ಬಂಡೀಪುರ ವ್ಯಾಪ್ತಿಯಲ್ಲಿ ಕಾಡುಹಂದಿಗೆ ಚಿರತೆ ಬಲಿ
ಚಾಮರಾಜನಗರ, ಮಾರ್ಚ್ 9: ಜಿಲ್ಲೆಯಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿದ್ದು, ಮನುಷ್ಯರ ಮೇಲೆ ದಾಳಿ ಮಾಡುತ್ತಿರುವುದಲ್ಲದೆ, ತಿಂಗಳೊಳಗೆ ಬಂಡೀಪುರ ಹುಲಿಯೋಜನೆ ವ್ಯಾಪ್ತಿಯಲ್ಲಿ ಎರಡು ಚಿರತೆ ಮರಿಗಳನ್ನು ಬಲಿ ಪಡೆದಿವೆ.
ಇದೀಗ ಬಂಡೀಪುರ ಹುಲಿ ಯೋಜನೆಯ ಕಾಡಂಚಿನಲ್ಲಿ ಕಾಡುಹಂದಿ ದಾಳಿಗೆ ಆರು ತಿಂಗಳ ಚಿರತೆ ಮರಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಈ ಚಿರತೆ ಮರಿ ಸಾವಿಗೆ ಕಾಡುಹಂದಿಯೇ ಕಾರಣ ಎಂದು ಆರ್ಎಫ್ ಓ ನವೀನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಶ್ವ ವನ್ಯಜೀವಿ ದಿನ: ಕಣ್ಮನಸೆಳೆವ ವನ್ಯಪ್ರಪಂಚದ 10 ಚಿತ್ರಗಳು
ಹುಲಿ ಯೋಜನೆಯ ಓಂಕಾರ್ ವಲಯದ ಮಂಚಹಳ್ಳಿ ಹಾಗೂ ಕೋಟೆಕೆರೆ ನಡುವೆ ಇರುವ ರಂಗಸ್ವಾಮಿ ಎಂಬುವರ ಜಮೀನಿನ ಬಳಿ ಆರು ತಿಂಗಳ ಹೆಣ್ಣು ಚಿರತೆ ಕಳೇಬರ ಕಂಡು ಬಂದಿದೆ. ಕಾಡುಹಂದಿಗಳು ದಾಳಿ ನಡೆಸಿ, ಇದನ್ನು ಕೊಂದಿವೆ.
ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕಳೇಬರವನ್ನು ಸುಟ್ಟುಹಾಕಲಾಗಿದೆ. ಕಳೆದ ಫೆಬ್ರವರಿ 17ರಂದು ಗುಡ್ಡದ ಇನ್ನೊಂದು ಬದಿಯಲ್ಲಿ ಕಾಡುಹಂದಿ ದಾಳಿಯಿಂದ ಚಿರತೆಮರಿ ಸಾವನ್ನಪ್ಪಿತ್ತು.
ಈ ವ್ಯಾಪ್ತಿಯಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿದ್ದು, ರೈತರು ಕೂಡ ಭಯಪಡುವಂತಾಗಿದೆ. ಈಗಾಗಲೇ ರೈತರೊಬ್ಬರ ಮೇಲೆ ದಾಳಿ ನಡೆಸಿ, ಆಸ್ಪತ್ರೆಗೆ ಸೇರುವಂತೆ ಮಾಡಿವೆ.
ಕಾಡಾನೆ, ಹುಲಿ, ಚಿರತೆಗಳೊಂದಿಗೆ ಈಗ ಕಾಡುಹಂದಿಗಳು ಉಪಟಳ ನೀಡುತ್ತಿದ್ದು, ಕಾಡಂಚಿನ ರೈತರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆಯಿಂದ ಕಾಡುಹಂದಿಗಳಿಗೆ ಕಡಿವಾಣ ಹಾಕದಿದ್ದರೆ ರೈತರು ನೆಮ್ಮದಿಯಾಗಿ ಬದುಕುವುದು ಅಸಾಧ್ಯ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.