ರೋಗಗ್ರಸ್ಥವಾಗಿದೆ ಗುಂಡ್ಲುಪೇಟೆಯ ಈ ಸರ್ಕಾರಿ ಆಸ್ಪತ್ರೆ
ಚಾಮರಾಜನಗರ, ನವೆಂಬರ್ 2: ಜಿಲ್ಲೆಯ ಗುಂಡ್ಲುಪೇಟೆಯಲ್ಲಿರುವ ಸರ್ಕಾರಿ ಆಸ್ಪತ್ರೆಯೇ ರೋಗಗ್ರಸ್ಥವಾಗಿದ್ದು, ಮೊದಲಿಗೆ ಆಸ್ಪತ್ರೆಗೆ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ.
ಮೇಲಿಂದ ಮೇಲೆ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ದಿಢೀರ್ ಭೇಟಿ ನೀಡಿದ ಶಾಸಕ ಸಿ.ಎಸ್.ನಿರಂಜನಕುಮಾರ್, ಆಸ್ಪತ್ರೆಯ ದುಸ್ಥಿತಿ ನೋಡಿ ಬೆಚ್ಚಿ ಬಿದ್ದಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಪೈಕಿ ಹೆಚ್ಚಿನವು ಸಮಸ್ಯೆಗಳನ್ನು ಹೊದ್ದುಕೊಂಡು ಮಲಗಿವೆ. ಇಂತಹ ಆಸ್ಪತ್ರೆಗಳ ಸಾಲಿಗೆ ಗುಂಡ್ಲುಪೇಟೆ ಆಸ್ಪತ್ರೆಯೂ ಸೇರುತ್ತದೆ.
ವಿಕ್ಟೋರಿಯಾ ಆಸ್ಪತ್ರೆ ಅವ್ಯವಸ್ಥೆ; ಆರ್. ಅಶೋಕ ದಿಢೀರ್ ಭೇಟಿ
ಮೇಲ್ನೋಟಕ್ಕೆ ಸ್ಥಳೀಯರು ಇದನ್ನು ದೊಡ್ಡಾಸ್ಪತ್ರೆ ಎಂದು ಕರೆಯುತ್ತಾರೆ. ಆದರೆ ಇಲ್ಲಿಗೆ ರೋಗಿ ಹೋದರೆ ಅವರ ಕಥೆ ಗೋವಿಂದ... ಏಕೆಂದರೆ ವೈದ್ಯರ ಕೊರತೆ ಇಲ್ಲಿ ಸದಾ ಕಾಡುತ್ತಲೇ ಇರುತ್ತದೆ. ಅದರಲ್ಲೂ ರಾತ್ರಿ ವೇಳೆ ವೈದ್ಯರಿಲ್ಲದೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ರೋಗಿಗಳು ಮೃತಪಟ್ಟ ನಿದರ್ಶನಗಳಿವೆ. ವೈದ್ಯರ ಕೊರತೆಯಿಂದ ಇರುವ ವೈದ್ಯರೇ ಎಲ್ಲವನ್ನು ನಿಭಾಯಿಸಬೇಕಾಗಿರುವುದರಿಂದ ಕೆಲಸದ ಒತ್ತಡ ಒಂದೆಡೆ ವೈದ್ಯರಿಗಾದರೆ, ಇನ್ನೊಂದೆಡೆ ವೈದ್ಯರಿಗಾಗಿ ರೋಗಿಗಳು ಗಂಟೆಗಟ್ಟಲೆ ಕಾಯುತ್ತಾ ಸಾಲು ಕಟ್ಟಿ ನಿಲ್ಲಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ರೋಗಿಗಳಿಗೆ ಬಾಯಾರಿಕೆ ಆದರೆ ಕುಡಿಯಲು ನೀರಿಲ್ಲ, ಅಷ್ಟೇ ಅಲ್ಲ ವೈದ್ಯರಿಗೂ ಕೈ ತೊಳೆಯಲು ನೀರಿಲ್ಲದಂತಾಗಿದೆ. ಇಷ್ಟೆಲ್ಲ ಆದ ಮೇಲೆ ನೀರಿಲ್ಲದೆ ಶೌಚಾಲಯವೂ ಗಬ್ಬೆದ್ದು ನಾರುತ್ತಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಜನರಿಕ್ ಔಷಧಿ ಮಳಿಗೆ ಇದ್ದರೂ ಉಪಯೋಗವಿಲ್ಲದಂತಾಗಿದೆ. ಕೆಲವೊಮ್ಮೆ ಔಷಧಿ ಮಳಿಗೆ ಸಿಬ್ಬಂದಿ ಇರದೆ ಖಾಸಗಿ ಮೆಡಿಕಲ್ ಶಾಪ್ ನ ಮೊರೆಹೋಗಬೇಕಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸೌಲಭ್ಯ ಸಿಗುತ್ತೆ ಎಂದು ನಂಬಿ ಬರುವ ಬಡ ರೋಗಿಗಳು ಔಷಧಿಯನ್ನು ಖಾಸಗಿ ಮೆಡಿಕಲ್ ಶಾಪ್ ನಿಂದ ಖರೀದಿಸುತ್ತಿದ್ದಾರೆ.
Recommended Video
ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಕೇಳಿ ತಿಳಿದು ದಿಢೀರ್ ಭೇಟಿ ನೀಡಿದ ಬಿಜೆಪಿ ಶಾಸಕ ಸಿ.ಎಸ್.ನಿರಂಜನಕುಮಾರ್, ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಕಂಡು ಕೆಂಡಾಮಂಡಲರಾಗಿದ್ದು, ಜನರಿಕ್ ಔಷಧಿ ನೀಡದಿರುವ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.