ಮುಂಗಾರನ್ನು ನಂಬಿದ ರೈತರ ಕಣ್ಣಲ್ಲೀಗ ನೀರು...!
ಗುಂಡ್ಲುಪೇಟೆ, ಜುಲೈ 2: ಮುಂಗಾರು ಮಳೆಯನ್ನು ನಂಬಿ ಸೂರ್ಯಕಾಂತಿ ಬೆಳೆದಿದ್ದ ರೈತರು ಇದೀಗ ನೀರಿಲ್ಲದೆ ಬೆಳೆ ಒಣಗುತ್ತಿರುವುದನ್ನು ನೋಡಿ ಕಣ್ಣೀರಿಡುತ್ತಿದ್ದಾರೆ.
ಈಗಾಗಲೇ ತಾಲ್ಲೂಕು ವ್ಯಾಪ್ತಿಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಸೂರ್ಯಕಾಂತಿಯನ್ನು ಬೆಳೆದಿದ್ದು, ಮಳೆ ಬಾರದ ಹಿನ್ನೆಲೆಯಲ್ಲಿ ಕೆಲವರು ಬೋರ್ವೆಲ್ ನಿಂದ ನೀರು ಹಾಯಿಸುತ್ತಿದ್ದರೆ, ನೀರಿನ ವ್ಯವಸ್ಥೆ ಇಲ್ಲದ ರೈತರು ಮಳೆಗಾಗಿ ಆಗಸದತ್ತ ಮುಖ ಮಾಡಿದ್ದಾರೆ.
ಮುಂಗಾರು-ಸೂರ್ಯಕಾಂತಿ ಜುಗಲ್ಬಂದಿ ನೋಡಬನ್ನಿ!
ಈ ಬಾರಿ ಮಳೆ ತಡವಾಗಿದೆ. ಹಾಗಾಗಿ ಮುಂಗಾರನ್ನೇ ನಂಬಿ ಕೃಷಿ ಮಾಡಲು ಸಜ್ಜಾಗಿದ್ದ ರೈತರಲ್ಲಿ ಆತಂಕವೂ ಮಡುಗಟ್ಟಿದೆ. ಇನ್ನಾದರೂ ಮಳೆ ಬರುತ್ತದಾ ಇಲ್ಲವಾ ಎಂಬ ಗೊಂದಲದಲ್ಲೇ, ಮಳೆಯಾದರೆ ಸಾಕು ಎಂದು ಕ್ಷಣ ಕ್ಷಣವೂ ನಿರೀಕ್ಷಿಸುತ್ತಿದ್ದಾರೆ.
ಸೆಲ್ಫೀಗಾಗಿ ಮುಗಿಬಿದ್ದ ಜನ
ಸದ್ಯಕ್ಕೆ ಮಳೆ ಬರುವ ಲಕ್ಷಣಗಳು ಕಾಣದೆ ಬೆಳೆಗಳು ಒಣಗುತ್ತಿವೆ. ಇದು ಹೀಗೇ ಮುಂದುವರೆದರೆ ಬೆಳೆಗಳು ನಾಶವಾಗುವ ಭೀತಿ ರೈತರನ್ನು ಕಾಡುತ್ತಿದೆ. ಪೂರ್ವ ಮುಂಗಾರಿನಲ್ಲಿ ಉತ್ತಮವಾಗಿ ಮಳೆ ಬಿದ್ದ ಪರಿಣಾಮ ತಾಲ್ಲೂಕಿನಾದ್ಯಂತ ಎಲ್ಲಾ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಮಾಡಿದ್ದರು. ಇದರಿಂದ ಸೂರ್ಯಕಾಂತಿ ಚೆನ್ನಾಗಿ ಬೆಳೆದು ಹೂ ಬಿಟ್ಟು ನಳನಳಿಸುತ್ತಿರುವುದರಿಂದ ಜನ ಸೆಲ್ಫೀಗಾಗಿ ಮುಗಿ ಬೀಳುತ್ತಿದ್ದಾರೆ. ಇನ್ನೊಂದೆಡೆ ನೀರಿಲ್ಲದೆ ಕಣ್ಣೆದುರೇ ಬೆಳೆಗಳು ಒಣಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಅರಳುವ ಮುನ್ನವೇ ಬಾಡುತ್ತಿವೆ ಹೂವು
ತಾಲ್ಲೂಕಿನ ಹಂಗಳ ಹೋಬಳಿಯಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚಿನ ಮಳೆ ಬಿದ್ದಿದೆ. ಅತಿ ಕಡಿಮೆ ಮಳೆ ಬಿದ್ದಿರುವ ಬೇಗೂರು ಹೋಬಳಿಯಲ್ಲಿ ರೈತರು ಈ ಬಾರಿ ಹತ್ತಿಗಿಂತ ಹೆಚ್ಚಾಗಿ ಸೂರ್ಯಕಾಂತಿಯನ್ನೇ ಬೆಳೆದಿದ್ದರು. ಇದೀಗ ತೆರಕಣಾಂಬಿ ಹಾಗೂ ಕಸಬಾ ಹೋಬಳಿಗಳಲ್ಲಿ ಮಳೆಯ ಕೊರತೆಯಾಗಿದ್ದು, ಈಗಾಗಲೇ ಬೆಳೆದಿರುವ ಸೂರ್ಯಕಾಂತಿ, ಮುಸುಕಿನಜೋಳ, ಜೋಳ ಮುಂತಾದ ಬೆಳೆಗಳು ಒಣಗುತ್ತಿವೆ. ನೀರಿನ ಕೊರತೆಯಿಂದ ಸೂರ್ಯಕಾಂತಿಯ ಬೆಳವಣಿಗೆ ಕುಂಠಿತವಾಗಿದ್ದು, ಹೂ ಅರಳುವ ಮೊದಲೇ ಬಾಡುತ್ತಿವೆ.
