ಕೋಟ್ಯಾಧಿಪತಿಯಾಗಿ ಮುನ್ನಡೆಯುತ್ತಿರುವ ಮಲೆಮಹದೇಶ್ವರ
ಚಾಮರಾಜನಗರ, ಮೇ 02: ಕಳೆದ ಕೆಲವು ತಿಂಗಳಿನಿಂದ ಪವಾಡ ಪುರುಷ ಮಲೆ ಮಹದೇಶ್ವರ ನೆಲೆಸಿರುವ ಮಲೆ ಮಹದೇಶ್ವರ ಬೆಟ್ಟದ ಹುಂಡಿಗೆ ಬೀಳುವ ಕಾಣಿಕೆ ಕೋಟಿ ರೂಪಾಯಿಗಳಲ್ಲಿದೆ. ಹೀಗಾಗಿ ಮಲೆಮಹದೇಶ್ವರ ಕೋಟ್ಯಾಧಿಪತಿಯಾಗಿಯೇ ಮುಂದುವರೆಯುತ್ತಿದ್ದು, ತಿಂಗಳಿನಿಂದ ತಿಂಗಳಿಗೆ ಭಕ್ತರು ಹಾಕುತ್ತಿರುವ ಕಾಣಿಕೆ ಪ್ರಮಾಣವೂ ಹೆಚ್ಚಾಗುತ್ತಿದೆ.
ಇದೀಗ ಒಂದು ತಿಂಗಳ ಹುಂಡಿಯ ಕಾಣಿಕೆ ಹಣವನ್ನು ಎಣಿಕೆ ಮಾಡಲಾಗಿದ್ದು, ಭಕ್ತರು ಒಂದು ತಿಂಗಳಲ್ಲಿ ಚಿನ್ನ ಮತ್ತು ಬೆಳ್ಳಿ ಪದಾರ್ಥಗಳು ಸೇರಿದಂತೆ ಒಟ್ಟು 1 ಕೋಟಿ 93 ಲಕ್ಷ 73 ಸಾವಿರ 279 ರೂಪಾಯಿಗಳು ಕಾಣಿಕೆ ರೂಪದಲ್ಲಿ ಹಾಕಿರುವುದು ಕಂಡು ಬಂದಿದೆ.
ರಾಜ್ಯದಲ್ಲೇ ಅತ್ಯಧಿಕ ಆದಾಯ ತರುವ ದೇವಾಲಯ ಮಲೆ ಮಹದೇಶ್ವರ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಏಪ್ರಿಲ್ ತಿಂಗಳಲ್ಲಿ ದೇಶದ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ಮಹದೇಶ್ವರ ದರ್ಶನ ಪಡೆದ ಬಳಿಕ ಭಕ್ತಿಪೂರ್ವಕವಾಗಿ ಕಾಣಿಕೆಯನ್ನು ಅರ್ಪಿಸಿದ್ದರು.
ಇದರ ಎಣಿಕೆ ಕಾರ್ಯವನ್ನು ಮಲೆ ಮಹದೆಶ್ವರ ಬೆಟ್ಟದ ದೇವಾಲಯದಲ್ಲಿ ಭಾರಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಮಲೆ ಮಹದೇಶ್ವರ ದೇವಸ್ಥಾನಗಳ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಂ.ಗಾಯತ್ರಿ ನೇತೃತ್ವದಲ್ಲಿ ಮಾಡಲಾಯಿತು.
ಒಂದೇ ತಿಂಗಳಲ್ಲಿ ಮಲೆ ಮಹದೇಶ್ವರನ ಹುಂಡಿಯಲ್ಲಿ ಸಂಗ್ರಹವಾದ ಹಣವೆಷ್ಟು ಗೊತ್ತಾ?
ಈ ವೇಳೆ 1,93,73,279 ರೂಪಾಯಿಗಳು ದೊರೆತಿದೆ ಇದರ ಜೊತೆಗೆ 105 ಗ್ರಾಂ ಚಿನ್ನ ಮತ್ತು 2 ಕೆಜಿ 416 ಗ್ರಾಂ ಬೆಳ್ಳಿ ಪದಾರ್ಥಗಳು ಕಾಣಿಕೆ ಹುಂಡಿಯಲ್ಲಿ ದೊರೆತಿದೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ತಿರುಪತಿ ಮಾದರಿಯಲ್ಲೇ ಮೆಟ್ಟಿಲು: ಸಿಎಂ ಭರವಸೆ
ಎಣಿಕೆ ಕಾರ್ಯದಲ್ಲಿ ಸಾಲೂರು ಬೃಹನ್ಮಠದ ಶ್ರೀ ಪಟ್ಟದ ಗುರುಸ್ವಾಮಿ, ಉಪ ಕಾರ್ಯದರ್ಶಿ ರಾಜಶೇಖರಮೂರ್ತಿ, ಅಧೀಕ್ಷಕ ಎಂ.ಬಸವರಾಜು, ಲೆಕ್ಕಾಧೀಕ್ಷಕ ಮಹದೇವಸ್ವಾಮಿ, ಆರೋಗ್ಯ ನಿರೀಕ್ಷಕ ಶ್ರೀಕಾಂತ್ ವಿಭೂತಿ ಹಾಗೂ ದೇವಸ್ಥಾನದ ನೌಕರರು, ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮೋಹನ್ ಕುಮಾರ್ ಮತ್ತು ಮಹದೇಶ್ವರಬೆಟ್ಟ ಆರಕ್ಷಕ ಸಿಬ್ಬಂದಿ ವರ್ಗ, ಎಸ್ಬಿಎಂ. ವ್ಯವಸ್ಥಾಪಕರಾದ ಸೆಂದಿಲ್ ನಾಥನ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.