ಆಗಸ್ಟ್ 5ರಂದು ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಬಿಜೆಪಿ ಸೇರ್ಪಡೆ
ಚಾಮರಾಜನಗರ, ಆಗಸ್ಟ್ 03; ಮಾಜಿ ಸಚಿವ, ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್ ಬಿಜೆಪಿ ಸೇರಲಿದ್ದಾರೆ. 2018ರ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದು ಗೆಲುವು ಸಾಧಿಸಿದ್ದ ಮಹೇಶ್ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಎಸ್ಪಿಯಿಂದ ಉಚ್ಚಾಟನೆಗೊಂಡಿದ್ದರು.
ಆಗಸ್ಟ್ 5ರಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆಯುವ ಸಮಾರಂಭದಲ್ಲಿ ಎನ್. ಮಹೇಶ್ ಬಿಜೆಪಿಗೆ ಸೇರಲಿದ್ದಾರೆ. ಕೋವಿಡ್ ಪರಿಸ್ಥಿತಿ ಬಳಿಕ ಚಾಮರಾಜನಗರದಲ್ಲಿ ದೊಡ್ಡ ಸಮಾವೇಶವನ್ನು ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ.
ಬಿಎಸ್ಪಿ ತೊರೆದ ಎನ್. ಮಹೇಶ್ ಬಿಜೆಪಿಯತ್ತ?
ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಜಿ. ಎನ್. ನಂಜುಡಸ್ವಾಮಿ, ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಸೇರುವ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜುಲೈ 30ರಂದು ಗುಂಡ್ಲುಪೇಟೆಗೆ ಭೇಟಿ ನೀಡಿದ ಸಮಯದಲ್ಲಿ ಪಕ್ಷ ಸೇರುವಂತೆ ಎನ್. ಮಹೇಶ್ಗೆ ಸೂಚನೆ ನೀಡಿದ್ದರು.
ಸಚಿವ ಸ್ಥಾನಕ್ಕೆ ಎನ್.ಮಹೇಶ್ ರಾಜೀನಾಮೆ
ಜಿ. ಎನ್. ನಂಜುಡಸ್ವಾಮಿ ಮಾತನಾಡಿ, "ಯಾವುದೇ ಷರತ್ತು ಇಲ್ಲದೇ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಎನ್. ಮಹೇಶ್ ಪಕ್ಷವನ್ನು ಸೇರುತ್ತಿದ್ದಾರೆ. ಎರಡು ವರ್ಷಗಳಿಂದ ಅವರು ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ" ಎಂದರು.
ಬಿಜೆಪಿ ಸೇರಲಿದ್ದಾರೆ ಬಿಎಸ್ಪಿ ಶಾಸಕ ಎನ್. ಮಹೇಶ್?
ಯಾವುದೇ ಭಿನ್ನಾಭಿಪ್ರಾಯವಿಲ್ಲ
"ಎನ್. ಮಹೇಶ್ ಪಕ್ಷ ಸೇರುವ ವಿಚಾರದಲ್ಲಿ ನನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾನು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷನಾಗಿ ಬೇರೆ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಬೇರೆ ಪಕ್ಷದ ನಾಯಕರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದೇನೆ. ಈಗ ನಮ್ಮ ಕ್ಷೇತ್ರದ ಶಾಸಕರು ಸಹ ಬಿಜೆಪಿ ಸೇರುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಯಾರಿಗೆ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ಎಂದು ವರಿಷ್ಠರು ತೀರ್ಮಾನ ಮಾಡುತ್ತಾರೆ. ಚುನಾವಣೆಗೆ ಇನ್ನೂ ಎರಡು ವರ್ಷಗಳು ಇವೆ" ಎಂದು ಜಿ. ಎನ್. ನಂಜುಡಸ್ವಾಮಿ ಹೇಳಿದರು.
2018ರ ಚುನಾವಣೆ ಗೆಲುವು
2018ರ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರದ ಕೊಳ್ಳೇಗಾಲ ಕ್ಷೇತ್ರದಲ್ಲಿ ಎನ್. ಮಹೇಶ್ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಬಿಎಸ್ಪಿ ರಾಜ್ಯದಲ್ಲಿ ಚುನಾವಣೆ ಎದುರಿಸಿತ್ತು. 71,792 ಮತಗಳನ್ನು ಪಡೆದು ಎನ್. ಮಹೇಶ್ ಗೆಲುವು ಸಾಧಿಸಿದ್ದರು. ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಬಿಎಸ್ಪಿ ಅಭ್ಯರ್ಥಿಯೊಬ್ಬರು ಗೆದ್ದು ಶಾಸಕರಾಗಿದ್ದರು. ಪಕ್ಷದ ವರಿಷ್ಠೆ ಮಾಯಾವತಿ ಸಹ ಎನ್. ಮಹೇಶ್ ಅಭಿನಂದಿಸಿದ್ದರು. ಈಗ ಎನ್. ಮಹೇಶ್ ಬಿಜೆಪಿ ಸೇರುತ್ತಿದ್ದಾರೆ.
ಸಚಿವ ಸ್ಥಾನ ನೀಡಲಾಗಿತ್ತು
ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಬಿಎಸ್ಪಿ ರಾಜ್ಯದಲ್ಲಿ 2018ರ ವಿಧಾನಸಭೆ ಚುನಾವಣೆ ಎದುರಿಸಿತ್ತು. ಚುನಾವಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು, ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆಗ ಎನ್. ಮಹೇಶ್ರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯನ್ನು ನೀಡಿದ್ದರು. ಆದರೆ 2018ರ ಅಕ್ಟೋಬರ್ನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎನ್. ಮಹೇಶ್ ಘೋಷಣೆ ಮಾಡಿದರು. ಸಚಿವ ಸ್ಥಾನ ತೊರೆಯಲು ಕಾರಣ ನಿಗೂಢವಾಗಿತ್ತು.
Recommended Video
ಬಿಎಸ್ಪಿಯಿಂದ ಉಚ್ಛಾಟನೆ
17 ಶಾಸಕರ ರಾಜೀನಾಮೆ ಬಳಿಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸಂಖ್ಯಾಬಲದ ಕೊರತೆ ಉಂಟಾಯಿತು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಎನ್. ಮಹೇಶ್ ಬಿಎಸ್ಪಿ ಚಟುವಟಿಕೆಯಿಂದಲೂ ದೂರವಾದರು. ಎಚ್. ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುವಾಗ ಬೆಂಬಲ ನೀಡುವಂತೆ ಬಿಎಸ್ಪಿ ವರಿಷ್ಠರು ಎನ್.ಮಹೇಶ್ಗೆ ಸೂಚನೆ ನೀಡಿದರು. ಆದರೆ ಅವರು ಬಹುಮತ ಸಾಬೀತು ವೇಳೆ ತಟಸ್ಥರಾಗಿ ಉಳಿದರು. ಇದರಿಂದಾಗಿ ಬಿಎಸ್ಪಿಯಿಂದ ಅವರನ್ನು ಉಚ್ಛಾಟನೆ ಮಾಡಲಾಯಿತು. ಬಳಿಕ ಬಿಜೆಪಿ ನಾಯಕರ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಮಹೇಶ್ ಈಗ ಅಧಿಕೃತವಾಗಿ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿದ್ದಾರೆ.