ಅಭಯಾರಣ್ಯಗಳಿಗೆ ಕಂಟಕವಾಗಿ ಬೆಳೆಯುತ್ತಿರುವ ಲಂಟನಾ!
ಚಾಮರಾಜನಗರ, ಡಿಸೆಂಬರ್ 28: ಕುರುಚಲು ಕಾಡು ಸಹಿತ ಹೆಮ್ಮರಗಳಿಂದ ಕೂಡಿದ್ದ ಬಹುತೇಕ ಅರಣ್ಯಗಳು ಇತ್ತೀಚೆಗೆ ಸಂಭವಿಸಿದ ಕಾಡ್ಗಿಚ್ಚಿನಿಂದಾಗಿ ಬೋಳಾಗಿವೆ. ಇಂತಹ ಬೋಳು ಅರಣ್ಯಗಳಲ್ಲೀಗ ಹುಲ್ಲು ಕುರುಚಲು ಗಿಡಗಳ ಬದಲಿಗೆ ಲಂಟನಾ ಬೆಳೆಯಲು ಆರಂಭಿಸಿದ್ದು ಅರಣ್ಯಗಳಿಗೆ ಮಾರಕವಾಗುತ್ತಿದೆ.
ಕೆಲವು ವರ್ಷಗಳ ಹಿಂದೆ ಅರಣ್ಯಗಳಲ್ಲಿ ಬೆಳೆದು ನಿಂತಿದ್ದ ಬಿದಿರು ಮೆಳೆಗಳು ಹೂ ಬಿಟ್ಟು ನಾಶವಾದ ಕಾರಣ ಜತೆಗೆ ಕಾಡ್ಗಿಚ್ಚಿನಿಂದ ಅರಣ್ಯ ಬೋಳಾಗಿ ಕುರುಚಲು ಕಾಡು ಹಾಗೂ ಹುಲ್ಲು ಬೆಳೆಯುವ ಪ್ರದೇಶದಲ್ಲೀಗ ಲಂಟನಾ ಬೆಳೆಯಲಾರಂಭಿಸಿದ್ದು, ಇದರಿಂದ ಸಸ್ಯಹಾರಿ ವನ್ಯ ಪ್ರಾಣಿಗಳಿಗೆ ಆಹಾರದ ಸಮಸ್ಯೆ ಎದುರಾಗಿದ್ದು ನಾಡಿನತ್ತ ಮುಖಮಾಡುವಂತಾಗುತ್ತಿದೆ. ಈಗಾಗಲೇ ಬಂಡೀಪುರದ ಹಲವೆಡೆ ಲಂಟನಾ ತೆರವುಗೊಳಿಸಿ ಹುಲ್ಲು ಬೆಳೆಸುವ ಪ್ರಯೋಗವನ್ನು ಮಾಡಲಾಗುತ್ತಿದೆ.
ಕಬಿನಿ ಹಿನ್ನೀರಿನಲ್ಲಿ ವಿದೇಶಿ ಅತಿಥಿಗಳ ಕಲರವ...
