ಚಾಮರಾಜನಗರ: ಮಾದಪ್ಪನ ಭಕ್ತರ ಆಕ್ರೋಶಕ್ಕೆ ಒಳಗಾದ Rapper Star ಚಂದನ್ ಶೆಟ್ಟಿ!
ಚಾಮರಾಜನಗರ, ಆಗಸ್ಟ್ 25: ಈ ಹಿಂದೆ ಮೈಸೂರು ದಸರಾ ಯುವ ವೇದಿಕೆಯಲ್ಲಿ ತನ್ನ ಪ್ರೇಯಸಿ ನಿವೇದಿತಾ ಗೌಡ ಅವರಿಗೆ ರಿಂಗ್ ತೊಡಿಸಿ ಪ್ರೇಮ ನಿವೇದನೆ ಮಾಡುವ ಮೂಲಕ ವಿವಾದ ಸೃಷ್ಟಿಸಿಕೊಂಡಿದ್ದ ಕನ್ನಡದ Rapper Star ಚಂದನ್ ಶೆಟ್ಟಿ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.
Recommended Video
"ಕೋಲುಮಂಡೆ ಜಂಗಮದೇವಾ..." ಹಾಡನ್ನು ತನ್ನದೇ ಶೈಲಿಯಲ್ಲಿ ಹಾಡಿರುವ ಚಂದನ್ ಶೆಟ್ಟಿಯ ಹೊಸ ಹಾಡಿಗೆ ಚಾಮರಾಜನಗರ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಕೋಲುಮಂಡೆ... ಹಾಡನ್ನು ಅಶ್ಲೀಲವಾಗಿ ಚಿತ್ರೀಕರಿಸಿ, ಮಾದಪ್ಪನ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ. ಮಲೈಮಹದೇಶ್ವರ ಸ್ವಾಮಿಯ ಇತಿಹಾಸವನ್ನೇ ತಿರುಚಿ ಹಾಡು ರಚಿಸಿರುವ ಆರೋಪ ಕೇಳಿ ಬಂದಿದ್ದು, ಹಳೆ ಮೈಸೂರು ಮತ್ತು ಚಾಮರಾಜನಗರ ಭಾಗದ ಜನರು ಚಂದನ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತಿಹಾಸವನ್ನು ತಿರುಚಿ ಹಾಡು ಚಿತ್ರಿಕರಿಸಲಾಗಿದ್ದು, ಶರಣೆ ಸಂಕಮ್ಮನವರನ್ನು ಅಶ್ಲೀಲವಾಗಿ ಪ್ರದರ್ಶಿಸಲಾಗಿದೆ. ಆ ಮೂಲಕ ಶರಣೆ ಸಂಕಮ್ಮನವರನ್ನು ಅವಮಾನಿಸಲಾಗಿದೆ. ಹಳೆಯ ಜಾನಪದ ಹಾಡೊಂದನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡು ವಿಕೃತಿ ಮೆರೆದಿದ್ದಾರೆ ಎಂದು ಸಾಮಾಜಿಕ ಜಾಲತಣಗಳಲ್ಲಿ ಚಂದನ್ ಶೆಟ್ಟಿ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಈ ಕೂಡಲೇ ಚಂದನ್ ಶೆಟ್ಟಿ ಹಾಡಿರುವ "ಕೋಲುಮಂಡೆ' ಹಾಡನ್ನು ಯೂಟ್ಯೂಬ್ ನಿಂದ ತೆಗೆಯಬೇಕು. ಇಲ್ಲವಾದಲ್ಲಿ ಚಂದನ್ ಮನೆ ಮುಂದೆ ಧರಣಿ ಮಾಡಬೇಕಾಗುತ್ತದೆ. ರಾಜ್ಯದಲ್ಲಿ ಅವರ ಕಾರ್ಯಕ್ರಮ ಬಹಿಷ್ಕರಿಸಬೇಕಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.