ಬಂಡೀಪುರದಲ್ಲಿ ಆನೆ ಕಾರಿಡಾರ್ ನಿರ್ಮಾಣಕ್ಕೆ ಭೂಸ್ವಾಧೀನ?
ಚಾಮರಾಜನಗರ, ಸೆಪ್ಟೆಂಬರ್ 1: ಬಂಡೀಪುರ ಅರಣ್ಯದಂಚಿನಲ್ಲಿರುವ ರೈತರು ಕಾಡಾನೆಗಳ ಹಾವಳಿಯಿಂದಾಗಿ ಸಂಕಷ್ಟ ಅನುಭವಿಸುತ್ತಲೇ ಇದ್ದಾರೆ. ಕಾಡಾನೆ ಮತ್ತು ಮಾನವನ ಸಂಘರ್ಷ ಮುಂದುವರಿಯುತ್ತಲೇ ಇದೆ. ಇದನ್ನು ತಡೆಯಲು ಇರುವ ಒಂದೇ ಮಾರ್ಗವೆಂದರೆ ಆನೆ ಕಾರಿಡಾರ್ ಸ್ಥಾಪನೆ ಮಾಡುವುದು.
Recommended Video
ಈಗಾಗಲೇ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಣಿಯನಪುರ ವ್ಯಾಪ್ತಿಯಲ್ಲಿ ಆನೆ ಕಾರಿಡಾರ್ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದ್ದು, ಈ ಸಂಬಂಧ ಸುತ್ತಮುತ್ತಲ ಸುಮಾರು 106 ಎಕರೆ ಅರಣ್ಯ ಭೂಮಿಯನ್ನು ರೈತರಿಂದ ಸ್ವಾಧೀನ ಪಡಿಸಿಕೊಳ್ಳಲು ಅರಣ್ಯ ಇಲಾಖೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಎಲ್ಲವೂ ಸರಿಹೋದರೆ ಆನೆ ಕಾರಿಡಾರ್ ನಿರ್ಮಾಣವಾಗುವ ಎಲ್ಲ ಸಾಧ್ಯತೆಯೂ ಇದೆ.
ಕಣಿಯನಪುರ ವ್ಯಾಪ್ತಿಯಲ್ಲಿ ಆನೆ ಕಾರಿಡಾರ್
ಬಂಡೀಪುರ ಅಭಯಾರಣ್ಯ ಮತ್ತು ತಮಿಳುನಾಡಿನ ಮಧುಮಲೈ ಅರಣ್ಯಗಳ ನಡುವಿನ ಆನೆಗಳು ಸೇರಿದಂತೆ ಇತರ ವನ್ಯಜೀವಿಗಳ ಸುಗಮ ಸಂಚಾರಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಅನಿವಾರ್ಯವಾಗಲಿದೆ. ಈ ಭೂಮಿಯೇ ಕಣಿಯನಪುರ ಆನೆ ಕಾರಿಡಾರ್ ಆಗಲಿದೆ. ಈ ಆನೆ ಕಾರಿಡಾರ್ ನಿರ್ಮಾಣವಾಗಿದ್ದೇ ಆದರೆ ಈ ಭಾಗದಲ್ಲಿನ ಮಾನವ ವನ್ಯಜೀವಿ ಸಂಘರ್ಷ ಪ್ರಕರಣಗಳನ್ನು ತಡೆಯಲು ಸಾಧ್ಯವಾಗಲಿದೆ. ಜತೆಗೆ ರೈತರಿಗೂ ಕಾಡಾನೆಗಳ ಹಾವಳಿಯಿಂದ ಮುಕ್ತಿ ದೊರೆಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಹೊರಹಾಕಿದ್ದಾರೆ.
ಇನ್ಮುಂದೆ ಬಂಡೀಪುರದಲ್ಲಿ ಸಸ್ಯಾಹಾರಿ ಪ್ರಾಣಿಗಳಿಗಿಲ್ಲ ಆಹಾರದ ಚಿಂತೆ
600 ಎಕರೆಗೂ ಹೆಚ್ಚು ಭೂಮಿ ಅವಶ್ಯಕ
ಕಣಿಯನಪುರ ಆನೆ ಕಾರಿಡಾರ್ ಗೆ ಸುಮಾರು 600 ಎಕರೆಗೂ ಹೆಚ್ಚು ಭೂಮಿ ಅಗತ್ಯವಿದೆ. ಪ್ರಸ್ತುತ 106 ಎಕರೆ ಭೂಮಿಯನ್ನು ನೀಡಲು ಸ್ಥಳೀಯ ರೈತರು ಮುಂದೆ ಬಂದಿದ್ದು, ಇತರೆ ರೈತರೊಂದಿಗೆ ಜಮೀನು ನೀಡುವ ಸಂಬಂಧ ಚರ್ಚೆ ನಡೆಸಲಾಗುತ್ತಿದೆ. ರೈತರು ಮುಂದೆ ಬಂದಲ್ಲಿ ಅವರಿಗೆ ಪರಿಹಾರ ಕಲ್ಪಿಸಿ ಜಮೀನನ್ನು ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಆರ್. ಬಾಲಚಂದ್ರ ಮಾಹಿತಿ ನೀಡಿದ್ದಾರೆ.
