ಚಾಮರಾಜನಗರ; ಬಾವಿಗೆ ಬಿದ್ದಿದ್ದ ಚಿರತೆ ಏಣಿ ಏರಿ ಪರಾರಿ
ಚಾಮರಾಜನಗರ, ಜೂನ್ 22: ಆಹಾರ ಅರಸಿ ಬಂದಿದ್ದ ಚಿರತೆಯೊಂದು ಪಾಳು ಬಾವಿಗೆ ಬಿದ್ದು ಮೇಲೇರಿ ಬರಲಾರದೆ ಮೂರು ದಿನಗಳ ಕಾಲ ಬಾವಿಯೊಳಗೆ ಆಶ್ರಯ ಪಡೆದಿತ್ತು. ಅರಣ್ಯ ಇಲಾಖೆ ರಕ್ಷಿಸಲು ನಡೆಸಿದ ಕಾರ್ಯಾಚರಣೆಯೂ ವಿಫಲವಾಗಿತ್ತು. ಆದರೆ ಅರಣ್ಯ ಇಲಾಖೆ ಮಾಡಿದ ಉಪಾಯ ಇದೀಗ ಫಲಪ್ರದವಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಕಾಡಿನಿಂದ ಆಹಾರ ಅರಸಿಕೊಂಡು ಬಂದಿದ್ದ ಚಿರತೆಯೊಂದು ರಾತ್ರಿ ವೇಳೆ ದಾರಿ ಕಾಣದೆ ಗುಂಡ್ಲುಪೇಟೆ ತಾಲೂಕಿನ ಹಸಗೂಲಿಯ ನಿವಾಸಿ ನಿಂಗರಾಜಪ್ಪ ಎಂಬುವರ ಜಮೀನಿನಲ್ಲಿದ್ದ ಪಾಳುಬಾವಿಗೆ ಬಿದ್ದಿತ್ತು. ಆಳವಿದ್ದ ಕಾರಣ ಮೇಲೇರಿ ಬರಲಾರದೆ ಅಲ್ಲಿಯೇ ಸಿಕ್ಕಿಕೊಂಡಿತ್ತು. ಆದರೆ ಇದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಒಂದು ಉಪಾಯ ಮಾಡಿದ್ದರು. ಆ ಉಪಾಯ ಏನು? ಆ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಗುಂಡ್ಲುಪೇಟೆಯಲ್ಲಿ ಮನೆಯೊಳಗೇ ಅಡಗಿ ಕುಳಿತಿದ್ದ ಚಿರತೆ!
ಚಿರತೆಯನ್ನು ಬಾವಿನಿಂದ ಹೊರ ತೆಗೆಯುವುದೇ ಕಷ್ಟವಾಗಿತ್ತು
ಚಿರತೆ ಬಾವಿಗೆ ಬಿದ್ದಿದ್ದ ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಮೂರು ದಿನಗಳ ಕಾಲ ಶ್ರಮವಹಿಸಿ ಕಾರ್ಯಾಚರಣೆ ನಡೆಸಿದರೂ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಈ ನಡುವೆ ಜನರ ಗದ್ದಲವೂ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಈ ಚಿರತೆ ಬಾವಿಯ ಸಿಮೆಂಟ್ ಪೈಪ್ ನಡುವಿನ ಸ್ಥಳದಲ್ಲಿ ಅವಿತು ಕೂತಿದ್ದರಿಂದ ಅದಕ್ಕೆ ಅರಿವಳಿಕೆ ನೀಡಿ ಸೆರೆ ಹಿಡಿಯುವುದು ಕೂಡ ಕಷ್ಟವಾಗಿತ್ತು. ಇನ್ನು ಬೋನು ಇಟ್ಟು, ಸಿಮೆಂಟ್ ಪೈಪುಗಳನ್ನು ಕತ್ತರಿಸಿ ಪೊಟರೆಯೊಳಗೆ ನೀರು ಹರಿಸಿದರೂ ಚಿರತೆ ಹೊರಬಂದಿರಲಿಲ್ಲ. ಹೀಗಾಗಿ ಚಿರತೆಯನ್ನು ಬಾವಿಯಿಂದ ಹೊರಕ್ಕೆ ತೆಗೆಯುವುದು ಕಷ್ಟವಾಗಿತ್ತು.
