ನಗರಸಭೆ ಸದಸ್ಯರ ಮಧ್ಯಸ್ಥಿಕೆ, ಮನೆ ಬಿಟ್ಟು ಬಂದ ಪ್ರೇಮಿಗಳಿಗೆ ಮದುವೆ
ಮನೆ ಬಿಟ್ಟು ಬಂದ ಯುವ ಪ್ರೇಮಿಗಳಿಗೆ ನಗರಸಭೆ ಸದಸ್ಯರೊಬ್ಬರು ಗ್ರಾಮದ ಯಜಮಾನರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಮಾಡಿಸಿದ್ದಾರೆ.
ಕೊಳ್ಳೇಗಾಲ, ಅಕ್ಟೋಬರ್ 21: ವಿವಾಹಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮನೆ ಬಿಟ್ಟು ಬಂದ ಯುವ ಪ್ರೇಮಿಗಳಿಗೆ ನಗರಸಭೆ ಸದಸ್ಯರೊಬ್ಬರು ಗ್ರಾಮದ ಯಜಮಾನರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಮಾಡಿಸಿದ್ದಾರೆ.
ಪಟ್ಟಣದ ಹೊಸ ಅಣಗಳ್ಳಿ ಬಡಾವಣೆಯ ಮಹದೇವ ಎಂಬುವರ ಪುತ್ರಿ ಸಂಗೀತಾ (19) ಹಾಗೂ ದೊಡ್ಡಿಂದುವಾಡಿ ಗ್ರಾಮದ ಕೆಂಪರಾಜು ಎಂಬುವವರ ಪುತ್ರ ಕೀರ್ತಿರಾಜು (21) ಕಳೆದ ಐದು ವರ್ಷದಿಂದ ಪ್ರೀತಿಸುತ್ತಿದ್ದರು.
ಇವರಿಬ್ಬರು ಪರಸ್ಪರ ಪ್ರೀತಿಸುತ್ತಿರುವ ವಿಚಾರ ಮನೆಯಲ್ಲಿ ತಿಳಿದು, ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಒಬ್ಬರನೊಬ್ಬರು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ನಮಗೆ ಮದುವೆ ಮಾಡಿ ಎಂದು ಪ್ರೇಮಿಗಳಿಬ್ಬರು ನಗರಸಭೆ ಸದಸ್ಯ ರಾಮಕೃಷ್ಣ ಅವರಿಗೆ ಮನವಿ ಮಾಡಿಕೊಂಡಿದ್ದರು.[ಬೆಂಗಳೂರಲ್ಲಿ 27/65 'ಅಪೂರ್ವ'ವಾದ ಪ್ರೇಮವಿವಾಹ ಕಥೆ]
ಇಬ್ಬರಿಗೆ ಮದುವೆ ಮಾಡುವ ಭರವಸೆ ನೀಡಿದ ನಗರಸಭಾ ಸದಸ್ಯರಾದ ರಾಮಕೃಷ್ಣ ಅವರು ಎರಡು ಕಡೆಯ ಯಜಮಾನರೊಂದಿಗೆ ಮಾತನಾಡಿ, ಮನದಟ್ಟು ಮಾಡಿಸಿ ಅವರ ಸಹಕಾರದೊಂದಿಗೆ ಪ್ರೇಮಿಗಳನ್ನು ಉಪನೋಂದಣಿ ಕಚೇರಿಗೆ ಕರೆದೊಯ್ದು ವಿವಾಹ ನೋಂದಣಿ ಮಾಡಿಸುವ ಮೂಲಕ ಅವರಿಗೆ ದಾಂಪತ್ಯ ಜೀವನ ನಡೆಸಲು ಅನುಕೂಲ ಕಲ್ಪಿಸಿಕೊಡುವ ಮೂಲಕ ಆಶೀರ್ವದಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರೇಮಿಗಳಿಬ್ಬರು ಹಾರ ಬದಲಾಯಿಸಿಕೊಂಡರು. ದೊಡ್ಡಿಂದುವಾಡಿ ಗ್ರಾಮದ ಯಜಮಾನರಾದ ಕೆಂಪರಾಜು, ಶಿವರಾಮು, ಸಾವುಕಯ್ಯ, ಸುಂದರ್, ಉದಯ್, ಕೆಂಪಯ್ಯ, ರಾಜು, ಬಸವಲಿಂಗಪ್ಪ, ಮಹದೇವಯ್ಯ, ಹೊಸಅಣಗಳ್ಳಿ ಯಜಮಾನುರಾದ ಕೆಂಪಯ್ಯ, ದೊರೆರಾಜು, ಸಿದ್ದರಾಜು, ರಾಚಯ್ಯ, ನಾರಾಯಣ್ ಮೊದಲಾದವರು ವಿವಾಹ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.