ಮನೆಯಲ್ಲಿ ಪ್ರೀತಿಗೆ ಒಪ್ಪದ ಕಾರಣಕ್ಕೆ ಕೊಳ್ಳೇಗಾಲದ ಪ್ರೇಮಿಗಳು ಆತ್ಮಹತ್ಯೆಗೆ ಶರಣು
ಕೊಳ್ಳೇಗಾಲ, ಜೂನ್ 23: ಬದುಕಿ, ಬಾಳಿ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಳ್ಳುವ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಎಂದು ತಲೆ ಕೆಡಿಸಿಕೊಂಡ ಪ್ರೇಮಿಗಳಿಬ್ಬರು ತಮ್ಮ ಮದುವೆಗೆ ಮನೆಯವರು ಒಪ್ಪುವುದಿಲ್ಲ ಎಂದು ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಳ್ಳೇಗಾಲ ತಾಲೂಕಿನ ಗವಿರಾಯಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ.
ಉಗನಿ ಗ್ರಾಮದ ಮಹದೇವಮ್ಮ ಎಂಬುವವರ ಮಗಳು, ಕೊಳ್ಳೇಗಾಲ ಪಟ್ಟಣದ ಎಸ್.ವಿ.ಕೆ ಕಾಲೇಜಿನಲ್ಲಿ ಓದುತ್ತಿದ್ದ ಹದಿನೇಳು ವರ್ಷದ ಸಂಗೀತಾ ಮತ್ತು ಉಗನಿ ಗ್ರಾಮದ ನಾಗರಾಜು ಎಂಬುವವರ ಮಗ, ಇಪ್ಪತ್ಮೂರು ವರ್ಷದ ಕಿರಣ್ ಆತ್ಮಹತ್ಯೆ ಮಾಡಿಕೊಂಡ ಯುವ ಪ್ರೇಮಿಗಳು.
ಮದುವೆಯಾಗಲ್ಲ ಎಂದಿದ್ದಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದ ಯುವತಿ
ಇವರಿಬ್ಬರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರೀತಿಯಲ್ಲಿ ಬಿದ್ದ ಸಂಗೀತಾಗೆ ಓದುವ ಆಸಕ್ತಿಯೇ ಕಡಿಮೆಯಾಗಿತ್ತು. ಈ ಬಗ್ಗೆ ಮನೆಯಲ್ಲಿ ತಿಳಿದಿತ್ತು. ಈ ವಯಸ್ಸಿಗೆ ಪ್ರೀತಿ- ಪ್ರೇಮ, ಮದುವೆ ಎಂದು ತಲೆ ಕೆಡಿಸಿಕೊಳ್ಳದೆ ಓದುವಂತೆ ಬುದ್ಧಿವಾದ ಹೇಳಿದ್ದರು.
ಆದರೆ, ಪ್ರೇಮಿಗಳಿಬ್ಬರು ಹೆತ್ತವರು ತಮಗೆ ಮದುವೆ ಮಾಡುವುದಿಲ್ಲ ಎಂಬ ಕೋಪದಿಂದ ಮನೆಯಲ್ಲಿ ಹೇಳದೆ ಜೂನ್ ಹದಿನೆಂಟರಂದು ಮನೆ ಬಿಟ್ಟು ಬಂದವರು ಹಿಂತಿರುಗಿಲ್ಲ. ಮಕ್ಕಳು ಮನೆಗೆ ಬಾರದಿದ್ದಾಗ ಹೆತ್ತವರು ಹುಡುಕಾಟ ನಡೆಸಿದ್ದಾರೆ. ಆದರೆ ಎಲ್ಲಿಯೂ ಅವರ ಬಗ್ಗೆ ಸುಳಿವು ಸಿಗಲಿಲ್ಲ ಎನ್ನಲಾಗಿದೆ.
ಹೀಗೆ ಮನೆಯಿಂದ ಹೊರಗೆ ಹೋದ ಪ್ರೇಮಿಗಳಾದ ಸಂಗೀತಾ ಮತ್ತು ಕಿರಣ್, ನಾವಿಬ್ಬರು ಈ ಭೂಮಿ ಮೇಲೆ ಬದುಕಿ ಬಾಳೋಕೆ ಸಾಧ್ಯವಿಲ್ಲ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳೋಣ. ಸತ್ತಲ್ಲಾದರೂ ಜತೆಯಲ್ಲಿರೋಣ ಎಂಬ ತೀರ್ಮಾನಕ್ಕೆ ಬಂದಿದ್ದು, ವಿಷದ ಬಾಟಲಿಯೊಂದಿಗೆ ನೇರವಾಗಿ ಗವಿರಾಯಸ್ವಾಮಿ ಬೆಟ್ಟದ ತಪ್ಪಲಿಗೆ ಹೋಗಿದ್ದಾರೆ.
ಅಲ್ಲಿ ಒಂದಷ್ಟು ಹೊತ್ತು ಜತೆಗೆ ಕುಳಿತು ಮಾತನಾಡಿದ್ದಾರೆ. ಬಳಿಕ ಇಬ್ಬರೂ ವಿಷ ಸೇವಿಸಿ ಕೈ ಹಿಡಿದುಕೊಂಡು ಅಲ್ಲಿಯೇ ಹರಿಯುತ್ತಿದ್ದ ನೀರಿಗೆ ಧಮುಕಿ, ಸಾವನ್ನಪ್ಪಿದ್ದಾರೆ. ಶನಿವಾರ ಪ್ರೇಮಿಗಳು ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸಾರ್ವಜನಿಕರು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಪ್ರೇಮ ವೈಫಲ್ಯದಿಂದ ಸಾಯಲು ಹೋದ ಯುವಕನಿಗೆ ಕೊನೆ ಕ್ಷಣದಲ್ಲಿ ಜ್ಞಾನೋದಯ!
ವಿಷಯ ತಿಳಿದು ಸ್ಥಳಕ್ಕೆ ಬಂದ ಸಿಪಿಐ ಶ್ರೀಕಾಂತ್, ಎಸ್ ಐ ವನರಾಜು ಮತ್ತು ಸಿಬ್ಬಂದಿಯು ಶವಗಳನ್ನು ಕೊಳ್ಳೇಗಾಲ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲು ವ್ಯವಸ್ಥೆ ಮಾಡಿ, ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಶವಗಳನ್ನು ವಾರಾಸುದಾರರಿಗೆ ನೀಡಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.