ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಕೇರಳಿಗರಿಂದ ಸರ್ಕಾರಿ ಭೂಮಿ ಒತ್ತುವರಿ?
ಚಾಮರಾಜನಗರ, ಡಿಸೆಂಬರ್ 5: ಕೇರಳದಿಂದ ತ್ಯಾಜ್ಯಗಳನ್ನು ತಂದು ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಸುರಿದು ಹೋಗುವ ಮೂಲಕ ಜನಕ್ಕೆ ಕಿರಿಕಿರಿ ಉಂಟು ಮಾಡುತ್ತಿದ್ದ ಕೇರಳಿಗರು ಇದೀಗ ನೇರವಾಗಿ ರಾಜ್ಯದೊಳಕ್ಕೆ ನುಗ್ಗಿ ಅಲ್ಲಲ್ಲಿ ಸರ್ಕಾರಿ ಭೂಮಿಗಳನ್ನು ಒತ್ತುವರಿ ಮಾಡಿಕೊಂಡು ವಾಸ್ತವ್ಯ ಹೂಡುತ್ತಿರುವುದು ಹೊಸ ಬೆಳವಣಿಗೆಯಾಗಿದೆ.
ಈಗಾಗಲೇ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಮದ್ದೂರು ಅರಣ್ಯ ವ್ಯಾಪ್ತಿಯಲ್ಲಿರುವ ಬಾಚನಹಳ್ಳಿ ಸರ್ವೇ ನಂಬರ್ 16ರಲ್ಲಿ ಒಟ್ಟು 245 ಎಕರೆ ಭೂಮಿ ಇದ್ದು, ಇದರಲ್ಲಿ 185 ಎಕರೆಯಲ್ಲಿ ಗೋಮಾಳ ಭೂಮಿಯಾಗಿದೆ. ಇಲ್ಲಿ ನಕಲಿ ದಾಖಲಾತಿ ಸೃಷ್ಟಿಸಿಕೊಂಡು ಕೇರಳಿಗರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಲಕಾವೇರಿಯಲ್ಲಿ ನಿಯಮ ಬಾಹಿರ ರೆಸಾರ್ಟ್ ಕಾಮಗಾರಿ: ಅಧಿಕಾರಿ ಸತೀಶ್ ಅಮಾನತು
ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ, ಮದ್ದೂರು ಕಾಲೋನಿ ಕಗ್ಗಳಹುಂಡಿ ಮುಂತಾದ ಗ್ರಾಮಸ್ಥರು ಅನಾದಿಕಾಲದಿಂದಲೂ ಈ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಬಂದಿದ್ದರು. ಆದರೆ ಕಳೆದ ಎರಡು ವರ್ಷದಿಂದ ಕೇರಳದ ಕೆಲವು ಪ್ರಭಾವಿ ವ್ಯಕ್ತಿಗಳು ಸ್ಥಳೀಯವಾಗಿ ಪ್ರಭಾವ ಬೀರಿ ಜಮೀನುಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಈ ವಿಚಾರ ಸ್ಥಳೀಯರ ಜನರ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ಸಂಬಂಧ ಹಿಂದೆ ನಡೆದ ಜನ ಸಂಪರ್ಕ ಸಭೆಯಲ್ಲಿ ಗುಂಡ್ಲಪೇಟೆ ಶಾಸಕ ಸಿ.ಎಸ್. ನಿರಂಜನಕುಮಾರ್ ಅವರಿಗೆ ದೂರು ನೀಡಲಾಗಿತ್ತು. ಈ ವೇಳೆ ಅವರು ತಂಡ ರಚನೆ ಮಾಡಿ ವರದಿ ನೀಡುವಂತೆ ಸೂಚಿಸಿದ ಮೇರೆಗೆ ಇದೀಗ ತಹಶೀಲ್ದಾರ್ ನಂಜುಂಡಯ್ಯ ಅವರು ಪರಿಶೀಲನೆ ನಡೆಸಿದ್ದಾರೆ.
ಇದೀಗ ತಹಶೀಲ್ದಾರ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಪರಿಶೀಲನೆ ನಡೆಸಿ, ಒಂದು ವೇಳೆ ಕೇರಳಿಗರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದು ದೃಢಪಟ್ಟರೆ ಕಾರ್ಯಾಚರಣೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.