ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾದಿಂದ ರಕ್ತ ಸಂಗ್ರಹಕ್ಕೂ ಕೊರತೆ
ಚಾಮರಾಜನಗರ, ಏಪ್ರಿಲ್ 08: ಲಾಕ್ ಡೌನ್ ಬೆನ್ನಲ್ಲೇ ಇದೀಗ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಕೊರತೆ ಎದುರಾಗಿದೆ. ಸಾಮಾನ್ಯ ದಿನಗಳಲ್ಲಿ ದಾನಿಗಳು ಮುಂದೆ ಬಂದು ರಕ್ತದಾನ ಮಾಡುತ್ತಿದ್ದರಾದರೂ ಇದೀಗ ರಕ್ತದಾನಿಗಳು ಬಾರದ ಕಾರಣದಿಂದ ರಕ್ತನಿಧಿಯಲ್ಲಿ ರಕ್ತ ಸಂಗ್ರಹ ಪ್ರಮಾಣ ಕಡಿಮೆಯಾಗಿರುವುದು ಬೆಳಕಿಗೆ ಬಂದಿದೆ.
ಮೊದಲು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಪ್ರತಿದಿನ ಹತ್ತರಿಂದ ಹದಿನೈದು ಯೂನಿಟ್ ರಕ್ತದ ಅಗತ್ಯವಿತ್ತು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರು ಆಸ್ಪತ್ರೆಗೆ ಬರುವುದು ಕಡಿಮೆಯಾಗಿದೆ. ಅಪಘಾತ ಪ್ರಕರಣಗಳು ಇಲ್ಲದಂತಾಗಿದೆ. ಹೀಗಾಗಿ ಈಗ ಅಷ್ಟೊಂದು ಪ್ರಮಾಣ ರಕ್ತದ ಅಗತ್ಯ ಇಲ್ಲದಿದ್ದರೂ ಹೆರಿಗೆಗೆ ಬರುವ ಗರ್ಭಿಣಿಯರಿಗೆ ಪ್ರತಿದಿನ ನಾಲ್ಕರಿಂದ ಐದು ಯೂನಿಟ್ ರಕ್ತದ ಅವಶ್ಯಕತೆ ಇದೆ.
ಮೈಸೂರಿನಲ್ಲಿ ಬೀಡಾಡಿ ದನಗಳ ಹಸಿವು ನೀಗಿಸುವ ಕಾರ್ಯ
ಕೊರೊನಾ ಭೀತಿ ಹಾಗೂ ಲಾಕ್ ಡೌನ್ ಹಿನ್ನಲೆಯಲ್ಲಿ ರಕ್ತದಾನ ಮಾಡಲು ಜನರು ಹಿಂಜರಿಯುತ್ತಿರುವುದರಿಂದ ಅಗತ್ಯ ಪ್ರಮಾಣದ ರಕ್ತ ಸಂಗ್ರಹಿಸುವುದು ಕಷ್ಟವಾಗಿದೆ. ಒಂದು ವೇಳೆ ತುರ್ತು ಸಂದರ್ಭ ಎದುರಾದರೆ ಸಮಸ್ಯೆ ತಲೆದೋರುವ ಸಾಧ್ಯತೆಗಳಿವೆ. ಆದ್ದರಿಂದ ರಕ್ತದ ಕೊರತೆ ನೀಗಿಸುವ ಸಂಬಂಧ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು, ಆ ಮೂಲಕ ರಕ್ತ ಸಂಗ್ರಹಣೆಗೆ ಮುಂದಾಗಿದೆ.
ಇತರೆ ದಿನಗಳಲ್ಲಿ ಅಲ್ಲಲ್ಲಿ ಸಂಘ ಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತನಿಧಿ ಕೇಂದ್ರದಲ್ಲಿ ಸಂಗ್ರಹಿಸಿಡಲಾಗುತ್ತಿತ್ತು. ಈಗ ಕೊರೊನಾ ಪರಿಣಾಮದಿಂದ ಲಾಕ್ ಡೌನ್ ಆಗಿರುವುದರಿಂದ ಶಿಬಿರಗಳು ನಡೆಯದ ಕಾರಣ ರಕ್ತದ ಕೊರತೆ ಎದುರಾಗಿದೆ. ಈ ಕುರಿತಂತೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರವಿ ಅವರು, "ಮುಂದಿನ ದಿನಗಳಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ರಕ್ತದಾನದ ಕ್ಯಾಂಪ್ ಮಾಡುತ್ತೇವೆ. ಈಗಾಗಲೇ ರಕ್ತ ನಿಧಿ ಕೇಂದ್ರದ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ರಕ್ತದಾನಿಗಳನ್ನು ಸಂಪರ್ಕಿಸಿ ರಕ್ತದಾನ ಮಾಡುವಂತೆ ಮನವೊಲಿಸಲಾಗುವುದು" ಎಂದು ಹೇಳಿದ್ದಾರೆ.