ಸುಳ್ವಾಡಿ ವಿಷ ಪ್ರಸಾದ ಪ್ರಕರಣ: 6163 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಚಾಮರಾಜನಗರ, ಮಾರ್ಚ್ 19: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ದೇಗುಲದ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣದ ತನಿಖಾಧಿಕಾರಿ ಕೊಳ್ಳೇಗಾಲ ಡಿವೈಎಸ್ಪಿ ಪುಟ್ಟಮಾದಯ್ಯ ಅವರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ 6163 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ದೇಗುಲದ ಆಡಳಿತ ಮಂಡಳಿಯ ವಿರುದ್ಧದ ದ್ವೇಷದ ಹಿನ್ನಲೆಯಲ್ಲಿ ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ, ದೊಡ್ಡಯ್ಯ ಅವರು ದೇಗುಲದ ಗೋಪುರ ನಿರ್ಮಾಣದ ಶಂಕುಸ್ಥಾಪನೆಯ ಕಾರ್ಯಕ್ರಮದಲ್ಲಿ ಭಕ್ತರಿಗೆ ನೀಡಲಾಗುವ ಪ್ರಸಾದಕ್ಕೆ ವಿಷ ಬೆರೆಸಿದ ಪರಿಣಾಮ 17 ಮಂದಿ ಪ್ರಾಣ ಕಳೆದುಕೊಂಡು ನೂರಾರು ಮಂದಿ ಆಸ್ವಸ್ಥಗೊಂಡಿದ್ದರು.
ಸುಳ್ವಾಡಿ ದುರಂತಕ್ಕೆ ಒಂದು ತಿಂಗಳು : ಇನ್ನೂ ಮಾಸದ ಸಾವಿನ ನೋವು
ಈ ಪ್ರಕರಣದ ತನಿಖೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ (ಅಂತಿಮ ವರದಿ) ಸಲ್ಲಿಸುವಲ್ಲಿ ಕೊಳ್ಳೇಗಾಲ ಡಿವೈಎಸ್ಪಿ ಪುಟ್ಟಮಾದಯ್ಯ ಯಶಸ್ವಿಯಾಗಿದ್ದಾರೆ.
ನ್ಯಾಯಾಂಗದ ಆದೇಶದ ಮೇರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ವಸ್ಥರು ಹಾಗೂ ಮೃತರ ಶವಪರೀಕ್ಷೆ ನಡೆಸಿದ್ದ ಸರ್ಕಾರಿ ವೈದ್ಯರು, ಅಧಿಕಾರಿಗಳು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೋಗಿಗಳು, ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಧರ್ಮದರ್ಶಿಗಳು, ವಿವಿಧ ಗ್ರಾಮಸ್ಥರು, ಸಾರ್ವಜನಿಕರು ಸೇರಿ 332 ಸಾಕ್ಷಿಗಳ ಹೇಳಿಕೆ ಸಂಗ್ರಹಿಸಿ 6163 ಪುಟಗಳ ಚಾರ್ಜ್ ಶೀಟ್ ಅನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ವಿಷವಿಕ್ಕಿದ ಆರೋಪಿಗಳ ಪರ ವಕಾಲತ್ತಿಗೆ ವಕೀಲರು ಬರಲಿಲ್ಲ!
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಿವೈಎಸ್ಪಿ ಪುಟ್ಟಮಾದಯ್ಯ ಅವರು ಸುಳ್ವಾಡಿ ವಿಷ ಪ್ರಸಾದ ಪ್ರಕರಣದಲ್ಲಿ ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಿದ್ದು, ಪ್ರಕರಣದಲ್ಲಿ ಮೃತಪಟ್ಟವರು ಹಾಗೂ ಅಸ್ವಸ್ಥಗೊಂಡ ನೂರಾರು ಜನರಿಗೆ ನ್ಯಾಯ ದೊರಕಿಸುವ ದೃಷ್ಟಿಯಿಂದ ಆರಂಭಿಕ ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ದೇವಸ್ಥಾನದ ಪ್ರಸಾದವೇ ಬೇಡ, ನಾಸ್ತಿಕರ ಜೊತೆಗೆ ಅರ್ಚಕರಿಂದಲೂ ಸಹಮತ
332 ಸಾಕ್ಷಿಗಳ ಹೇಳಿಕೆ ಮತ್ತು ವೈಜ್ಞಾನಿಕ ದಾಖಲೆಗಳ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ. ಈ ಪ್ರಕರಣ ಇಷ್ಟರಲ್ಲಿಯೇ ನ್ಯಾಯಾಧೀಶರ ಮುಂದೆ ಬರಲಿದ್ದು, ಶೀಘ್ರ ವಿಚಾರಣೆ ನಡೆದು ಆರೋಪಿಗಳಿಗೆ ಖಂಡಿತವಾಗಿಯೂ ಶಿಕ್ಷೆಯಾಗಲಿದೆ ಎಂಬ ನಂಬಿಕೆಯಿರುವುದಾಗಿ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ, ದೊಡ್ಡಯ್ಯ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿದ್ದು, ನ್ಯಾಯಾಂಗ ಬಂಧನ ಅವಧಿಯನ್ನು ಮಾ.21ರವರೆಗೆ ವಿಸ್ತರಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.