ಚಾಮರಾಜನಗರಕ್ಕೆ ಬಾರದ ಮೋದಿ ವಿರುದ್ಧ ವಾಟಾಳ್ ಗರಂ
ಚಾಮರಾಜನಗರ, ಮೇ 02: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಗರಂ ಆಗಿದ್ದಾರೆ. ಇದಕ್ಕೆ ಕಾರಣ ಮೋದಿ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಬಾರದಿರುವುದು.
ಹೀಗಾಗಿ ಮೋದಿ ವಿರುದ್ಧ ಹರಿಹಾಯ್ದಿರುವ ವಾಟಾಳ್ ಮೂಢ ನಂಬಿಕೆಗೆ ಜೋತು ಬಿದ್ದು ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಬಾರದೆ ಇರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶಕ್ಕೆ ಪ್ರಧಾನಿ ಆಗಿರುವುದು ನಾಲಾಯಕ್ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿಗೂ ಕಾಡಿತೇ ಅಧಿಕಾರ ಕಳೆದುಕೊಳ್ಳುವ ಭೀತಿ?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಮರಾಜನಗರಕ್ಕೆ ಬಾರದೆ ಇರುವುದು ಅಕ್ಷಮ್ಯ ಅಪರಾಧವಾಗಿದೆ. ಇದು ಅವರು ಚಾಮರಾಜನಗರ ಅಲ್ಲ ಇಡೀ ದೇಶಕ್ಕೆ ಮಾಡಿದ ಅಪಮಾನವಾಗಿದೆ. ಚಾಮರಾಜನಗರ ಕ್ಷೇತ್ರಕ್ಕೆ ಬಂದಿಲ್ಲ ಎಂದರೆ ದೇಶ ಕಾಯುವ ಯೋಧರ ಗತಿ ಏನು? ಚೀನಾ ಗಡಿ ಹಾಗೂ ಪಾಕಿಸ್ತಾನದ ರಕ್ಷಣೆ ಏನು ಎಂದು ಪ್ರಶ್ನೆ ಮಾಡಿದ್ದಾರೆ.
ಚಾಮರಾಜನಗರಕ್ಕೆ ಬಾರದೆ ಇರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಉನ್ನತ ಮಟ್ಟದ ತನಿಖೆ ಆಗಬೇಕು. ಇವರು ಸಂವಿಧಾನಕ್ಕೆ ಮತ್ತು ಪ್ರಜಾತಂತ್ರ ವ್ಯವಸ್ಥೆಗೆ ಅಪಮಾನ ಮಾಡಿದ್ದಾರೆ. ಅಖಂಡ ಭಾರತ ದೇಶದ ಜನತೆ ಮುಂದೆ ಬಹಿರಂಗ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಇವರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ವಾಟಾಳ್ ಎಚ್ಚರಿಸಿದ್ದಾರೆ.