ನರೇಗಾದಿಂದ ಚಾಮರಾಜನಗರದ ಕೆರೆಗಳಿಗೆ ಮರುಜೀವ ಬಂತು
ಚಾಮರಾಜನಗರ, ಮೇ 22: ಸ್ಥಳೀಯ ಕೂಲಿ ಕಾರ್ಮಿಕರಿಗೆ ಕೆಲಸ ಕೊಡುವುದು ಅನಿವಾರ್ಯವಾಗಿರುವ ಕಾರಣ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸ್ಥಳೀಯವಾಗಿ ಕೆರೆಗಳ ದುರಸ್ತಿ ಮತ್ತು ಪುನಶ್ಚೇತನ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವುದರಿಂದ ಅವಸಾನದಂಚಿಗೆ ತಲುಪಿದ ಕೆರೆಗಳಿಗೆ ಮರುಜೀವ ಬಂದಂತಾಗಿದೆ.
ಒಂದು ಕಾಲದಲ್ಲಿ ಗ್ರಾಮೀಣ ಪ್ರದೇಶಗಳ ನೀರಿನ ಆಸರೆಯಾಗಿದ್ದ ಕೆರೆ ಕಟ್ಟೆಗಳು ನಂತರದ ದಿನಗಳಲ್ಲಿ ಸರ್ಕಾರದ ನಿರ್ಲಕ್ಷ್ಯಕ್ಕೆ ತುತ್ತಾಗಿ ದುರಸ್ತಿಯಿಲ್ಲದೆ, ಗಿಡಗಂಟಿ ಬೆಳೆದು ಮುಚ್ಚಿ ಹೋಗಿದ್ದವು. ಜತೆಗೆ ಸಮರ್ಪಕವಾಗಿ ಮಳೆ ಬಾರದ ಕಾರಣದಿಂದ ಕೆರೆಕಟ್ಟೆಗಳಲ್ಲಿ ನೀರು ತುಂಬುತ್ತಿರಲಿಲ್ಲ. ಇದರಿಂದ ಬಹಳಷ್ಟು ಕೆರೆಗಳು ಪ್ರಭಾವಿಗಳ ಕೈಗೆ ಸಿಕ್ಕಿ ಜಮೀನು, ತೋಟಗಳಾಗಿದ್ದರೆ, ಮತ್ತೆ ಕೆಲವು ಗೋಮಾಳಗಳಾಗಿದ್ದವು.
ನಿರ್ಲಕ್ಷ್ಯಕ್ಕೆ ತುತ್ತಾಗಿದ್ದ ಕೆರೆಗಳು
ಕಾಲಕ್ಕೆ ತಕ್ಕಂತೆ ಕೆರೆಗಳಲ್ಲಿ ತುಂಬುವ ಹೂಳನ್ನು ತೆಗೆದು ದುರಸ್ತಿಗೊಳಿಸಿದ್ದರೆ ಕೆರೆಗಳು ಪಾಳು ಬೀಳುತ್ತಿರಲಿಲ್ಲ. ಆದರೆ ಹೂಳು ತೆಗೆದು ಕೆರೆಯ ಹದ್ದು ಬಸ್ತು ಗುರುತಿಸಿ, ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಾಡದ ಕಾರಣದಿಂದಾಗಿ ಕೆರೆಗಳು ಅವಸಾನದ ಅಂಚಿಗೆ ತಲುಪಿದ್ದವು. ಇತ್ತೀಚೆಗಿನ ವರ್ಷಗಳಲ್ಲಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಬಂದ ಬಳಿಕ ಬರಡಾಗಿದ್ದ ಬಹಳಷ್ಟು ಕೆರೆಗಳಿಗೆ ನೀರು ತುಂಬಿಸಿದ್ದರಿಂದ ಕೆರೆಗಳ ಅಸ್ತಿತ್ವ ಉಳಿದುಕೊಂಡಿದೆ. ಜತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲದ ಮಟ್ಟವೂ ಹೆಚ್ಚಾಗಿದೆ.
