ಬೆಂಕಿಗೆ ಹೊತ್ತಿ ಉರಿಯುತ್ತಿದೆ ಬಂಡೀಪುರ: ಮೈಸೂರು, ಊಟಿ ರಸ್ತೆ ಬಂದ್
ಮೈಸೂರು, ಫೆಬ್ರವರಿ 23 : ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ನಿನ್ನೆ ಕಾಣಿಸಿಕೊಂಡ ಬೆಂಕಿ ಇಂದು ಕೂಡ ನಂದಿಲ್ಲ.
ಕಿಡಿಗೇಡಿಗಳ ಕೃತ್ಯಕ್ಕೆ ಅಪಾರ ಪ್ರಮಾಣದ ಅರಣ್ಯ ಸಂಪತ್ತು ಕೂಡ ಭಸ್ಮವಾಗಿದ್ದು, ಬಂಡಿಪುರದ ಗೋಪಾಲಸ್ವಾಮಿ ಬೀಟ್ನಲ್ಲಿ ಇನ್ನೂ ಬೆಂಕಿ ಆರಿಲ್ಲ. ಕಾಡಿನ ಬೆಟ್ಟಕ್ಕೆ ಬೆಂಕಿ ಬಿದ್ದ ಕಾರಣ ಬೆಂಕಿಯನ್ನು ಆರಿಸಲಾಗದೇ ಧಗ ಧಗ ಉರಿಯುತ್ತಿದೆ. ಹೀಗಾಗಿ ಊಟಿ-ಗುಂಡ್ಲುಪೇಟೆ ಸಂಚಾರ ಕೆಲ ಕಾಲ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಟ ಅನುಭವಿಸುತ್ತಿದ್ದಾರೆ.
ಬಂಡೀಪುರದಲ್ಲಿ ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಬಂದ ಕಾಡಾನೆ
ಗಾಳಿ ಜೋರಾಗಿ ಬೀಸುತ್ತಿದ್ದುದರಿಂದ ಬೆಂಕಿ ಬೇಗ ಹರಡಿತು. ಈ ಪ್ರದೇಶವು ಕುರುಚಲು ಕಾಡಾಗಿದ್ದು, ಹುಲ್ಲು ಮತ್ತು ಲಂಟಾನ ಗಿಡಗಳನ್ನು ಹೊಂದಿದೆ. ಅರಣ್ಯದಲ್ಲಿ ಬೆಂಕಿ ರೌದ್ರ ನರ್ತನ ಮುಂದುವರೆದಿದ್ದು, ಸಾವಿರಾರು ಎಕರೆ ಅರಣ್ಯ ಉರಿದು ಭಸ್ಮ ವಾಗಿದೆ. ಕಾಡಿನಲ್ಲಿರುವ ವನ್ಯಮೃಗಗಳು ಬೆಂಕಿಗೆ ಆಹುತಿಯಾಗಿದೆ.
ಈ ಪ್ರದೇಶದಲ್ಲಿ ಹುಲ್ಲು ತುಂಬಾ ಒಣಗಿರುವುದು, ಲಂಟಾನ ಗಿಡಗಳು ಹೆಚ್ಚು ಇರುವುದರಿಂದ ಬೆಂಕಿ ನಿಯಂತ್ರಿಸುವುದು ಕಷ್ಟವಾಯಿತು. ಸ್ಪ್ರೇಯರ್ ಬಳಸಿ ನಿಯಂತ್ರಣಕ್ಕೆ ತಂದಿದ್ದೇವೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ್ ತಿಳಿಸಿದರು.
ಬಂಡೀಪುರದ ಮೇಲೆ ಮತ್ತೆ ಕೇರಳ ಕಣ್ಣು: ರಸ್ತೆಗೆ 500 ಕೋಟಿ ರೂ ಮೀಸಲು
ಚಾಮರಾಜನಗರ ತಾಲ್ಲೂಕಿನ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದ ನಾಮರೆ ಮತ್ತು ಚಿಕ್ಕಯ್ಯನಗಿರಿ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಅಂದಾಜು 30 ಎಕರೆಯಷ್ಟು ಅರಣ್ಯ ಸುಟ್ಟು ಹೋಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಗ್ನಿಶಾಮದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದು, ಹರಸಾಹಸ ಪಡುತ್ತಿದ್ದಾರೆ