ಸಂಕಷ್ಟದಲ್ಲೂ ಸಂಪಾದನೆ; 4 ತಿಂಗಳ ನಂತರ ಮಾದಪ್ಪನ ಹುಂಡಿ ಎಣಿಕೆ ಕಾರ್ಯ
ಚಾಮರಾಜನಗರ, ಜೂನ್ 27: ಬರೋಬ್ಬರಿ 4 ತಿಂಗಳ ಬಳಿಕ ಚಾಮರಾಜನಗರ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಹುಂಡಿ ಹಣ ಎಣಿಕೆ ನಡೆದಿದೆ. ದೇಗುಲ ಬಂದಾಗಿದ್ದರಿಂದ ಮಹದೇಶ್ವರನ ಆದಾಯದಲ್ಲಿ ಕೋಟ್ಯಂತರ ರೂಪಾಯಿ ಕಡಿಮೆಯಾಗಿದೆ. ಆದರೆ ನಾಲ್ಕು ತಿಂಗಳಲ್ಲಿ ಮಹದೇಶ್ವರನ ಹುಂಡಿಯಲ್ಲಿ ₹ 96 ಲಕ್ಷ ಸಂಗ್ರಹವಾಗಿದ್ದು, ಅಮೆರಿಕದ ಡಾಲರ್ ಕೂಡ ಮಾದಪ್ಪನಿಗೆ ಅರ್ಪಣೆಯಾಗಿದೆ.
ನಾಲ್ಕು ತಿಂಗಳಲ್ಲಿ ಒಟ್ಟಾರೆ 96,27,988 ಲಕ್ಷ ರೂ ಸಂಗ್ರಹವಾಗಿದ್ದು, 19.3 ಗ್ರಾಂ ಚಿನ್ನ, 1.9 ಕೆಜಿ ಬೆಳ್ಳಿ ಕೂಡ ಬಂದಿದೆ. ಯುಗಾದಿ ಜಾತ್ರೆ ಬಳಿಕ ಹುಂಡಿ ಹಣದ ಎಣಿಕೆಯಾಗಬೇಕಿತ್ತು. ಆದರೆ ಕೊರೊನಾ ವೈರಸ್ ಲಾಕ್ ಡೌನ್ ನಿಂದಾಗಿ ಮೂರು ತಿಂಗಳ ಕಾಲ ದೇಗುಲವೇ ಬಂದ್ ಆಗಿ ಜಾತ್ರೆಯೂ ರದ್ದಾದ ಕಾರಣ ಎಣಿಕೆ ಕಾರ್ಯ ನಡೆದಿರಲಿಲ್ಲ. ನಿನ್ನೆ ಬೆಳಿಗ್ಗೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಹುಂಡಿ ಎಣಿಕೆ ಕಾರ್ಯ ಆರಂಭಗೊಂಡು, ರಾತ್ರಿ ಅಂತ್ಯವಾಗಿದೆ.
ಚಾಮರಾಜನಗರ: ಮಲೆಮಹದೇಶ್ವರನಿಗಿಲ್ಲ ಸೂರ್ಯ ಗ್ರಹಣದ ಸೂತಕ
ಈಗ ಒಟ್ಟು 96,27,988 ರೂಪಾಯಿ ಸಂಗ್ರಹವಾಗಿದ್ದು, ಅದರಲ್ಲಿ ಶೇ.90ರಷ್ಟು ಮಾರ್ಚ್ ನಲ್ಲಿ ಬಂದ ಭಕ್ತರ ಅರ್ಪಣೆಯಾಗಿದೆ. ಕಾಣಿಕೆ ರೂಪದಲ್ಲಿ 5 ಅಮೆರಿಕನ್ ಡಾಲರ್ ಅರ್ಪಣೆಯಾಗಿದೆ ಎಂದು ಮಲೆ ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಮಹದೇಶ್ವರನ ಹುಂಡಿಯಲ್ಲಿ ಪ್ರತಿ ತಿಂಗಳು ಸರಾಸರಿ ಒಂದರಿಂದ ಒಂದು ಕಾಲು ಕೋಟಿ ರೂಪಾಯಿ ಸಂಗ್ರಹವಾಗುತ್ತಿತ್ತು. ಆದರೆ, ಇದೀಗ ನಾಲ್ಕು ತಿಂಗಳ ಬಳಿಕೆ ಹುಂಡಿ ತೆರೆಯಲಾಗಿದ್ದು ತಿಂಗಳಿಗೆ ಸರಾಸರಿ 24 ಲಕ್ಷ ರೂ ಸಂಗ್ರಹವಾದಂತಾಗಿದೆ. ಈ ಅಂಕಿ ಅಂಶಗಳ ಪ್ರಕಾರ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಪ್ರತಿ ತಿಂಗಳು ಸಂಗ್ರಹವಾಗುತ್ತಿದ್ದ ಮೊತ್ತಕ್ಕೆ ಹೋಲಿಸಿದರೆ ಇದು ಕಡಿಮೆ ಮೊತ್ತ ಎಂದು ಮಲೆಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.