ರೈತರು ನೆಮ್ಮದಿ ಜೀವನ ನಡೆಸಬಹುದು
ಬಂಡೀಪುರ ಮತ್ತು ಮಧುಮಲೈ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳಿಂದ ರೈತರ ಬೆಳೆ ನಾಶ ಮಾಡುವ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬರುತ್ತಿವೆ. ಕಾರಿಡಾರ್ ನಿರ್ಮಾಣದ ಬಳಿಕ ಈ ರೀತಿಯ ಘಟನೆಗಳು ನಡೆಯುವುದಿಲ್ಲ. ರೈತರು ನೆಮ್ಮದಿ ಜೀವನ ನಡೆಸಬಹುದು. ಈ ಕಾರಿಡಾರ್ ನಿರ್ಮಾಣದಿಂದ ಸುಮಾರು 500 ಮೀಟರ್ ಪ್ರದೇಶ ವನ್ಯಜೀವಿಗಳಿಗೆ ಲಭ್ಯವಾಗಲಿದೆ ಎಂದು ವಿವರಿಸಿದ್ದಾರೆ. ಅರಣ್ಯ ಇಲಾಖೆಗೆ ಜಮೀನು ನೀಡುವವರಿಗೆ ಪರಿಹಾರ ನೀಡಬೇಕಾಗುತ್ತದೆ. ಇಲ್ಲವೇ, ಪರ್ಯಾಯವಾಗಿ ಭೂಮಿ ನೀಡುವ ಸಂಬಂಧ ಚರ್ಚೆ ನಡೆಯುತ್ತಿದೆ. ಈ ಎರಡರಲ್ಲಿ ಯಾವುದಾದರೂ ಒಂದನ್ನು ನೀಡಲು ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಶೀಘ್ರದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ಮನವಿ ಮಾಡಲಾಗುತ್ತಿದೆ.
ಬಂಡೀಪುರದಲ್ಲಿ ಏಳು ಸಾವಿರ ಎಕರೆ ಅರಣ್ಯ ಒತ್ತುವರಿಯಾಗಿದೆಯೇ?
ಭೂಸ್ವಾಧೀನ ಕ್ರಮಗಳ ಕುರಿತು ಪರಿಶೀಲನೆ
ಕಣಿಯನಪುರ ಆನೆ ಕಾರಿಡಾರ್ ಗೆ ಸೇರಿರುವ ಖಾಸಗಿ ಜಮೀನುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜಮೀನುಗಳು ಇವೆ. ಈ ಜಮೀನುಗಳನ್ನು ಪರಿಶಿಷ್ಟ ಪಂಗಡ ಮತ್ತು ಜಾತಿಗಳ (ಕೆಲವು ಜಮೀನುಗಳ ವರ್ಗಾವಣೆ ಕಾಯಿದೆ) ಅಡಿ ಹಸ್ತಾಂತರಿಸಲು ಅವಕಾಶವಿಲ್ಲ. ಈ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅರಣ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಒಟ್ಟಾರೆ, ಆನೆ ಕಾರಿಡಾರ್ ನಿರ್ಮಾಣವಾಗಿದ್ದೇ ಆದರೆ ಇದುವರೆಗೆ ನಡೆಯುತ್ತಿದ್ದ ಕಾಡಾನೆಗಳ ಉಪಟಳಕ್ಕೆ ತೆರೆಬೀಳಲಿದ್ದು, ವನ್ಯಪ್ರಾಣಿ- ಮಾನವ ಸಂಘರ್ಷವೂ ಕಡಿಮೆಯಾಗುವ ಸಾಧ್ಯತೆ ಇದೆ ಎಂದರೆ ತಪ್ಪಾಗಲಾರದು. ಸದ್ಯ ಈ ಸಂಬಂಧ ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ಯಾವ ರೀತಿ ಕಾರ್ಯ ರೂಪಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.