ಮಹದೇಶ್ವರ ಬೆಟ್ಟದಲ್ಲಿ ಹಸಿವು ನೀಗಿಸಿದ ಮಾದಪ್ಪನ ಲಾಡು
ಚಾಮರಾಜನಗರ, ಮಾರ್ಚ್ 28: ಮಲೆಮಹದೇಶ್ವರ ದೇವಾಲಯಕ್ಕೆ ಯುಗಾದಿ ಹಬ್ಬದ ವೇಳೆ ಆಗಮಿಸುವ ಭಕ್ತರಿಗಾಗಿ ಈ ಬಾರಿ ಸುಮಾರು ಎಪ್ಪತ್ತೆರಡು ಸಾವಿರ ಲಾಡುಗಳನ್ನು ತಯಾರಿಸಲಾಗಿತ್ತು. ಆದರೆ ಕೊರೊನ ವೈರಸ್ ಹಿನ್ನೆಲೆಯಲ್ಲಿ ದೇವಾಲಯಕ್ಕೆ ನಿರ್ಬಂಧ ವಿಧಿಸಬೇಕಾಯಿತು.
ಈ ಕಾರಣಕ್ಕೆ ಭಕ್ತರು ಬಾರದ್ದರಿಂದ ಇದೀಗ ಪ್ರಾಧಿಕಾರದ ವತಿಯಿಂದ ಸುತ್ತಮುತ್ತಲ ಜನರಿಗೆ, ಕೋತಿಗಳಿಗೆ ಆ ಲಾಡುಗಳನ್ನು ವಿತರಿಸುವ ಮೂಲಕ ಹಸಿವು ನೀಗಿಸುವ ಕೆಲಸ ಮಾಡಲಾಗುತ್ತಿದೆ. ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಗಡಿಭಾಗದ ಪ್ರವಾಸಿ ತಾಣ ಹೊಗೇನಕಲ್ ಫಾಲ್ಸ್ ಪ್ರವಾಸಿಗರಿಲ್ಲದೆ, ಬಿಕೋ ಎನ್ನುತ್ತಿದೆ. ಈ ವ್ಯಾಪ್ತಿಯಲ್ಲಿರುವ ಕೆಲವು ಮನೆಗಳ ಮಂದಿ ಪರದಾಡುವಂತಾಗಿದೆ. ಜತೆಗೆ ಇಲ್ಲಿರುವ ಕೋತಿಗಳು ಕೂಡ ಆಹಾರ ಸಿಗದೆ ಹಸಿವಿನಲ್ಲಿ ಕಾಲ ಕಳೆಯುವಂತಾಗಿದೆ.
ಪ್ರವಾಸಿ ತಾಣಕ್ಕೆ ಬರುವ ಪ್ರವಾಸಿಗರನ್ನೇ ನಂಬಿ ಕೆಲವು ಕುಟುಂಬಗಳು ಬದುಕುತ್ತಿವೆ. ಆದರೆ ಇದೀಗ ಲಾಕ್ ಡೌನ್ ಆಗಿರುವ ಕಾರಣ ಅತ್ತ ಕಡೆ ಯಾರನ್ನೂ ಬಿಡುತ್ತಿಲ್ಲ. ಇನ್ನು ಈ ವ್ಯಾಪ್ತಿಯ ಕಾಡಂಚಿನ ಜನರು ಕೂಡ ಬೇರೆ ಕಡೆ ಹೋಗಲಾಗದೆ ಕಷ್ಟದಲ್ಲಿ ಸಿಲುಕಿದ್ದಾರೆ. ಇದನ್ನರಿತು ಮಲೆಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಹೊಗೇನಕಲ್ ಜಲಪಾತದ ಬಳಿಯ ಮನೆಗಳಿಗೆ ತೆರಳಿ ಉಚಿತ ಲಾಡುಗಳನ್ನು ವಿತರಿಸಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿದ್ದ ಕೋತಿಗಳು ಹಸಿವಿನಿಂದ ಬಳಲಿದ್ದನ್ನು ಗಮನಿಸಿ ಅವುಗಳಿಗೆ ನೀಡಿದ್ದಾರೆ. ಈ ವೇಳೆ ಸುತ್ತಮುತ್ತಲಿದ್ದ ಕೋತಿಗಳೆಲ್ಲವೂ ಮುತ್ತಿಕೊಂಡು ಮಾದಪ್ಪನ ಪ್ರಸಾದವನ್ನು ಸ್ವೀಕರಿಸಿವೆ.
ಮಲೆಮಹದೇಶ್ವರನ ಬೆಟ್ಟದಲ್ಲಿ ಭಕ್ತರು ನೀಡುತ್ತಿದ್ದ ಆಹಾರದಿಂದಲೇ ಬದುಕುತ್ತಿದ್ದ ನಾಯಿಗಳು, ಕೋತಿಗಳು ಆಹಾರವಿಲ್ಲದ ಸಂಕಷ್ಟ ಅನುಭವಿಸುತ್ತಿದ್ದು, ಅವುಗಳು ಕೂಡ ಮಾದಪ್ಪನ ಲಾಡು ಪ್ರಸಾದತ್ತ ದೃಷ್ಟಿ ನೆಟ್ಟಿವೆ.
ಮಹದೇಶ್ವರನ ಬೆಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋತಿಗಳಿದ್ದು, ಇವುಗಳಿಗೆ ದೂರದಿಂದ ಬರುವ ಭಕ್ತರು ಹಣ್ಣು ಹಂಪಲು ಇನ್ನಿತರ ಆಹಾರಗಳನ್ನು ನೀಡುತ್ತಿದ್ದರು. ಜನರು ನೀಡುತ್ತಿದ್ದ ಆಹಾರವನ್ನು ತಿಂದುಂಡು ಖುಷಿಯಾಗಿದ್ದ ಕೋತಿಗಳಿಗೆ ಕಳೆದ ಕೆಲವು ದಿನಗಳಿಂದ ಆಹಾರದ ಬಿಸಿ ಮುಟ್ಟಿದೆ.