ್ಯಕ್ಷ ಪಟ್ಟದ ಗುರುಸ್ವಾಮಿ, ಪ್ರಾಧಿಕಾರದ ಉಪ ಕಾರ್ಯುದರ್ಶಿ ರಾಜಶೇಖರ್ ಮೂರ್ತಿ, ಅಧೀಕ್ಷಕ ಎಂ. ಬಸವರಾಜು, ಲೆಕ್ಕಾಧೀಕ್ಷಕ ಮಹದೇವಸ್ವಾಮಿ, ಹಿರಿಯ ಆರೋಗ್ಯ ನಿರೀಕ್ಷಕ ಶ್ರೀಕಾಂತ್ ವಿಭೂತಿ, ಜಿಲ್ಲಾಧಿಕಾರಿಯವರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮೋಹನ್ ಕುಮಾರ್ ಮತ್ತು ಮಹದೇಶ್ವರಬೆಟ್ಟ ಆರಕ್ಷಕ ಸಿಬ್ಬಂದಿ, ಎಸ್.ಬಿ.ಎಂ. ವ್ಯವಸ್ಥಾಪಕ ಸೆಂದಿಲ್ ನಾಥನ್ ಮತ್ತು ಸಿಬ್ಬಂದಿ ಸಹಕಾರದಲ್ಲಿ ಕಾಣಿಕೆ ಹಣವನ್ನು ಎಣಿಕೆ ಮಾಡಲಾಯಿತು.
ಚಿನ್ನದ ಪದಾರ್ಥಗಳು 45 ಗ್ರಾಂ
ಈ ವೇಳೆ ಒಟ್ಟು ರೂ.1,32,83,821.00 (ಒಂದು ಕೋಟಿ ಮೂವತ್ತೆರಡು ಲಕ್ಷದ ಎಂಬತ್ಮೂರು ಸಾವಿರದ ಎಂಟು ನೂರ ಇಪ್ಪತ್ತೊಂದು ರೂ.ಗಳು) ಇದಲ್ಲದೇ ಚಿನ್ನದ ಪದಾರ್ಥಗಳು 45 ಗ್ರಾಂ (ನಲವತ್ತೈದು ಗ್ರಾಂ) ಮತ್ತು ಬೆಳ್ಳಿ ಪದಾರ್ಥಗಳು 1.050ಗ್ರಾಂ ( ಒಂದು ಕೆ.ಜಿ ಐವತ್ತು ಗ್ರಾಂ ) ದೊರೆತಿದೆ.
ಚಾಮರಾಜನಗರ: ಮಲೆ ಮಹದೇಶ್ವರನೀಗ ಕೋಟಿ ಒಡೆಯ!
ಅತಿಹೆಚ್ಚು ಕಾಣಿಕೆ ಹಣ ಸಂಗ್ರಹ
ಇದೀಗ ಅತಿಹೆಚ್ಚು ಕಾಣಿಕೆ ಹಣ ಸಂಗ್ರಹವಾಗುವ ಮೂಲಕ ರಾಜ್ಯದಲ್ಲೇ ಅತ್ಯಧಿಕ ಆದಾಯ ತರುವ ದೇವಾಲಯ ಮಲೆ ಮಹದೇಶ್ವರ ಸನ್ನಿಧಿ ಗಮನಸೆಳೆಯುತ್ತಿದೆ. ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಪ್ರಾಧಿಕಾರವು ಕ್ಷೇತ್ರಕ್ಕೆ ಬರುವ ಭಕ್ತಾಧಿಗಳ ಅನುಕೂಲಕ್ಕೆ ಹಲವಾರು ಅಭಿವೃದ್ಧಿ ಕೆಲಸ ಕಾರ್ಯ ಹಮ್ಮಿಕೊಂಡಿರುವುದನ್ನು ಕಾಣಬಹುದಾಗಿದೆ.
ಬಹು ಮುಖ್ಯ ಶ್ರದ್ಧಾಭಕ್ತಿ ಕೇಂದ್ರ
ಮಹದೇಶ್ವರ ಬೆಟ್ಟ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ(ಈಗ ಹನೂರು ತಾಲೂಕು) ಬಹು ಮುಖ್ಯ ಶ್ರದ್ಧಾಭಕ್ತಿ ಕೇಂದ್ರ. ದೇವಸ್ಥಾನವು ಬೆಟ್ಟಗಳಿಂದ ಸುತ್ತುವರಿದಿರುವ ಕಾರಣ ಮಹದೇಶ್ವರ ಬೆಟ್ಟವೆಂದು ಕರೆಯಲಾಗುತ್ತದೆ. ಮೈಸೂರಿನಿಂದ 150 ಕಿ ಮೀ ಹಾಗೂ ರಾಜಧಾನಿ ಬೆಂಗಳೂರಿನಿಂದ 210 ಕಿ ಮೀ ದೂರವಿದೆ ಈ ಮಹದೇಶ್ವರ ಬೆಟ್ಟ.