ಚಾಮರಾಜನಗರದಲ್ಲಿ ಭೂಗರ್ಭ ಮ್ಯೂಸಿಯಂ ಸ್ಥಾಪನೆಗೆ ಸ್ಥಳ ಪರಿಶೀಲನೆ
ಚಾಮರಾಜನಗರ, ಅಕ್ಟೋಬರ್ 13: ಪ್ರಾಕೃತಿಕ ಭೂಗರ್ಭ ಮ್ಯೂಸಿಯಂ ಸ್ಥಾಪನೆ ಮಾಡಲು ಸ್ಥಳ ಪರಿಶೀಲನೆಗಾಗಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಅಧಿಕಾರಿಗಳು ಚಾಮರಾಜನಗರ ಸಮೀಪದ ಮಲ್ಲಯ್ಯನಪುರ ಗ್ರಾಮ ವ್ಯಾಪ್ತಿಯಲ್ಲಿ ಮೂರು ದಿನಗಳ ಭೂ ವೈಜ್ಞಾನಿಕ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಮಲ್ಲಯ್ಯನಪುರ ಗ್ರಾಮದ ವ್ಯಾಪ್ತಿಯಲ್ಲಿ ವಿಶಿಷ್ಟವಾದ ಖನಿಜಗಳು ಕಂಡು ಬಂದ ಕಾರಣ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅವರು ಸ್ಥಳಕ್ಕೆ ಭೇಟಿ ನೀಡಿ ಭೂಗರ್ಭ ಮ್ಯೂಸಿಯಂ ಸ್ಥಾಪನೆ ಮಾಡಲು ಕೋರಿ ಇಲಾಖೆಗೆ ಪತ್ರ ಬರೆದಿದ್ದರಲ್ಲದೇ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಆ ಬಳಿಕ ಭೂಗರ್ಭ ಮ್ಯೂಸಿಯಂ ಸ್ಥಾಪನೆ ಸಂಬಂಧ ಪರಿಶೀಲಿಸಿ ವರದಿ ನೀಡುವಂತೆ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ಪ್ರಧಾನ ನಿರ್ದೇಶಕರಿಗೂ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದರು.
ವೀಕೆಂಡ್ ನಲ್ಲಿ ಬಂಡೀಪುರ ಸಫಾರಿಯತ್ತ ಹೆಚ್ಚಾಗಿದೆ ಪ್ರವಾಸಿಗರ ಒಲವು
ಭೂವೈಜ್ಞಾನಿಕ ಸಮೀಕ್ಷೆ
ಚಾಮರಾಜನಗರ ಜಿಲ್ಲಾಧಿಕಾರಿಯವರ ಪತ್ರಕ್ಕೆ ಸ್ಪಂದಿಸಿದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ಹಿರಿಯ ಅಧಿಕಾರಿಗಳು, ತಾಂತ್ರಿಕ ಅಧಿಕಾರಿಗಳು ಹಾಗೂ ಭೂವಿಜ್ಞಾನಿಗಳನ್ನೊಳಗೊಂಡ ತಂಡವನ್ನು ಜಿಲ್ಲೆಗೆ ಕಳುಹಿಸಿಕೊಟ್ಟಿದ್ದರು. ಈ ತಂಡ ಕಳೆದ ಅಕ್ಟೋಬರ್ 8 ರಿಂದ 10 ರವರೆಗೆ ಒಟ್ಟು ಮೂರು ದಿನಗಳ ಕಾಲ ಚಾಮರಾಜನಗರ ತಾಲ್ಲೂಕಿನ ಮಲ್ಲಯ್ಯನಪುರ, ಗಾಳಿಪುರ, ಬದನಗುಪ್ಪೆ ಸುತ್ತಮುತ್ತ ಚಾಮರಾಜನಗರ ಜಿಲ್ಲೆಯ ತಾಂತ್ರಿಕ ಅಧಿಕಾರಿಗಳೊಡನೆ ಕ್ಷೇತ್ರ ಪ್ರವಾಸ ಕೈಗೊಂಡು ಭೂವೈಜ್ಞಾನಿಕ ಸಮೀಕ್ಷೆ ನಡೆಸಿದರು.
ಶಿಲಾಸ್ಥರಗಳ ಬಗ್ಗೆ ಹೆಚ್ಚಿನ ಜ್ಞಾನ
ಈ ಪ್ರದೇಶದಲ್ಲಿ ದೊರಕುವ ಶಿಲಾ ಸ್ಥರಗಳನ್ನು ಯಾಥಾಸ್ಥಿತಿಯಲ್ಲಿ ಸಂರಕ್ಷಿಸಿ, ಚಾಮರಾಜನಗರ ಜಿಲ್ಲೆ ಹಾಗೂ ರಾಜ್ಯಾದ್ಯಾಂತ ದೊರೆಯುವ ಎಲ್ಲಾ ಶಿಲಾ ಮಾದರಿಗಳನ್ನು ಸಂಗ್ರಹಿಸಿ ಈ ಸ್ಥಳದಲ್ಲಿ ಭೂಗರ್ಭ ಮ್ಯೂಸಿಯಂ ಸ್ಥಾಪಿಸುವುದರಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಭೂಗರ್ಭ ಹಾಗೂ ಶಿಲಾಸ್ಥರಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ನೀಡಲು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ
ಸದರಿ ಮ್ಯೂಸಿಯಂ ಸ್ಥಾಪಿಸಲು ಉದ್ದೇಶಿಸಿರುವ ಪ್ರದೇಶದಲ್ಲಿ ಫೆಲಿಸೈಟ್, ಗ್ರಾನೈಟ್, ಫಚ್ ಸೈಟ್, ಕ್ವಾರ್ಟ್ಜೈಟ್, ಡೋಲ ರೈಟ್ ಡೈಕ್, ಸ್ಪೋಕಿ ಕ್ವಾರ್ಟ್, ಪೆಗ್ಮಟೈಟ್, ಗಾರ್ನೆಟ್, ಐರನ್ ಬಂಡ್ ಸೇರಿದಂತೆ ಇತರೆ ಶಿಲಾ ಸ್ಥರಗಳು ಇರುವುದು ದೃಢಪಟ್ಟಿದೆ. ಈ ಪ್ರದೇಶದಲ್ಲಿ ಲಭ್ಯವಿರುವ ಶಿಲಾಸ್ಥರಗಳಿಂದ ಶಿಲಾ ಮಾದರಿಗಳನ್ನು ಭೂವೈಜ್ಞಾನಿಕ ಸಮೀಕ್ಷೆ, ವಿಶ್ಲೇಷಣೆಗಾಗಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
Recommended Video
ಮ್ಯೂಸಿಯಂ ಸ್ಥಾಪನೆಗೆ ಅವಕಾಶ
ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಅಧಿಕಾರಿಗಳು ತಾಂತ್ರಿಕ ವರದಿಯನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಿದ್ದಾರೆ. ವರದಿ ಬಂದ ನಂತರ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯನ್ನು ಬಳಸಿಕೊಂಡು ಭೂಗರ್ಭ ಮ್ಯೂಸಿಯಂ ಸ್ಥಾಪನೆಗೆ ಅವಕಾಶ ಲಭಿಸಬಹುದೆಂಬ ನಿರೀಕ್ಷೆ ಇದೆ ಎಂದು ಚಾಮರಾಜನಗರ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.