ಗುಂಡ್ಲುಪೇಟೆ ಪಟ್ಟಣದಲ್ಲೇ ಪ್ರತ್ಯಕ್ಷವಾದ ಚಿರತೆ
ಚಾಮರಾಜನಗರ, ಜುಲೈ 29: ಕಾಡಿನಿಂದ ಚಿರತೆಗಳು ನಾಡಿನತ್ತ ಬರುವುದು ಹೊಸತೇನಲ್ಲ. ಆದರೆ ಇದೀಗ ಕೆಲವು ಚಿರತೆಗಳು ಪಟ್ಟಣದ ಆಸುಪಾಸಿಗೆ ನುಗ್ಗಿ ನಾಯಿ, ಮೇಕೆ, ಜಾನುವಾರುಗಳನ್ನು ಸುಲಭವಾಗಿ ಬೇಟೆಯಾಡುತ್ತಿವೆ.
Recommended Video
ಜಿಲ್ಲೆಯಾದ್ಯಂತ ಕಾಡಂಚಿನ ಗ್ರಾಮ, ಪಟ್ಟಣಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಕೆಲವೊಂದನ್ನು ಸೆರೆ ಹಿಡಿದು ಕಾಡಿಗೆ ಬಿಡುತ್ತಿದ್ದರೂ ಉಪದ್ರವ ಮಾತ್ರ ಕಡಿಮೆಯಾಗಿಲ್ಲ. ಆದರೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಕೇಂದ್ರದಲ್ಲಿಯೇ ಚಿರತೆ ಕಾಣಿಸಿಕೊಳ್ಳುವ ಮೂಲಕ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಕಳೆದ ಕೆಲವು ದಿನಗಳಿಂದ ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಿರುವ ವ್ಯಾಪ್ತಿಯ ಮಹದೇವಪ್ರಸಾದ್ ಬಡಾವಣೆ, ಜಾಕೀರ್ ಹುಸೇನ್ ಬಡಾವಣೆಯಲ್ಲಿ ಪ್ರತ್ಯಕ್ಷವಾಗುತ್ತಿರುವ ಚಿರತೆಯೊಂದು ಹಸುವೊಂದನ್ನು ತಿಂದು ಜನರಲ್ಲಿ ಭಯವನ್ನುಂಟು ಮಾಡಿದೆ. ಈ ಚಿರತೆಯನ್ನು ಬಡಾವಣೆಯಲ್ಲಿ ನೋಡಿದ ಜನ ಭಯಭೀತರಾಗಿದ್ದಾರೆ.
ಎಚ್.ಡಿ.ಕೋಟೆ; 3 ದಿನಗಳ ನಂತರ ಬಾವಿಯಿಂದ ಚಿರತೆಗೆ ಸಿಕ್ಕಿತು ಮುಕ್ತಿ
ಇಲ್ಲಿ ಸಾರ್ವಜನಿಕ ಆಸ್ಪತ್ರೆಯಿದ್ದು, ಜನ ಓಡಾಡುತ್ತಿರುತ್ತಾರೆ. ಹೀಗಿರುವಾಗ ಚಿರತೆ ದಾಳಿ ಮಾಡಿದರೆ ಏನು ಮಾಡುವುದು ಎಂದು ಪ್ರಶ್ನಿಸುತ್ತಿರುವ ಜನ ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಚಿರತೆಯನ್ನು ಸೆರೆಹಿಡಿಯಬೇಕೆಂದು ಇಲ್ಲಿನ ಜನರು ಮನವಿ ಮಾಡಿದ್ದಾರೆ.
ಜನರ ಒತ್ತಾಯದ ಮೇರೆಗೆ ಸ್ಥಳಪರಿಶೀಲನೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಪಟ್ಟಣದ ಸರ್ಕಾರಿ ಆಸ್ಪತ್ರೆ ಸಮೀಪ ಬೋನ್ ಇಟ್ಟು ಚಿರತೆಯನ್ನು ಸೆರೆ ಹಿಡಿಯಲು ಕ್ರಮ ಕೈಗೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಚಿರತೆ ಬೋನಿಗೆ ಬೀಳುವ ತನಕ ಈ ವ್ಯಾಪ್ತಿಯ ಜನಕ್ಕೆ ನೆಮ್ಮದಿ ಇಲ್ಲದಂತಾಗಿದೆ.