ಬಂಡೀಪುರ ಕಾಡಂಚಿನ ಮದ್ದೂರು ಜನರ ಮುಗಿಯದ ಬವಣೆ
ಚಾಮರಾಜನಗರ, ಅಕ್ಟೋಬರ್ 12: ಕಾಡಂಚಿನಲ್ಲಿ ವಾಸಿಸುವ ಬಹುತೇಕ ಜನರ ಬದುಕು ದುಸ್ಥಿತಿಯಲ್ಲಿದೆ. ಮೂಲ ಸೌಕರ್ಯಗಳಾದ ರಸ್ತೆ, ನೀರು, ವಿದ್ಯುತ್, ಸೂರು ಯಾವುದೂ ಇಲ್ಲದೆ ಆದಿಮಾನವರಂತೆ ಜೀವನ ಮಾಡುವುದು ಕಂಡುಬರುತ್ತಿದೆ.
ದೇಶದಲ್ಲಿ ಸಹಸ್ರಾರು ಕಾಡಂಚಿನ ಸೌಲಭ್ಯವಂಚಿತ ಗ್ರಾಮಗಳಿದ್ದು, ಈ ಗ್ರಾಮದ ಜನರು ನಮ್ಮ ಜನಪ್ರತಿನಿಧಿಗಳಿಗೆ ಚುನಾವಣೆ ಬಂದಾಗ ಮಾತ್ರ ನೆನಪಾಗುತ್ತಾರೆ. ಅಷ್ಟೇ ಅಲ್ಲ ಇಂತಹ ಜನಕ್ಕೆ ಯಾವ ಸೌಲಭ್ಯ ಕಲ್ಪಿಸದಿದ್ದರೂ ತಮಗೆ ಅನುಕೂಲವಾಗುವಂತೆ ಚುನಾವಣೆ ಬಂದಾಗ ಮತ ಚಲಾಯಿಸಲು ಗುರುತಿನ ಚೀಟಿ ಮಾಡಿಕೊಡುತ್ತಾರೆ. ಉಳಿದಂತೆ ಒಂದಷ್ಟು ಭರವಸೆ ನೀಡಿ ಮತ ಹಾಕಿಸಿಕೊಳ್ಳುತ್ತಾರೆ. ನಂತರ ಆ ಕಡೆ ಮುಖ ಮಾಡುವುದಿಲ್ಲ. ಹೀಗಾಗಿಯೇ ಕಾಡಂಚಿನ ಬಹುತೇಕ ಗ್ರಾಮಗಳ ಜನ ಬಡವರಾಗಿಯೇ ಉಳಿದಿರುವುದು ದೇಶದಾದ್ಯಂತ ಕಂಡು ಬರುತ್ತಿದೆ.
ವೀಕೆಂಡ್ ನಲ್ಲಿ ಬಂಡೀಪುರ ಸಫಾರಿಯತ್ತ ಹೆಚ್ಚಾಗಿದೆ ಪ್ರವಾಸಿಗರ ಒಲವು
ಮೂರಾಬಟ್ಟೆಯಾದ ಜನರ ಬದುಕು
ಇವತ್ತು ನಾವು ಹೇಳಲು ಹೊರಟಿರುವುದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಮದ್ದೂರು ವಲಯದ ಕಾಡಂಚಿನ ಮದ್ದೂರು ಗ್ರಾಮದ ಬಗ್ಗೆ. ಈ ಗ್ರಾಮದ ಕಾಲೋನಿಯ ಜನರ ಬದುಕು ಮೂರಾಬಟ್ಟೆಯಾಗಿದ್ದು, ಇಲ್ಲಿನವರ ಸ್ಥಿತಿ ನೋಡಿದರೆ ಬೇಸರವಾಗುತ್ತದೆ. ಈ ಕಾಲೋನಿಗೆ ಭೇಟಿ ನೀಡಿದರೆ ಇಲ್ಲಿನ ಜನರ ಸಂಕಷ್ಟ ಅರಿವಾಗುತ್ತದೆ. ಕಾಲೋನಿಗೆ ತೆರಳಲು ಸೂಕ್ತ ರಸ್ತೆಯಿಲ್ಲ, ಕುಡಿಯಲು ನೀರಿಲ್ಲ, ಇಂದೋ ನಾಳೆಯೋ ಬಿದ್ದು ಹೋಗುವಂತಹ ಗುಡಿಸಲಲ್ಲೇ ವಾಸ. ಇನ್ನು ಆಧುನಿಕ ಸೌಲಭ್ಯವಂತೂ ಇಲ್ಲಿನವರಿಗೆ ತಲುಪಲೇ ಇಲ್ಲ. ಹೆಚ್ಚಿನ ಜನರು ಕೂಲಿಯನ್ನೇ ನಂಬಿ ಬದುಕುತ್ತಾರೆ. ಈ ಕಾಲೋನಿಯಲ್ಲಿ ಸುಮಾರು 130 ಕುಟುಂಬಗಳಿದ್ದು, ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.
ಭರವಸೆ ಈಡೇರಿಲ್ಲ... ಬವಣೆ ತಪ್ಪಿಲ್ಲ..