ಇಲ್ಲಿ ನೀರಿದ್ದರೂ ವಿದ್ಯುತ್ ಇಲ್ಲದೆ ಒಣಗುತ್ತಿವೆ ಬೆಳೆಗಳು
ಜಾನುವಾರುಗಳಿಗೆ ಮೇವಿಲ್ಲ
ಸೂರ್ಯಕಾಂತಿ ಬೆಳೆ ಮಾತ್ರವಲ್ಲ, ಮಳೆಯ ಕೊರತೆಯಿಂದಾಗಿ, ಜೋಳದ ಪೈರೂ ಅವನತಿಯತ್ತ ಸಾಗುತ್ತಿದೆ. ಆಳೆತ್ತರಕ್ಕೆ ಬೆಳೆಯಬೇಕಾದ ಜೋಳದ ಪೈರುಗಳು ನೆಲದಲ್ಲಿಯೇ ಮುದುಡಿಕೊಂಡಿವೆ. ಈ ಬೆಳೆಗಳ ಜೊತೆಗೆ ಜಾನುವಾರುಗಳಿಗೆ ಅಗತ್ಯ ಮೇವೂ ದೊರೆಯದಂತಾಗಿದೆ. ಅವುಗಳಿಗೆ ಮೇವಿನ ಕೊರತೆ ಎದುರಾಗಿದೆ.
ದ್ವಿದಳ ಧಾನ್ಯಗಳಿಗೂ ಸಮಸ್ಯೆ
ಈಗಾಗಲೇ ತಾಲ್ಲೂಕಿನಲ್ಲಿ 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮಾಡಲಾಗಿದೆ. ಬೇಗೂರಿನಲ್ಲಿ ಸಾಮಾನ್ಯವಾಗಿ 7.5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡುತ್ತಿದ್ದರೂ ಈ ಬಾರಿ ಮಳೆಯ ಕೊರತೆಯಿಂದ ಕೇವಲ 2.5 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಸೀಮಿತವಾಗಿದೆ. 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ, 13 ಸಾವಿರದ 738 ಹೆಕ್ಟೇರ್ ಸೂರ್ಯಕಾಂತಿ, 6 ಸಾವಿರ ಹೆಕ್ಟೇರ್ ನೆಲಗಡಲೆ, ಇನ್ನುಳಿದ ಪ್ರದೇಶಗಳಲ್ಲಿ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಲಾಗಿದೆ. ಈ ಪೈಕಿ ಕೆಲವು ರೈತರಿಗೆ ನೀರಿನ ಸೌಲಭ್ಯವಿದ್ದರೆ, ಹೆಚ್ಚಿನವರು ಮಳೆಯನ್ನೇ ನಂಬಿ ಕೃಷಿ ಮಾಡಿದ್ದರು. ಇದೀಗ ಅವರೆಲ್ಲರೂ ಕಂಗಾಲಾಗಿದ್ದಾರೆ. ಆದಷ್ಟು ಬೇಗ ಮಳೆ ಸುರಿಯಲಿ ಎಂದು ದೇವರನ್ನು ಪ್ರಾರ್ಥಿಸುವಂತಾಗಿದೆ.
ಈ ಕುರಿತಂತೆ ಸಹಾಯಕ ಕೃಷಿ ನಿರ್ದೇಶಕರಾದ ವೆಂಕಟೇಶ್ ಅವರು ಮಾತನಾಡಿ ಕೃಷಿ ಇಲಾಖೆಯು ಮಳೆಯ ಕೊರತೆಯಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ.
ರೈತರ ಹೋರಾಟಕ್ಕೆ ಸಿಕ್ಕ ಜಯ : ಕೊನೆಗೂ ವಡ್ಡಗೆರೆ ಕೆರೆಗೆ ನೀರು ಹರಿದು ಬಂತು