ಕರ್ನಾಟಕ ಮೂಲದ ನಕ್ಸಲ್ ಮಹಿಳೆ ಬಂಧಿಸಿದ ಕೊಯಮತ್ತೂರು ಪೊಲೀಸರು
ಚಾಮರಾಜನಗರ, ಮಾರ್ಚ್ 12: ಕರ್ನಾಟಕ ಮೂಲದ, ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು ಎನ್ನಲಾದ ಶ್ರೀಮತಿ ಎಂಬ ಮಹಿಳೆಯನ್ನು ತಮಿಳುನಾಡಿನ ಪೊಲೀಸರು ನಿನ್ನೆ ತಡರಾತ್ರಿ ಬಂಧಿಸಿದ್ದಾರೆ.
ಕೊಯಮತ್ತೂರು ಪೊಲೀಸ್ ಠಾಣೆಯ ಅನೈಕಟ್ಟಿ ಬಳಿಯ ಅರಣ್ಯ ಪ್ರದೇಶದ ಬೆಟ್ಟದಲ್ಲಿ ಅಡಗಿಕೊಂಡಿದ್ದ ಶ್ರೀಮತಿಯನ್ನು ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ. ಈಕೆ ಮೇಲೆ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ 11 ಪ್ರಕರಣ, ಹ್ರೆಬಿ ಠಾಣೆಯಲ್ಲಿ ಒಂದು, ಕಾರ್ಕಳ ಠಾಣೆಯಲ್ಲಿ ಒಂದು, ಆಗುಂಬೆ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಒಟ್ಟು 14 ಪ್ರಕರಣಗಳು ಈಕೆಯ ಮೇಲಿವೆ.
ಗುಂಡ್ಲುಪೇಟೆ ಗಡಿ ಭಾಗದ ಕೇರಳದಲ್ಲಿ ಮತ್ತೆ ನಕ್ಸಲರ ಅಟ್ಟಹಾಸ
ಕಳೆದ ಅಕ್ಟೋಬರ್ ತಿಂಗಳಲ್ಲಿ ಕೇರಳದ ಪಾಲ್ಕಾಡನ ಮಂಚಕಟ್ಟಿಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ ಥಂಡರ್ ಬೋಲ್ಟ್ ಕಮಾಂಡೊ ಪಡೆ, ತಮಿಳುನಾಡಿನ ಮಣಿವಸಗಂ, ರೇನು, ಕಾರ್ತಿಕ, ಅರವಿಂದ ಎಂಬ ನಾಲ್ಕು ಜನ ನಕ್ಸಲರನ್ನು ಹತ್ಯೆ ಮಾಡಿತ್ತು. ಇದಲ್ಲದೆ ಕೇರಳದ ವೈನಾಡು ಜಿಲ್ಲೆಯ ಮೇಪಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಅಟ್ಟಮಾಳ ಜೀನ್ಸ್ ರೆಸಾರ್ಟ್ ಮೇಲೆ ಜನವರಿ 15ರಂದು ನಾಲ್ಕು ಜನರ ನಕ್ಸಲ್ ತಂಡ ದಾಳಿ ಮಾಡಿ ರೆಸಾರ್ಟ್ನ ಕಿಟಕಿಯ ಗಾಜು ಬಾಗಿಲುಗಳನ್ನು ಪುಡಿಮಾಡಿತ್ತು.
ಈ ಬಗ್ಗೆ ಕೊಯಮತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.