ಗ್ರಾಮವು ಬಂಡೀಪುರ ಅಭಯಾರಣ್ಯ ವ್ಯಾಪ್ತಿಗೆ ಒಳಪಡುವುದರಿಂದ ಜನಕ್ಕೆ ವನ್ಯ ಪ್ರಾಣಿಗಳ ಭಯ ಇದ್ದೇ ಇದೆ. ಇವುಗಳ ನಡುವೆಯೂ ಮಕ್ಕಳು ಶಾಲೆಗೆ ಹೋಗುತ್ತಾರೆ. ದೊಡ್ಡವರು ಹೊರಗೆ ಕೆಲಸಕ್ಕೆ ಹೋಗುತ್ತಾರೆ. ಎಷ್ಟೇ ದುಡಿದರೂ ಇವರಿಗೆ ಒಂದೊಳ್ಳೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಲೋನಿಯ ಅಭಿವೃದ್ಧಿ ಮಾಡುವ ಭರವಸೆಗಳು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಬಂದಿದ್ದರೂ ಯಾವುದೂ ಇದುವರೆಗೆ ಈಡೇರಿಲ್ಲ. ಪರಿಣಾಮ ಇಲ್ಲಿನ ಮಂದಿ ಮೊದಲು ಹೇಗಿದ್ದರೋ ಹಾಗೆಯೇ ಬದುಕುತ್ತಿದ್ದಾರೆ. 2018ರಲ್ಲಿ ಕಾಡಂಚಿನ ಗ್ರಾಮ ಮದ್ದೂರಿನ ಜನರ ಸಂಕಷ್ಟ ಅರಿತು, ಮೂಲ ಸೌಲಭ್ಯ ವಂಚಿತ ಈ ಗ್ರಾಮದ ಜನಕ್ಕೆ ಧೈರ್ಯ ತುಂಬುವ ಮತ್ತು ಗ್ರಾಮಕ್ಕೆ ಹಲವು ಸೌಲಭ್ಯ ಕಲ್ಪಿಸಿಕೊಡುವ ತೀರ್ಮಾನವನ್ನು ಆಗಿನ ಜಿಪಂ ಸಿಇಓ ಆಗಿದ್ದ ಡಾ. ಕೆ.ಹರೀಶ್ ಕುಮಾರ್ ಮಾಡಿದ್ದು, ಅದರಂತೆ ಅವರು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು.
ಬಂಡೀಪುರದಲ್ಲಿ ಆನೆ ಕಾರಿಡಾರ್ ನಿರ್ಮಾಣಕ್ಕೆ ಭೂಸ್ವಾಧೀನ?
ಅಧಿಕಾರಿಯಿಂದ ಮನೆ ಕಟ್ಟಿಸುವ ವಾಗ್ದಾನ
ಇಲ್ಲಿನ ಜನರೊಂದಿಗೆ ಬೆರೆತು ಕಾಲೋನಿಗೆ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳು, ಜನಕ್ಕೆ ತಲುಪಬೇಕಾದ ಸೌಲಭ್ಯಗಳ ಮಾಹಿತಿ ಪಡೆದರು. ಅಲ್ಲಿನ ಜನ ಅಧಿಕಾರಿ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು. ತಾವಿರುವ ಗುಡಿಸಲು ಶಿಥಿಲಗೊಂಡಿದೆ. ನಮಗೆ ಸರ್ಕಾರದಿಂದ ಮನೆ ಕಟ್ಟಿಸಿಕೊಡಿ ಎಂದು ಮನವಿ ಮಾಡಿಕೊಂಡರು. ಎಲ್ಲರ ಅಹವಾಲು ಸ್ವೀಕರಿಸಿದ ಅಧಿಕಾರಿ ಎಲ್ಲರ ಸಮಸ್ಯೆ ಈಡೇರಿಸುವ ಭರವಸೆ ನೀಡಿದರು. ಇದಾದ ನಂತರ ಸಿಇಓ ಬೇರೆಡೆಗೆ ವರ್ಗಾವಣೆಗೊಂಡಿದ್ದರಿಂದ ಮುಂದೆ ಬಂದವರು ಆ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ಇಲ್ಲಿನ ಜನರ ಕನಸು ನನಸಾಗಲೇ ಇಲ್ಲ.
Recommended Video
ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ
ಕಾಲೋನಿಯಲ್ಲಿ ವಾಸಿಸುವ ಬಹುತೇಕ ಕುಟುಂಬಗಳ ಮನೆ ಶಿಥಿಲಾವಸ್ಥೆ ತಲುಪಿವೆ. ಈ ಮನೆಗಳು ಯಾವಾಗ ಬೇಕಾದರೂ ಕುಸಿದು ಬೀಳಬಹುದು. ಹೀಗಾಗಿ ಇವರಿಗೊಂದು ಸೂಕ್ತ ಸೂರು ಒದಗಿಸಿಕೊಡುವ ಕೆಲಸವಾಗಬೇಕಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಈಗಾಗಲೇ ಗ್ರಾಮಕ್ಕೆ ಬಸ್ ಸಂಪರ್ಕ ನೀಡಲಾಗಿದ್ದು, ಗ್ರಾಮ ಪಂಚಾಯಿತಿಯಿಂದ ಕಾಲೋನಿಗೆ 12 ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುತ್ತಿದೆ. ಎರಡು ವರ್ಷಗಳಿಂದ ಸರ್ಕಾರದಿಂದ ಯಾವುದೇ ರೀತಿಯ ಹೊಸ ಮನೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ಇನ್ನು ಇಲ್ಲಿನ ಕೆಲವು ಬಡಾವಣೆಯಲ್ಲಿ ಚರಂಡಿ ಕಾಮಗಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಅದೇನೇ ಇರಲಿ ಸಂಬಂಧಿಸಿದ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಇಲ್ಲಿನ ಜನರಿಗೆ ಬದುಕಲು ಅನುಕೂಲವಾಗುವಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಿದೆ.