ಕರಡಿ ಮರಿಗಳ ಸಾವಿಗೆ ಕಲುಷಿತ ನೀರು ಕಾರಣವೇ?
ಚಾಮರಾಜನಗರ,ಜನವರಿ 28: ಕಲುಷಿತ ನೀರು ಸೇವನೆಯಿಂದ ವಾರದೊಳಗೆ ಎರಡು ಕರಡಿಗಳು ಸಾವನ್ನಪ್ಪಿರುವ ಧಾರುಣ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿದೆ.
ಬಂಡೀಪುರ ಹುಲಿ ಯೋಜನೆಯ ಎರೆಕಟ್ಟೆಯ ಬಳಿ ಜ.23ರಂದು 2 ವರ್ಷ ವಯಸ್ಸಿನ ಗಂಡು ಕರಡಿ ಮರಿಯು ಸಾವಿಗೀಡಾಗಿತ್ತು. ಇದು ಸಾವನ್ನಪ್ಪಿದ ಬೆನ್ನಲ್ಲೇ ಶುಕ್ರವಾರ ಸಂಜೆ ಬಂಡೀಪುರ ಸಫಾರಿ ವಲಯದ ಇನ್ನೊಂದು ಹೆಣ್ಣು ಕರಡಿ ಸಾವಿಗೀಡಾಗಿದೆ.
ಈ ಕರಡಿ ಮರಿಗಳ ಸಾವಿಗೆ ಕಲುಷಿತ ನೀರು ಸೇವನೆ ಕಾರಣ ಎಂದು ಹೇಳಲಾಗಿದೆ. ಪಶುವೈದ್ಯ ಡಾ.ನಾಗರಾಜು ಕರಡಿ ಮರಿಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ನಂತರ ಅಂತ್ಯಕ್ರಿಯೆ ನಡೆಸಲಾಗಿದೆ.
ಮರಣೋತ್ತರ ಪರೀಕ್ಷೆ ವೇಳೆ ಎರಡು ಕರಡಿಮರಿಗಳ ಹೊಟ್ಟೆಯಲ್ಲಿ ಯಾವುದೇ ಆಹಾರವಿಲ್ಲದಿರುವುದು ಕಂಡುಬಂದಿದ್ದು ಅಲ್ಸರ್ ರೋಗದಿಂದ ಆಹಾರ ಸೇವನೆ ಮಾಡದ ಪರಿಣಾಮವಾಗಿ ನಿತ್ರಾಣಗೊಂಡು ಸಾವಿಗೀಡಾಗಿರಬಹುದು ಎಂದು ವಲಯಾರಣ್ಯಾಧಿಕಾರಿ ಗೋವಿಂದರಾಜು ಮಾಹಿತಿ ನೀಡಿದ್ದಾರೆ. ಆದರೆ ಕೆಲವರು ಅರಣ್ಯದಲ್ಲಿ ನೀರಿನ ತೊಂದರೆಯಿಂದ ಕಲುಷಿತ ನೀರು ಕುಡಿದು ಕರಡಿ ಮರಿಗಳು ಸಾವನ್ನಪ್ಪಿವೆ ಎಂದು ಹೇಳುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೆ ನೈಜ ಕಾರಣ ತಿಳಿದು ಬರಬೇಕಿದೆ.