ಮಜ ನೀಡುವ ವಾಟಾಳ್ ಮಾತು ಮತವಾಗಿ ಬದಲಾಗುತ್ತಾ..?
ಚಾಮರಾಜನಗರ, ಮೇ 03: ತಮ್ಮ ಒಂದೇ ಕರೆಯಿಂದ ರಾಜ್ಯವನ್ನೇ ಬಂದ್ ಮಾಡಿಸುವ ಶಕ್ತಿ ಹೊಂದಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರಿಗೆ ಅದ್ಯಾಕೋ ಗೊತ್ತಿಲ್ಲ ಮತದಾರರು ಮಾತ್ರ ಕೈಹಿಡಿಯುವಂತಿಲ್ಲ. ಹೀಗಾಗಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಗೆಲ್ಲಲು ಮಾತ್ರ ಸಾಧ್ಯವಾಗುತ್ತಿಲ್ಲ.
ಈ ಬಾರಿ ಅದೇನಾದರೂ ಆಗಲಿ ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದು ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇವರಿಗೆ ಬಿಜೆಪಿಯ ಪ್ರೊ.ಮಲ್ಲಿಕಾರ್ಜುನಪ್ಪ, ಕಾಂಗ್ರೆಸ್ ನ ಪುಟ್ಟರಂಗಶೆಟ್ಟಿ ಅವರು ಪ್ರತಿಸ್ಪರ್ಧಿಗಳಾಗಿದ್ದಾರೆ.
ವಾಟಾಳ್ ನಾಗರಾಜ್ರನ್ನು ಗೆಲ್ಲಿಸ್ತಾರಾ ಚಾಮರಾಜನಗರದ ಜನ?
ಸದ್ಯ ಬಿಡುವಿಲ್ಲದೆ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವ ವಾಟಾಳ್ ನಾಗರಾಜ್ ಅವರ ಜತೆಯಲ್ಲಿ ಯಾವುದೇ ಹೇಳಿಕೊಳ್ಳುವಂತಹ ನಾಯಕರಿಲ್ಲ. ಇವರ ಜತೆಗಿರುವ ಕನ್ನಡದ ಕಟ್ಟಾಳುಗಳ್ಯಾರೂ ಮತಯಾಚನೆ ಮಾಡಿ ಬೆಂಬಲ ನೀಡಲು ಬರುತ್ತಿಲ್ಲ. ಹೀಗಾಗಿ ಒಂದಷ್ಟು ಬೆಂಬಲಿಗರೊಂದಿಗೆ ಹಗಲು ರಾತ್ರಿ ಎನ್ನದೆ ಪ್ರಚಾರ ನಡೆಸುತ್ತಿರುವ ವಾಟಾಳ್ ನಾಗರಾಜ್ ಅವರಲ್ಲಿ ಹುಮ್ಮಸ್ಸು, ಗೆದ್ದೇ ಗೆಲ್ಲಬೇಕೆಂಬ ಹಠ ಎಲ್ಲವೂ ಕಂಡು ಬರುತ್ತಿದೆ.
ಮಗ ,ಮಗಳು ಮೊಮ್ಮಗ ಸಾಥ್
ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯುತ್ತಾ ಮತಕೇಳುತ್ತಿದ್ದು, ಇವರ ಶ್ರಮ ಮತವಾಗಿ ಪರಿವರ್ತನೆಯಾಗುತ್ತಾ ಎಂಬುದು ಮಾತ್ರ ತಿಳಿಯಿತ್ತಿಲ್ಲ. ತಮ್ಮೊಂದಿಗೆ ಯಾವುದೇ ಕನ್ನಡದ ನಾಯಕರು ಬಾರದೆ ಇರುವುದರಿಂದಾಗಿ ಪುತ್ರಿ ಅನುಪಮ, ಮಗ ಮಹದೇವಪ್ರಸಾದ್, ಮೊಮ್ಮಗ ಚಂದನ್ ಅವರನ್ನು ಜೊತೆಯಲ್ಲಿ ಕರೆದೊಯ್ದು ಪ್ರಚಾರ ನಡೆಸುತ್ತಿದ್ದಾರೆ.
