ಗ್ರಾಮಗಳಿಗೆ ನುಗ್ಗುತ್ತಿವೆ ಬಂಡೀಪುರದ ಕಾಡಾನೆಗಳು; ಇದಕ್ಕೆ ಕಾರಣವಾದರೂ ಏನು?
ಚಾಮರಾಜನಗರ, ನವೆಂಬರ್ 13: ಬಂಡೀಪುರ ಅರಣ್ಯದಿಂದ ನಾಡಿಗೆ ಬಂದು ಜಮೀನಿಗೆ ನುಗ್ಗಿ ರೈತರು ಬೆಳೆದ ಬೆಳೆಗಳನ್ನು ತಿಂದು ಅಭ್ಯಾಸವಾಗಿರುವ ಕಾರಣ ಕಾಡಾನೆಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳುವುದೇ ಕಾಡಂಚಿನ ಗ್ರಾಮಗಳ ರೈತರಿಗೆ ಸವಾಲಾಗಿದೆ.
ಇದೀಗ ಬೆಳೆಗಳ ಫಸಲು ಕೊಯ್ಲಿಗೆ ಬಂದಿದ್ದು, ಈ ಸಂದರ್ಭವೇ ಕಾಡಾನೆಗಳು ಜಮೀನಿಗೆ ಲಗ್ಗೆಯಿಡುತ್ತಿರುವುದರಿಂದ ರೈತರು ಹಗಲು ರಾತ್ರಿ ಎನ್ನದೆ ಜಮೀನಿನಲ್ಲಿ ಕಾಯುವುದು ಮಾಮೂಲಿಯಾಗಿದೆ. ಅರಣ್ಯದಲ್ಲಿ ಈಗ ಆನೆಗಳಿಗೆ ಆಹಾರ ದೊರೆತರೂ ಅವು ಕಾಡಿನಲ್ಲಿ ನಿಲ್ಲದೆ ನೇರವಾಗಿ ರೈತರ ಜಮೀನಿನತ್ತ ಬರುತ್ತಿರುವುದು ಕಂಡು ಬರುತ್ತದೆ. ಬಂಡಿಪುರ ಅಭಯಾರಣ್ಯ ವ್ಯಾಪ್ತಿಯ ಓಂಕಾರ ವಲಯದ ಕಾಡಂಚಿನ ಗ್ರಾಮಗಳಾದ ಶ್ರೀಕಂಠಪುರ, ರಂಗೂಪುರ, ಯಡವನಹಳ್ಳಿ, ಹೊಸಪುರ ಮೊದಲಾದ ಗ್ರಾಮಗಳಲ್ಲಿ ಕಾಡಾನೆಗಳು ಆಗಿಂದಾಗ್ಗೆ ಕಾಣಿಸಿಕೊಳ್ಳುವುದು ಹೊಸತೇನಲ್ಲ. ಆದರೆ ಈ ಬಾರಿ ಸ್ವಲ್ಪ ಜಾಸ್ತಿ ಎಂಬಂತೆ ಕಾಡಾನೆಗಳು ನೇರವಾಗಿ ರೈತರ ಜಮೀನಿನತ್ತ ಬರುತ್ತಿರುವುದು ಕಾಣಿಸುತ್ತಿದೆ. ಮುಂದೆ ಓದಿ...
ಬೆಳ್ಳಂಬೆಳಿಗ್ಗೆ ಮೂಡಿಗೆರೆಯಲ್ಲಿ ರಾಜಾರೋಷವಾಗಿ ಓಡಾಡಿ ಆತಂಕ ತಂದ ಆನೆ
ಜಮೀನಿಗೆ ತೆರಳಲು ರೈತರಿಗೆ ಭಯ
ಕಾಡಾನೆಗಳಿಂದಾಗಿ ರೈತರು ತಮ್ಮ ಜಮೀನುಗಳಿಗೆ ತೆರಳಲು ಭಯಪಡುವಂತಾಗಿದೆ. ಕಳೆದ ಕೆಲವು ದಿನಗಳಿಂದ ಕಾಡಾನೆಗಳು ಹೊಣಕನಪುರ ಗ್ರಾಮದ ಬಳಿ ಕಾಣಿಸಿಕೊಂಡಿದ್ದು, ಈ ಕಾಡಾನೆಗಳು ಗುಡ್ಡದಲ್ಲಿ ಉಳಿದು ರೈತರು ಜಮೀನುಗಳಿಗೆ ತೆರಳಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಡುವನಹಳ್ಳಿ ಗ್ರಾಮದ ಹೊರವಲಯದ ಓಂಕಾರ ಸಿದ್ದೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಕಾಣಿಸಿಕೊಂಡುಆತಂಕದ ವಾತಾವರಣವನ್ನು ನಿರ್ಮಾಣ ಮಾಡಿದ್ದವಲ್ಲದೆ, ರಂಗೂಪುರ ಗ್ರಾಮದ ಹೊರವಲಯದ ಜಮೀನುಗಳಲ್ಲಿಯೂ ಕಾಡಾನೆಗಳು ಕಾಣಿಸಿಕೊಂಡಿವೆ. ಹೀಗೆ ಕಾಡಾನೆಗಳು ಹಿಂಡು ಹಿಂಡಾಗಿ ಅರಣ್ಯದಿಂದ ನಾಡಿಗೆ ನೇರವಾಗಿ ಬರಲು ಕಾರಣವೇನು ಎಂಬುದನ್ನು ನೋಡುವುದಾದರೆ ಕೆಲವೊಂದು ಸಮಸ್ಯೆಗಳು ಅಲ್ಲಿರುವುದು ಎದ್ದು ಕಾಣಿಸುತ್ತಿದೆ.