ಲಾಕ್ ಡೌನ್; ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ನೆರವಾದ ನರೇಗಾ
ಬಡ ಕಾರ್ಮಿಕರಿಗೆ ಸ್ಥಳೀಯವಾಗಿ ಕೆಲಸ
ಈಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬಹಳಷ್ಟು ಕಡೆಗಳಲ್ಲಿ ಕೆರೆಗಳಲ್ಲಿರುವ ಹೂಳು ತೆಗೆದು, ಬೆಳೆದು ನಿಂತ ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಇದರಿಂದ ಬಡ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಕೆಲಸ ಸಿಗುತ್ತಿದ್ದು, ಕೆರೆಗಳು ದುರಸ್ತಿಯಾಗುತ್ತಿರುವುದರಿಂದ ಸುತ್ತಮುತ್ತಲ ಗ್ರಾಮೀಣ ಜನರಿಗೂ ಅನುಕೂಲವಾಗಿದೆ.
ಕೆರೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯ
ಮಳೆ ಸಮರ್ಪಕವಾಗಿ ಆಗದೆ ಕೆಲವು ವರ್ಷಗಳ ಕಾಲ ಬರದಿಂದ ತತ್ತರಿಸಿದ್ದ ಚಾಮರಾಜನಗರದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಮಳೆ ಸುರಿದಿದ್ದರಿಂದ ಕೆಲವು ಕೆರೆಗಳು ತುಂಬಿವೆ. ಜತೆಗೆ ನದಿಯಿಂದ ನೀರು ಹರಿಸಿ ಬತ್ತಿ ಹೋಗಿದ್ದ ಕೆರೆಕಟ್ಟೆಗಳಲ್ಲಿ ನೀರು ತುಂಬುವಂತೆ ಮಾಡಲಾಗಿದೆ. ಆದರೂ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೆಲವು ಕೆರೆಗಳು ಪಾಳುಬಿದ್ದಿವೆ. ಇಂತಹ ಕೆರೆಗಳ ಪೈಕಿ ಗುಂಡ್ಲುಪೇಟೆಯ ಕಲಿಗೌಡನಹಳ್ಳಿ ವ್ಯಾಪ್ತಿಗೆ ಒಳಪಡುವ ಒಗರಕಟ್ಟೆಯೂ ಒಂದಾಗಿದ್ದು, ಇದೀಗ ಈ ಕೆರೆಯನ್ನು ಪುನಶ್ಚೇತನಗೊಳಿಸುವ ಕಾರ್ಯವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಾಡಲಾಗುತ್ತಿದೆ.
ಕೊರೊನಾ ಸಂಕಷ್ಟದಲ್ಲಿ ಗ್ರಾಮೀಣ ಜನರಿಗೆ ನೆರವಾದ ನರೇಗಾ
ಬರಿದಾದ ಒಗರಕಟ್ಟೆಗೆ ಪುನಶ್ಚೇತನ
ಹೂಳು ತುಂಬಿ ಕೆರೆ ಪಾಳು ಬಿದ್ದಿದ್ದರಿಂದ ಗಿಡಗಂಟಿಗಳು ಬೆಳೆದುನಿಂತು ಕೆರೆ ಮುಚ್ಚಿಹೋಗಿತ್ತು. ಆದರೀಗ ಗಿಡಗಂಟಿಗಳನ್ನು ಕಡಿದು ತೆರವುಗೊಳಿಸಿ ಮಣ್ಣನ್ನು ತೆಗೆದು ಏರಿಯನ್ನು ಗಟ್ಟಿಗೊಳಿಸಿ ಒಗರಕಟ್ಟೆಯನ್ನು ಭದ್ರಗೊಳಿಸುವ ಕೆಲಸವನ್ನು ಮಾಡಲಾಗುತ್ತಿದೆ. ಇದರಿಂದ ಮುಂದಿನ ಮಳೆಗಾಲದ ವೇಳೆಯಲ್ಲಿ ಒಂದಷ್ಟು ನೀರು ಸಂಗ್ರಹವಾಗುವುದರೊಂದಿಗೆ ಗ್ರಾಮದ ಜನ ಜಾನುವಾರುಗಳಿಗೆ ಸಹಕಾರಿಯಾಗಲಿದೆ. ಜತೆಗೆ ಜಲಸಂರಕ್ಷಣೆ, ಅಂತರ್ಜಲ ಹೆಚ್ಚಳವೂ ಆಗಲಿದೆ. ಈಗಾಗಲೇ ಜಿಲ್ಲೆಯಾದ್ಯಂತ ಇಂತಹ ಕಾಮಗಾರಿಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.