ಶಿವರಾತ್ರಿಗೆ ಮಹದೇಶ್ವರಬೆಟ್ಟದತ್ತ ಹೊರಟ ಪಾದಯಾತ್ರಿಗಳು
ಚಾಮರಾಜನಗರ, ಮಾರ್ಚ್ 03: ಪವಾಡ ಪುರುಷ ನೆಲೆನಿಂತ ಮಹದೇಶ್ವರ ಬೆಟ್ಟವು ಮಹಾಶಿವರಾತ್ರಿ ಜಾತ್ರಾ ಸಂಭ್ರಮಕ್ಕೆ ಅಣಿಯಾಗುತ್ತಿದ್ದು, ಭಕ್ತರು ಇಲ್ಲಿಗೆ ಪಾದಯಾತ್ರೆ ಮೂಲಕ ಬರತೊಡಗಿದ್ದಾರೆ. ಪ್ರತಿ ವರ್ಷವೂ ಶಿವರಾತ್ರಿ ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ.
ಇವರ ಪೈಕಿ ಹೆಚ್ಚಿನವರು ಹರಕೆ ಮಾಡಿಕೊಂಡು ಬರಿಗಾಲಿನಲ್ಲಿಯೇ ಪಾದಯಾತ್ರೆ ಮಾಡಿಕೊಂಡು ಬರುತ್ತಿರುವವರೇ ಜಾಸ್ತಿಯಾಗಿದ್ದಾರೆ. ಮೊದಲೆಲ್ಲ ದೂರದ ಊರುಗಳಿಂದ ಪಾದಯಾತ್ರೆ ಮಾಡಿಕೊಂಡು ಬರುವ ಭಕ್ತರಿಗೆ ದಾರಿಯುದ್ದಕ್ಕೂ ಜನ ಪ್ರಸಾದ, ಪಾನೀಯ ನೀಡುತ್ತಿದ್ದರು.
ಜಗದೊಡೆಯ ಶಿವಗೆ ನಮನ, ಮಹಾಶಿವರಾತ್ರಿಯ ಮಹತ್ವವೇನು?
ಆದರೆ ಕಳೆದ ಡಿಸೆಂಬರ್ 14 ರಲ್ಲಿ ಹನೂರು ತಾಲೂಕಿನ ಸುಳ್ವಾಡಿ ಕಿಚ್ಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ನಡೆದ ವಿಷ ಪ್ರಸಾದ ದುರಂತದ ಬಳಿಕ ಅಧಿಕಾರಿಗಳು ಪ್ರಸಾದ ನೀಡಲು ಅನುವು ಮಾಡಿಕೊಡುತ್ತಿಲ್ಲ. ಹೀಗಾಗಿ ಭಕ್ತರಿಗೆ ಹೊಟ್ಟೆ ಹಸಿದರೂ ಸೇವಿಸಲು ಯಾವುದೇ ಆಹಾರ ಸಿಗದಂತಾಗಿದೆ.
ಇದನ್ನು ಮನಗಂಡು ರಾಜ್ಯವಲ್ಲದೆ, ಹೊರ ರಾಜ್ಯಗಳಿಂದ ಬರುವ ಭಕ್ತರಿಗೆ ಮಾರ್ಗಮಧ್ಯೆ ಕುಡಿಯಲು ನೀರು, ಹಣ್ಣುಗಳನ್ನು ಉಚಿತವಾಗಿ ನೀಡಿ ಭಕ್ತರ ಆಯಾಸವನ್ನು ನೀಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಇನ್ನು ಮಹದೇಶ್ವರ ಬೆಟ್ಟಕ್ಕೆ ಹಿಂದಿನಿಂದಲೂ ರಾಮನಗರ ಜಿಲ್ಲೆಯ ಕನಕಪುರ ಮತ್ತು ಸುತ್ತ ಮುತ್ತಲಿನ ಗ್ರಾಮಸ್ಥರು ಹೆಚ್ಚಾಗಿ ಆಗಮಿಸುತ್ತಾರೆ.