ಅರಣ್ಯದಲ್ಲಿ ಮುಚ್ಚಿಹೋದ ಕಂದಕ
ಬಂಡೀಪುರದ ಓಂಕಾರ ಅರಣ್ಯವಲಯದ ಬೊಳೆಗೌಡನಕಟ್ಟೆ, ಸೌತ್ ಕೆರೆ ಬಳಿಯಿರುವ ಕಾಡಾನೆಗಳು ನಾಡಿನತ್ತ ಧಾವಿಸುತ್ತಿದ್ದವು. ಇದನ್ನು ಅರಿತ ಅರಣ್ಯ ಇಲಾಖೆ ಕಾಡಾನೆಗಳು ನಾಡಿನತ್ತ ಬಾರದಂತೆ ಆನೆ ಕಂದಕವನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ರೈಲ್ವೆ ಕಂಬಿಗಳನ್ನು ಸಹ ಅಳವಡಿಸಲಾಗಿದೆ. ಆದರೆ ಇತ್ತಿಚಿನ ದಿನಗಳಲ್ಲಿ ಮಳೆ ಹೆಚ್ಚಾದ ಕಾರಣ ಆನೆ ಕಂದಕಕ್ಕೆ ನೀರು ತುಂಬಿ ಕೆಲವು ಭಾಗಗಳಲ್ಲಿ ಮಣ್ಣು ಕುಸಿದು ಕಂದಕಕ್ಕೆ ಬಿದ್ದಿರುವುದರಿಂದ ಇದನ್ನು ದಾಟಿ ಬರಲು ಕಾಡಾನೆಗಳಿಗೆ ಅನುಕೂಲವಾಗುತ್ತಿದೆ. ಅಲ್ಲದೆ ಹೀಗೆ ಅರಣ್ಯದಿಂದ ಹೊರ ಬರುವ ಕಾಡಾನೆಗಳು ದಾರಿ ತಿಳಿಯದೆ ಎಲ್ಲೆಂದರಲ್ಲಿ ಅಡ್ಡಾಡುತ್ತಾ ರೈತರ ಜಮೀನಿಗೆ ನುಗ್ಗಿ ಹುರುಳಿ, ಟೊಮೆಟೊ, ಬಾಳೆಯನ್ನು ತಿಂದು ತುಳಿದು ಹಾಳು ಮಾಡುತ್ತಿವೆ.
ಮತ್ತೆ ನಾಡಿಗೆ ಬಂದ ಒಂಟಿ ಸಲಗ, ಕಾಡಿಗೆ ಅಟ್ಟಲು ಹರಸಾಹಸ
ಸಂಕಷ್ಟದಲ್ಲಿಯೇ ಕೃಷಿ ಮಾಡಿದ್ದ ರೈತರು
ಈ ಬಾರಿ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅದರ ನಡುವೆಯೂ ರೈತರು ಕಷ್ಟಪಟ್ಟು ಬೆಳೆ ಬೆಳೆದಿದ್ದರು. ಈ ಬೆಳೆಯನ್ನು ಕಾಡಾನೆಗಳು ನಾಶ ಮಾಡಿದರೆ ಅದಕ್ಕೆ ಅರಣ್ಯ ಇಲಾಖೆ ನೀಡುವ ಪರಿಹಾರ ರೈತರಿಗೆ ಸಾಕಾಗುವುದಿಲ್ಲ. ಜತೆಗೆ ಈ ಪರಿಹಾರಕ್ಕಾಗಿ ರೈತರು ವರ್ಷಾನುಗಟ್ಟಲೆ ಅರಣ್ಯ ಇಲಾಖೆಯ ಕಚೇರಿಗೆ ಅಲೆದಾಡುವಂತಾಗಿದೆ.
Recommended Video
ಕಾಡಾನೆಗಳ ಜೀವಕ್ಕೂ ಅಪಾಯ
ಇದೆಲ್ಲದರ ನಡುವೆ ಅರಣ್ಯದಿಂದ ಹೊರಗೆ ಬರುವ ಕಾಡಾನೆಗಳ ಜೀವಕ್ಕೂ ಆಪತ್ತು ಕಂಡು ಬರುತ್ತಿದೆ. ಇನ್ನೊಂದೆಡೆ ಹತ್ತಾರು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಾಡಾನೆಗಳು ಜಮೀನಿಗೆ ನುಗ್ಗುತ್ತಿರುವ ವಿಷಯ ತಿಳಿಸಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಇನ್ನಾದರೂ ಸಂಬಂಧಿಸಿದ ಅರಣ್ಯಾಧಿಕಾರಿಗಳು ಇತ್ತ ಗಮನಹರಿಸಿ ಕಾಡಾನೆಗಳು ಅರಣ್ಯದಿಂದ ನಾಡಿಗೆ ಬರುವುದನ್ನು ತಪ್ಪಿಸುವ ಕೆಲಸವನ್ನು ಮಾಡಬೇಕಾಗಿದೆ.