ಏಣಿ ಇಟ್ಟ ಅರಣ್ಯ ಇಲಾಖೆ
ಈ ನಡುವೆ ಚಿರತೆ ಸೆರೆಗೆ ಅರಣ್ಯ ಇಲಾಖೆ ಬಾವಿಯೊಳಗೆ ಬೋನು ಇರಿಸಿ ಏಣಿ ಹಾಗೂ ಬಲೆಯನ್ನು ಕಟ್ಟಿ, ಅದರ ಚಲನವಲನ ಪತ್ತೆಗೆ ಕ್ಯಾಮೆರಾ ಅಳವಡಿಸಿತ್ತು. ಕಳೆದ ಮೂರು ದಿನಗಳಿಂದ ಹೊರಬರದ ಚಿರತೆ ಇದೀಗ ರಾತ್ರಿ ವೇಳೆಯಲ್ಲಿ ಏಣಿ ಹಾಗೂ ಬಲೆಯನ್ನೇರಿ ಬಾವಿಯಿಂದ ಹೊರಬಂದು ಕಾಡಿನತ್ತ ಓಟಕಿತ್ತಿದೆ. ಇದು ಅರಣ್ಯ ಇಲಾಖೆ ಇರಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜನ ನೆಮ್ಮದಿಯುಸಿರು ಬಿಟ್ಟಿದ್ದಾರೆ.
"ಜನರ ಗದ್ದಲದಿಂದ ಚಿರತೆ ಬರಲಿಲ್ಲ"
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಆರ್.ಎಫ್.ಓ. ಡಾ.ಲೋಕೇಶ್ ಅವರು, ಜನತೆ ಮೊದಲ ದಿನವೇ ಸಮರ್ಪಕ ಸಹಕಾರ ನೀಡಿದ್ದರೆ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿದು ಬೇರೆಡೆಗೆ ಒಯ್ದು ಬಿಡಲು ಸಾಧ್ಯವಾಗುತ್ತಿತ್ತು. ಆದರೆ ಜನ ಸೇರಿ ಗದ್ದಲ ಏರ್ಪಟ್ಟ ಕಾರಣ ಚಿರತೆ ಭೀತಿಯಿಂದ ಅವಿತುಕೊಂಡು ಹೊರಗೆ ಬರಲಿಲ್ಲ.
ಜನರಲ್ಲಿ ಚಿರತೆ ದಾಳಿ ಆತಂಕ
ಇದೀಗ ಚಿರತೆ ಬಾವಿಯಿಂದ ಹೊರಬಂದು ಕಾಡಿನತ್ತ ಮುಖ ಮಾಡಿದ್ದರೂ ಮತ್ತೆ ಈ ವ್ಯಾಪ್ತಿಯಲ್ಲಿ ಅಡ್ಡಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮತ್ತೆ ಚಿರತೆ ಬಂದರೆ ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಬೋನು ಇರಿಸಲಾಗಿದೆ ಎಂದು ಹೇಳಿದ್ದಾರೆ. ಸದ್ಯ ಚಿರತೆ ಬಾವಿಯಿಂದ ಹೊರಬಂದಿದ್ದರಿಂದ ಜನರಲ್ಲಿ ನೆಮ್ಮದಿ ಮನೆ ಮಾಡಿದೆ. ಆದರೆ ಇದು ಇದೇ ವ್ಯಾಪ್ತಿಯಲ್ಲಿ ಅಡ್ಡಾಡಿ ಮತ್ತೆ ಆತಂಕ ಸೃಷ್ಟಿ ಮಾಡಿದರೂ ಅಚ್ಚರಿ ಪಡಬೇಕಾಗಿಲ್ಲ.