ವಾಟಾಳ್ ನಾಗರಾಜ್ ಅವರನ್ನು ಗೆಲ್ಲಿಸಲೇ ಬೇಕೆಂದು ಅವರ ಆತ್ಮೀಯ ವರ್ಗ, ಅವರ ನಿಕಟವರ್ತಿಗಳಾಗಿರುವ ಒಂದಷ್ಟು ಕನ್ನಡದ ಕಟ್ಟಾಳುಗಳು ಜತೆಗಿದ್ದಿದ್ದರೆ ಇವರ ಪ್ರಚಾರಕ್ಕೆ ಇನ್ನಷ್ಟು ಕಳೆ ಬರುತ್ತಿತ್ತೇನೋ? ಆದರೆ ಯಾರೂ ಕೂಡ ಅವರ ಜತೆ ಬಾರದ ಕಾರಣದಿಂದಾಗಿ ಏಕಾಂಗಿ ಹೋರಾಟವನ್ನು ಮಾಡುತ್ತಿದ್ದಾರೆ. ವಾಟಾಳ್ ನಾಗರಾಜ್ ಅವರ ಮಾತಿನ ವೈಖರಿ ಒಂದಷ್ಟು ಮಜಾ ಕೊಡುತ್ತಿರುವುದರಿಂದ ಜನ ಒಂದೆಡೆ ನಿಂತು ಸ್ವಲ್ಪಹೊತ್ತು ಕೇಳಿ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ಅದು ಮತವಾಗಿ ಪರಿವರ್ತನೆಯಾದರೆ ವಾಟಾಳ್ ಗೆಲ್ಲಬಹುದು.
'ಕತ್ತೆಗೆ ರಾಷ್ಟ್ರಪ್ರಾಣಿ ಗೌರವ, ಪ್ರೇಮಿಗಳಿಗೆ ರಜೆ': ವಾಟಾಳ್ ನಾಗರಾಜ್ ಪ್ರಣಾಳಿಕೆ
ಮಜ ನೀಡುವ ವಾಟಾಳ್ ಭಾಷಣ
ಪ್ರಚಾರದ ಸಮಯದಲ್ಲಿ ವಾಟಾಳ್ ಆಡುವ ಮಾತುಗಳು ಹೀಗಿವೆ: ಶ್ರೀಮಂತರು, ಹಣವಂತರು, ರಿಯಲ್ ಎಸ್ಟೇಟ್ ಮಾಲೀಕರು, ಜೈಲಿಗೆ ಹೋಗಿದ್ದವರು, ಜೈಲಿಗೆ ಹೋಗಬೇಕಾದವರು, ಕ್ರಿಮಿನಲ್ ಮೊಕದ್ದಮೆ ಇರುವವರು ಶಾಸನ ಸಭೆಗೆ ಬರುತ್ತಿದ್ದಾರೆ ಇವರಿಂದ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಚುನಾವಣೆ ಹೆಸರಿನಲ್ಲಿ ಹಗಲು ದರೋಡೆ ನಡೆಯುತ್ತದೆ.
ಚುನಾವಣೆ ಆಯೋಗ ಎಷ್ಟೇ ಕಠಿಣ ಕ್ರಮ ವಹಿಸಿದರೂ ರಾಜಕಾರಣಿಗಳು ಹಣ ಮತ್ತು ಮದ್ಯ ವಿತರಣೆ ಮಾಡುವುದರ ಮೂಲಕ ಭ್ರಷ್ಟಚಾರದಲ್ಲಿ ತೊಡಗಿದ್ದಾರೆ. ಇದನ್ನು ತಡೆಗಟ್ಟಬೇಕಾದರೆ ಚುನಾವಣಾ ಕಾಯಿದೆಗೆ ತಿದ್ದುಪಡಿ ತರಬೇಕು. ಚುನಾವಣೆಯಲ್ಲಿ ಯಾರು ಹಣ ಮತ್ತು ಇತ್ಯಾದಿಗಳನ್ನು ವಿತರಿಸುತ್ತಾರೋ ಅಂತಹ ಅಭ್ಯರ್ಥಿಗಳನ್ನು ಯಾವುದೇ ಮುಲಾಜಿಲ್ಲದೆ ಜೈಲಿಗೆ ಹಾಕಬೇಕು. ಅವರು 6ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧೆ ಮಾಡದಂತೆ ಕಠಿಣ ಕ್ರಮ ವಹಿಸ ಬೇಕು.
