ಪರಿಷತ್ ಫೈಟ್; ಚುನಾವಣಾ ಸಿಬ್ಬಂದಿ ವಿರುದ್ಧ ಶಾಸಕರು ಗರಂ
ಚಾಮರಾಜನಗರ, ಜೂ 13: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಚಾಮರಾಜನಗರ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಜಿಲ್ಲೆಯ ನಾಲ್ವರು ಶಾಸಕರು ತಮ್ಮ ಹಕ್ಕು ಚಲಾಯಿಸಿದರು.
ಚಾಮರಾಜನಗರ ಶಾಸಕ ಯಳಂದೂರು ತಾಲೂಕು ಕಚೇರಿಯಲ್ಲಿ, ಕೊಳ್ಳೇಗಾಲದ ಶಾಸಕ ಎನ್. ಮಹೇಶ್ ಹಾಗೂ ಹನೂರು ಶಾಸಕ ಆರ್. ನರೇಂದ್ರ ಮತ್ತು ಗುಂಡ್ಲುಪೇಟೆಯಲ್ಲಿ ಗುಂಡ್ಲುಪೇಟೆ ಶಾಸಕ ಸಿ. ಎಸ್. ನಿರಂಜನ ಕುಮಾರ್, ಚಾಮರಾಜನಗರದಲ್ಲಿ ಮಾಜಿ ಸಂಸದ ಆರ್. ಧ್ರುವನಾರಾಯಣ ಮತ ಚಲಾಯಿಸಿದರು.
ಬ್ಯಾಲೆಟ್ ಪೇಪರ್ನಲ್ಲಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು ಸಿಬ್ಬಂದಿ ಕೊಟ್ಟಿರುವ ಪೆನ್ನಲ್ಲಿ ಬರೆದರೇ ಸರಿಯಾಗಿ ಕಾಣುವುದೇ ಇಲ್ಲ, ನಾವು ಯಾರಿಗೇ ಮತದಾನ ಮಾಡಿದ್ದೇವೆಂದು ಗೊತ್ತಾಗುವುದು ಹೇಗೆ? ಎಂದು ಶಾಸಕ ಪುಟ್ಟರಂಗಶೆಟ್ಟಿ ಮತಗಟ್ಟೆ ಸಿಬ್ಬಂದಿ ವಿರುದ್ಧ ಹರಿಹಾಯ್ದರು.
ಅಧಿಕಾರಿಗಳು ಉತ್ತರಿಸಿ, ನಾವು ತಂದಿರುವುದಲ್ಲ ಸರ್ ಇಲಾಖೆಯೇ ಕೊಟ್ಟಿರುವ ಪೆನ್ ಇದು ಎಂದು ಸಿಬ್ಬಂದಿ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು. ಆದರೂ ಪುಟ್ಟರಂಗಶೆಟ್ಟಿ ಕೋಪ ತಣಿಯಲಿಲ್ಲ, ಅಸಮಾಧಾನದಿಂದಲೇ ಮತದಾನ ಮಾಡಿ ಮತಗಟ್ಟೆಯಿಂದ ನಿರ್ಗಮಿಸಿದರು.
ಎನ್. ಮಹೇಶ್ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷಗಳ ನಡುವೆಯೇ ಸೆಣಸಾಟ; ದಕ್ಷಿಣ ಪದವೀಧರ ಕ್ಷೇತ್ರದಿಂದ ರಾಜ್ಯ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಕ್ಷೇತ್ರ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳನ್ನು ಒಳಗೊಂಡಿದೆ.
ಬಿಜೆಪಿಯ ಮೈ. ವಿ. ರವಿಶಂಕರ್, ಜೆಡಿಎಸ್ ಎಚ್. ಕೆ. ರಾಮು, ಕಾಂಗ್ರೆಸ್ ಮಧು ಜಿ. ಮಾದೇಗೌಡ ಹಾಗೂ ರೈತಸಂಘ, ದಲಿತ ಸಂಘರ್ಷ ಸಮಿತಿಗಳು, ಪ್ರಗತಿಪರ ಸಂಘಟನೆಗಳು, ಆಮ್ ಆದ್ಮಿ ಪಕ್ಷದ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಎನ್. ಗೌಡ ನಡುವೆ ಸ್ಪರ್ಧೆ ಇದೆ.
ರಾಮು, ಮಧು ಜಿ. ಮಾದೇಗೌಡ, ಪ್ರಸನ್ನ ಎನ್. ಗೌಡ ಮೂವರು ಒಕ್ಕಲಿಗ ಸಮಾಜದವರು. ರವಿಶಂಕರ್ ಬ್ರಾಹ್ಮಣ ಸಮಾಜಕ್ಕೆ ಸೇರಿದ್ದಾರೆ. ಮಾಜಿ ಶಾಸಕ ವಾಟಾಳ್ ನಾಗರಾಜ್, ಎಸ್ಡಿಪಿಐ ರಫತ್ ಉಲ್ಲಾಖಾನ್, ಆರ್ಪಿಐ ಪಕ್ಷದಿಂದ ಎನ್. ವೀರಭದ್ರಸ್ವಾಮಿ, ಪಕ್ಷೇತರ ಅಭ್ಯರ್ಥಿ ವಿನಯ್ ಕಣದಲ್ಲಿದ್ದಾರೆ.
ಬಿಎಸ್ಪಿಯು ಡಾ. ಬಿ. ಎಚ್. ಚನ್ನಕೇಶವಮೂರ್ತಿಗೆ ಸಕಾಲದಲ್ಲಿ ಬಿ.ಫಾರಂ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.