ಅರಣ್ಯದಲ್ಲಿ ಸಮಸ್ಯೆ ತಂದೊಡ್ಡಿರುವ ಲಂಟನಾ
ಲಂಟನಾವನ್ನು ಅಳಿಸಿ ಹುಲ್ಲು ಇನ್ನಿತರ ಕುರುಚಲು ಕಾಡುಗಳನ್ನು ಬೆಳೆಯುವಂತೆ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಏಕೆಂದರೆ ಲಂಟನಾ ಮತ್ತು ಪಾರ್ಥೇನಿಯಂ ಇಡೀ ಅರಣ್ಯವನ್ನು ಅಕ್ರಮಿಸಿ ಬೆಳೆಯುವುದರಿಂದಾಗಿ ಹುಲ್ಲು ಸೇರಿದಂತೆ ಯಾವ ಸಸ್ಯವೂ ಅಲ್ಲಿ ಬೆಳೆಯುವುದಿಲ್ಲ. ಜತೆಗೆ ಲಂಟನಾ ಹಬ್ಬಿ ಬೆಳೆಯುವ ಸಸ್ಯವಾಗಿರುವುದರಿಂದ ಯಾವುದೇ ಸಸ್ಯಗಳನ್ನು ಬೆಳೆಯಲು ಬಿಡುವುದಿಲ್ಲ. ಅಷ್ಟೇ ಅಲ್ಲ ಪೊದೆಯಂತೆ ಹಬ್ಬಿ ಬೆಳೆಯುವುದರಿಂದ ಇದರೊಳಗೆ ಸಿಕ್ಕಿ ಕೊಳ್ಳುವ ಗಿಡ, ಮರ, ಗಾಳಿ ಬೆಳಕಿಲ್ಲದೆ ಬೆಳವಣಿಗೆ ಕುಂಠಿತಗೊಂಡು ಸಾಯುತ್ತವೆ. ಹೀಗಾಗಿ ಇದು ಅರಣ್ಯಕ್ಕೂ ಕಂಠಕ ಎಂದರೆ ತಪ್ಪಾಗಲಾರದು.
ಇಡೀ ಅರಣ್ಯವನ್ನು ವ್ಯಾಪಿಸಿದೆ
ಮೊದಲೆಲ್ಲ ಬಂಡೀಪುರದ ಕೆಲವೇ ಕೆಲವು ಭಾಗದಲ್ಲಿದ್ದ ಲಂಟನಾ ಮತ್ತು ಪಾರ್ಥೇನಿಯಂ ಇವತ್ತು ಬಹುತೇಕ ಅರಣ್ಯವನ್ನು ವ್ಯಾಪಿಸಿ ಬೆಳೆದಿದೆ. ಬಂಡೀಪುರಕ್ಕೆ ಬರುವ ಪ್ರವಾಸಿಗರನ್ನು ಅರಣ್ಯ ಪ್ರದೇಶದೊಳಕ್ಕೆ ಸಫಾರಿಗೆ ಕರೆದೊಯ್ಯುವ ವಾಹನಗಳ ಚಕ್ರಕ್ಕೆ ಅಂಟಿಕೊಂಡು ಲಂಟನಾ ಒಂದೆಡೆಯಿಂದ ಮತ್ತೊಂದೆಡೆಗೆ ಬೀಜ ಪ್ರಸಾರವಾಗಿ, ಇವತ್ತು ಇಡೀ ಅರಣ್ಯವನ್ನು ವ್ಯಾಪಿಸಿಕೊಂಡು ಬೆಳೆಯತೊಡಗಿದೆ. ಬರೀ ಬಂಡೀಪುರ ಮಾತ್ರವಲ್ಲದೆ ಬಹುತೇಕ ಅರಣ್ಯಗಳನ್ನು ಲಂಟನಾ ವ್ಯಾಪಿಸುತ್ತಿದೆ. ಸಾಮಾನ್ಯವಾಗಿ ಮಳೆಬಿದ್ದಾಗ ಗರಿಕೆಹುಲ್ಲು ಸೇರಿದಂತೆ ಹಲವು ಜಾತಿಯ ಸಣ್ಣಪುಟ್ಟ ಸಸ್ಯಗಳು ಬೆಳೆಯುತ್ತವೆ. ಇವುಗಳನ್ನು ತಿಂದು ಪ್ರಾಣಿಗಳು ಬದುಕುತ್ತವೆ.
ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರು ಬೇಕು
ಲಂಟನಾ ಮತ್ತು ಪಾರ್ಥೇನಿಯಂ ಯಥೇಚ್ಛವಾಗಿ ಬೆಳೆಯುತ್ತಿರುವುದರಿಂದ ಮೇವಿಗೂ ಕೊರತೆಯಾಗಿ ಅರಣ್ಯದಿಂದ ಪ್ರಾಣಿಗಳು ಹೊರಗೆ ಬರಬೇಕಾದ ಸ್ಥಿತಿ ಎದುರಾಗಿದೆ. ಜತೆಗೆ ಬೇಸಿಗೆ ಬಂತೆಂದರೆ ಇವು ಒಣಗಿ ಕಾಡ್ಗಿಚ್ಚು ವ್ಯಾಪಿಸಲು ಕಾರಣವಾಗುತ್ತಿದೆ. ಈಗ ಭಾರೀ ಪ್ರಮಾಣದಲ್ಲಿ ಬೆಳೆದಿರುವ ಲಂಟನಾವನ್ನು ತೆರವುಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಹಲವು ವರ್ಷಗಳಿಂದ ಅವುಗಳ ತೆರವು ಕಾರ್ಯ ನಡೆಸುತ್ತಾ ಬಂದಿದ್ದರೂ ಪ್ರಯೋಜನವಾಗುತ್ತಿಲ್ಲ. ಇನ್ನು ಲಂಟನಾವನ್ನು ಬೇರು ಸಹಿತ ಕಿತ್ತು ತೆಗೆದು ಅರಣ್ಯದಿಂದ ಹೊರಕ್ಕೆ ಸಾಗಿಸಿ ನಾಶ ಮಾಡಬೇಕಿದೆ. ಇದೆಲ್ಲ ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರು ಬೇಕು. ಜತೆಗೆ ಕೋಟ್ಯಂತರ ರೂ. ಅನುದಾನ ಬೇಕಾಗುತ್ತದೆ.
ವೈಜ್ಞಾನಿಕವಾಗಿ ಲಂಟನಾ ತೆರವಿಗೆ ಚಿಂತನೆ ಅಗತ್ಯ
ಲಂಟನಾದಿಂದ ಬುಟ್ಟಿ, ಟೀಪಾಯಿ, ಪೆನ್ನು ಮುಂತಾದ ಆಕರ್ಷಕ ವಸ್ತುಗಳನ್ನು ತಯಾರಿಸಬಹುದಾದರೂ, ಅರಣ್ಯದಿಂದ ಹೊರಗೆ ಕೊಂಡೊಯ್ಯಲು ಕಾನೂನಿನ ಪ್ರಕಾರ ಸಾಧ್ಯವಿಲ್ಲ. ಹೀಗಾಗಿ ತೆರವುಗೊಳಿಸಿದ ಲಂಟಾನವನ್ನು ರಾಶಿ ಮಾಡಲಾಗಿರುವ ಪ್ರದೇಶದಲ್ಲಿಯೇ ಸುಟ್ಟು ಹಾಕಬೇಕಾಗುತ್ತದೆ. ಹೀಗೆ ಮಾಡಿದರೂ ಬೀಜ ಪ್ರಸಾರ ಬಹುಬೇಗನೇ ನಡೆಯುವುದರಿಂದ ಮಳೆಗಾಲದಲ್ಲಿ ಮತ್ತೆ ಹುಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ವೈಜ್ಞಾನಿಕವಾಗಿ ಲಂಟನಾ ತೆರವುಗೊಳಿಸುವತ್ತ ಸರ್ಕಾರ ಗಮನಹರಿಸುವುದರೊಂದಿಗೆ ಅರಣ್ಯದಲ್ಲಿ ಪ್ರಾಣಿ ಪಕ್ಷಿಗಳಿಗೆ ಮೇವು ಒದಗಿಸುವಂತಹ ಗಿಡಮರಗಳನ್ನು ಬೆಳೆಯುತ್ತ ಚಿಂತನೆ ನಡೆಸಬೇಕಾಗಿದೆ. ಇದು ಅಷ್ಟು ಸುಲಭವಾಗಿ ಆಗುವ ಕೆಲಸವಲ್ಲ ಆದರೆ ಸತತ ಪ್ರಯತ್ನವಂತು ಮಾಡಲೇ ಬೇಕಾಗುತ್ತದೆ. ಇದಕ್ಕೆ ಎಲ್ಲರ ಸಹಕಾರವೂ ಅಗತ್ಯವಾಗಿದೆ.