ಚಾಮರಾಜನಗರದ ಅಭಿವೃದ್ಧಿ ಮಂತ್ರ
ಒಂದು ವೇಳೆ ಚುನಾವಣೆಯಲ್ಲಿ ಗೆದ್ದರೆ ವಾಟಾಳ್ ನಾಗರಾಜ್ ಚಾಮರಾಜನಗರಕ್ಕಾಗಿ ಏನೆಲ್ಲ ಮಾಡುತ್ತಾರೆ ಎಂಬ ಕಾರ್ಯಕ್ರಮಗಳ ಪಟ್ಟಿ ಇಂತಿದೆ:
ಕಾವೇರಿ 2ನೇ ಹಂತ 100 ಗ್ರಾಮಗಳಿಗೆ ಕಾವೇರಿ ಕಾಯಂ ಕುಡಿಯುವ ನೀರು. 10 ಸಾವಿರ ನೀವೇಶನಗಳ ಹಂಚಿಕೆ, 2 ಉಪನಗರಗಳು, ಎಲ್ಲ ಕೆರೆಗಳಿಗೆ ನೀರು ತುಂಬಿಸುವುದು, 10 ಸಾವಿರ ಮನೆಗಳ ನಿರ್ಮಾಣ, ಮೋಳೆಗಳ ಸಮಗ್ರ ಅಭಿವೃದ್ಧಿ, ಖಾಸಗಿ ಬಸ್ ನಿಲ್ದಾಣ ಆಧುನೀಕರಣ, ಬಸವಭವನ ನಿರ್ಮಾಣ, ಬಸವಣ್ಣ ಅವರ ದೊಡ್ಡ ಪ್ರತಿಮೆ, ಬಸವ ಜಯಂತಿ, ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ವಾಲ್ಮೀಕಿ ಜಯಂತಿ, ಕನಕದಾಸರ ಜಯಂತಿ, ಭಗೀರಥ ಜಯಂತಿ, ಇನ್ನು ಮುಂತಾದ ಮಹನೀಯರ ಜಯಂತಿ ಆಚರಣೆ
ವಾಟಾಳ್ ಆಗ್ರಹ
ಅವರ ಆಗ್ರಹಗಳು ಹೀಗಿವೆ. ಹಳ್ಳಿಗಳಲ್ಲಿರುವ ವಿದ್ಯಾರ್ಥಿಗಳಗೆ ಉಚಿತ ಕಂಪ್ಯೂಟರ್ ಶಿಕ್ಷಣ, ಹಿಂದುಳಿದ ಗಡಿಪ್ರದೇಶ ಚಾಮರಾಜನಗರದಲ್ಲಿ ವರ್ಷಕ್ಕೆ 2 ಬಾರಿ ಮಂತ್ರಿ ಮಂಡಲ ಸಭೆ ನಡೆಸಲು ಒತ್ತಾಯ, ಸಮಗ್ರ ಅಭಿವೃದ್ಧಿಗೆ 5 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಕೊಡಬೇಕು, ಪ್ರಸಿದ್ಧ ಶ್ರೀ ಚಾಮರಾಜೇಶ್ವರ ನೂತನ ರಥನಿರ್ಮಾಣ ಮಾಡಬೇಕು, ಅದಕ್ಕಾಗಿ ಅತ್ಯಂತ ಪ್ರಾಮಾಣಿಕವಾಗಿ ಹೋರಾಟ.
ವಾಟಾಳ್ ನಾಗರಾಜ್ ಅವರು ತಮ್ಮ ಭಾಷಣವನ್ನು ತುಂಬಾ ಚೆನ್ನಾಗಿ ಮಾಡುತ್ತಿದ್ದು, ನೆರದವರು ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಿದ್ದಾರೆ. ಆದರೆ ಮೇ.12ರಂದು ನಡೆಯುವ ಚುನಾವಣೆ ವೇಳೆ ಅದು ಮತವಾಗಿ ಮತಪೆಟ್ಟಿಗೆ ತುಂಬುತ್ತಾ ಎಂಬುದು ಮೇ.15 ರ ಫಲಿತಾಂಶದಂದು ತಿಳಿಯಲಿದೆ!