ಹರಿಯುತ್ತಿರುವ ಹೆಚ್ಚುವರಿ ನೀರು
ಭಕ್ತರು ಹಗಲು ರಾತ್ರಿ ಎನ್ನದೆ ಕಾಡು ಮೇಡು ಲೆಕ್ಕಿಸದೆ ಮಹದೇಶ್ವರನ ನೆನೆಯುತ್ತಾ ಕಾವೇರಿ ನದಿ ಸಂಗಮವನ್ನು ದಾಟಿಕೊಂಡು ಬರುವುದು ಪವಾಡ ಪುರುಷನ ಪವಾಡವೇ ಆಗಿದೆ. ಈ ಬಾರಿ ನದಿಯಲ್ಲಿ ಹೆಚ್ಚುವರಿ ನೀರು ಹರಿಯುತ್ತಿರುವುದರಿಂದ ಭಕ್ತರಿಗೆ ತೊಂದರೆಯಾಗಿದೆ ಎನ್ನಲಾಗಿದೆ.
ಪಾದಯಾತ್ರಿಗಳೇ ಸಂಖ್ಯೆ ಹೆಚ್ಚು
ಮಹಾಶಿವರಾತ್ರಿಯಂದು ಪಾದಯಾತ್ರೆ ಮೂಲಕ ಮಹದೇಶ್ವರ ದರ್ಶನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಇರುವ ಕಾರಣ ವರ್ಷದಿಂದ ವರ್ಷಕ್ಕೆ ಪಾದಯಾತ್ರಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ಎಲ್ಲಿ ನೋಡಿದರಲ್ಲಿ ಪಾದಯಾತ್ರಿಗಳೇ ಕಂಡು ಬರುತ್ತಿದೆ.
ಅಭಿಷೇಕ ಪ್ರಿಯನಾದ ಶಿವನನ್ನು ಹೇಗೆ ಪೂಜಿಸಿದರೆ ಶ್ರೇಷ್ಠ?
ಹದ್ದಿನ ಕಣ್ಣಿಡಲು ಪೊಲೀಸರಿಗೆ ಸೂಚನೆ
ಬೆಟ್ಟದ ಆವರಣದಲ್ಲಿ ಹಾಗೂ ಆಸು ಪಾಸು ಮದ್ಯಪಾನ ಮತ್ತು ಧೂಮಪಾನವನ್ನು ನಿಷೇಧ ಮಾಡಲಾಗಿದ್ದು, ಮದ್ಯ ಸಾಗಾಣಿಕೆ ಮತ್ತು ಮಾರಾಟ ಮಾಡುವವರ ಮೇಲೆ ಹದ್ದಿನ ಕಣ್ಣು ಇಡಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಖಾಸಗಿ ಬಸ್ಗಳ ಸಂಚಾರಕ್ಕೆ ತಡೆ
ಜಾತ್ರಾ ವೇಳೆ ಯಾವುದೇ ರೀತಿಯಲ್ಲೂ ಭಕ್ತರಿಗೆ ಕೊರತೆ ಬಾರದಂತೆ ಹಾಗೂ ತೊಂದರೆಯಾದಂತೆ ಜಿಲ್ಲೆಯಾದ್ಯಂತ ಸುಮಾರು 350 ಕೆ.ಎಸ್.ಆರ್.ಟಿ.ಸಿ ಬಸ್ಗಳ ಸೌಲಭ್ಯ ಮಾಡಲಾಗಿದೆ. ಆದರೆ ಖಾಸಗಿ ಬಸ್ಗಳ ಸಂಚಾರಕ್ಕೆ ತಡೆ ಹಾಕಲಾಗಿದ್ದು, ಬೆಟ್ಟದ ಮಾರ್ಗಕ್ಕೆ ಆರ್.ಟಿ.ಓ ಪರವಾನಗಿ ಪಡೆದಿರುವ ಬಸ್ಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.
ಮಹಾ ಶಿವರಾತ್ರಿ ಆಚರಣೆಗೆ ಸಜ್ಜಾದ ಮೈಸೂರು, ದೇವಾಲಯಗಳಲ್ಲಿ ವಿಶೇಷ ಪೂಜೆ