ಚಾಮರಾಜನಗರ; ವಿವಾಹ ನಿಗದಿಯಾಗಿದ್ದ ಲೈನ್ಮ್ಯಾನ್ ಸಾವು
ಚಾಮರಾಜನಗರ, ಜೂನ್ 01: ಟಿಸಿ ದುರಸ್ತಿ ವೇಳೆ ವಿದ್ಯುತ್ ಕಂಬದಿಂದ ಆಯತಪ್ಪಿ ಬಿದ್ದು ಜೂನಿಯರ್ ಪವರ್ ಮ್ಯಾನ್ (ಲೈನ್ ಮನ್) ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಸುಳ್ವಾಡಿಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದ ಪ್ರಶಾಂತ್ ಹೀರೆಮಠ (28) ಮೃತ ದುರ್ದೈವಿ. ಸುಳ್ವಾಡಿ ಸಮೀಪದ ವಿದ್ಯುತ್ ಪರಿವರ್ತಕವನ್ನು ಸರಿಪಡಿಸುತ್ತಿದ್ದಾಗ ಏಕಾಏಕಿ ಕಂಬದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದರು. ಕೂಡಲೇ ಆಸ್ಪತ್ರೆಗೆ ರವಾನಿಸಲು ಮುಂದಾದರೂ ಸಾವನ್ನಪ್ಪಿದ್ದಾರೆ.
ವಿವಾಹ ನಿಶ್ಚಿತಾರ್ಥ ಬಳಿಕ ಮದುವೆ ಜೀವನದಲ್ಲಿ ಬಹಳ ಮುಖ್ಯವಾದ ಹಂತ. ಆದರೆ ಮದುವೆ ಮುನ್ನವೇ ಈ ದುರಂತ ನಡೆದಿರುವುದು ಕುಟುಂಬಸ್ಥರಿಗೆ ಆಘಾತ ಉಂಟು ಮಾಡಿದೆ. ಹನೂರು ಚೆಸ್ಕಾಂನಲ್ಲಿ ಕಿರಿಯ ಪವರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಶಾಂತ್ಗೆ 15 ದಿನಗಳ ಹಿಂದೆ ನಿಶ್ಚಿತಾರ್ಥವಾಗಿತ್ತು. ಮುಂದಿನ ತಿಂಗಳು ವಿವಾಹವೂ ನಡೆಯಬೇಕಿತ್ತು.
ಬುಧವಾರ ಬೆಳಗ್ಗೆ 12 ಗಂಟೆ ಸಮಯದಲ್ಲಿ ವಿದ್ಯುತ್ ದುರಸ್ತಿಗಾಗಿ ಕಂಬವೇರಿದ್ದಾಗ ಪ್ರಶಾಂತ್ ಆಯತಪ್ಪಿ ಕೆಳಗೆ ಬಿದ್ದು ಈ ದುರ್ಘಟನೆ ನಡೆದಿದ್ದು, ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತರುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಸುಸಜ್ಜಿತ ಆಸ್ಪತ್ರೆ ನಿರ್ಮಾಣ; ಹನೂರು ತಾಲ್ಲೂಕು ಕೇಂದ್ರದಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡದೇ ಇರುವುದರಿಂದಲೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಸಿಗದೆ ಸಾವು ನೋವುಗಳಿಗೆ ಕಾರಣವಾಗುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸೆಸ್ಕ್ ಕೊಳ್ಳೇಗಾಲ ಉಪ ವಿಭಾಗಧ ಎಇ, ಜೆಇ ಭೇಟಿ ಕೊಟ್ಟಿದ್ದಾರೆ. ಪರಿಹಾರ ನೀಡುವ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ.