ನಿಸರ್ಗಪ್ರೇಮಿಗಳಿಗೆ ವರದಾನ ಕರಿವರದರಾಜಸ್ವಾಮಿ ಬೆಟ್ಟ
ನಗರದ ಮತ್ತು ಸುತ್ತಮುತ್ತಲಿನ ನಿಸರ್ಗ ಪ್ರೇಮಿಗಳಿಗೆ ಕರಿವರದರಾಜಸ್ವಾಮಿ ಬೆಟ್ಟ ವರದಾನ ಎಂದರೂ ತಪ್ಪಾಗಲಾರದು. ಒಂದಷ್ಟು ಸಮಯಗಳನ್ನು ಪ್ರಕೃತಿಯ ನಡುವೆ ಕಳೆದುಹೋಗಲು ಸ್ಥಳೀಯರು ಸೇರಿದಂತೆ ಪ್ರವಾಸಿಗರು ಆಗಾಗ್ಗೆ ಭೇಟಿ ನೀಡುತ್ತಲೇ ಇರುತ್ತಾರೆ.
ಸದಾ ಕೆಲಸದ ಒತ್ತಡದಲ್ಲಿ ಸಿಲುಕಿದವರು ತಮ್ಮೆಲ್ಲ ಜಂಜಾಟಗಳನ್ನು ಮರೆತು ಒಂದಷ್ಟು ಹೊತ್ತು ಸಂತೋಷವಾಗಿದ್ದು ಬರಬೇಕಾದರೆ ನಿಸರ್ಗ ರಮಣೀಯ ತಾಣಗಳಿಗೆ ಭೇಟಿ ನೀಡಬೇಕಾಗುತ್ತದೆ.
ನಮ್ಮೆಲ್ಲ ಮಾನಸಿಕ ವೇದನೆಯನ್ನು ದೂರಗೊಳಿಸುವ ಅದ್ಭುತ ಶಕ್ತಿಯಿರುವುದು ಪ್ರಕೃತಿಗೆ ಮಾತ್ರ ಎಂಬುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸದಾ ಪೇಟೆಪಟ್ಟಣ, ಕೆಲಸ, ಕಾರ್ಯ ಎನ್ನುತ್ತಾ ಒತ್ತಡದಲ್ಲೇ ಬದುಕನ್ನು ಸಾಗಿಸುವವರು ಒಂದಷ್ಟು ಸಮಯವನ್ನು ಯಾವುದಾದರೂ ಸುಂದರ ರಮಣೀಯ ಸ್ಥಳದಲ್ಲಿ ಕಳೆದು ಬಂದರೆ ಮನಸ್ಸು ಹಗುರವಾಗುತ್ತದೆ.
ದೇವರ ಸೃಷ್ಟಿಯೋ? ಪ್ರಕೃತಿಯ ವರದಾನವೋ ಒಂದಲ್ಲ ಒಂದು ರೀತಿಯಲ್ಲಿ ಸುಂದರ ಪ್ರಕೃತಿಯ ರಮಣೀಯ ತಾಣಗಳು ಅಲ್ಲಲ್ಲಿ ಕಾಣಸಿಗುತ್ತವೆ. ಅವು ಐತಿಹಾಸಿಕ ಮತ್ತು ಪೌರಾಣಿಕವಾಗಿಯೂ ಗಮನಸೆಳೆಯುತ್ತವೆ. ಇಂತಹ ತಾಣಗಳ ಪೈಕಿ ಚಾಮರಾಜನಗರದ ಹೊರವಲಯದಲ್ಲಿರುವ ಐತಿಹಾಸಿಕ ಕರಿವರದರಾಜಸ್ವಾಮಿ ಬೆಟ್ಟವೂ ಒಂದಾಗಿದೆ. [ನಿಸರ್ಗ ಪ್ರೇಮಿಗಳ ಸ್ವರ್ಗ ಹಿಮವದ್ ಗೋಪಾಲಸ್ವಾಮಿ ಬೆಟ್ಟ]
ನಗರದ ಮತ್ತು ಸುತ್ತಮುತ್ತಲಿನ ನಿಸರ್ಗ ಪ್ರೇಮಿಗಳಿಗೆ ಇದೊಂದು ವರದಾನ ಎಂದರೂ ತಪ್ಪಾಗಲಾರದು. ಒಂದಷ್ಟು ಸಮಯಗಳನ್ನು ಪ್ರಕೃತಿಯ ನಡುವೆ ಕಳೆದುಹೋಗಲು ಸ್ಥಳೀಯರು ಸೇರಿದಂತೆ ಪ್ರವಾಸಿಗರು ಆಗಾಗ್ಗೆ ಭೇಟಿ ನೀಡುತ್ತಲೇ ಇರುತ್ತಾರೆ.
ಪ್ರವಾಸಿಗರ ಅನುಕೂಲಕ್ಕಾಗಿ ಕೆಲವರ್ಷಗಳ ಹಿಂದೆ ಇಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಪ್ರವಾಸಿಗರಿಗೆ ಕುಳಿತು ಅನುಕೂಲವಾಗಲೆಂದು ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಇಲ್ಲಿರುವ ನೆಲಬಾವಿಗೆ ಸುರಕ್ಷತೆಯ ದೃಷ್ಟಿಯಿಂದ ಕಬ್ಬಿಣದ ಗ್ರಿಲ್ಗಳನ್ನು ಅಳವಡಿಸಲಾಗಿದೆ. [ಮಲೆನಾಡಿನ ಆತಿಥ್ಯ, ಮನ ಮೆಚ್ಚುವ ಪರಿಸರಕ್ಕೆ 'ಅಮ್ತಿ ಹೋಂ ಸ್ಟೇ']
ಕರಿವರದರಾಜ ಬೆಟ್ಟವು ಚಾಮರಾಜನಗರದಿಂದ ಕೇವಲ 4 ಕಿಲೋಮೀಟರ್ ದೂರದಲ್ಲಿದ್ದು, ಸಮುದ್ರಮಟ್ಟದಿಂದ 480 ಅಡಿ ಎತ್ತರದಲ್ಲಿದೆ. ಈ ಬೆಟ್ಟವನ್ನು ಹಿಂದಿನ ಕಾಲದಲ್ಲಿ ವೃದ್ಧಾಚಲ ಪರ್ವತಸ್ತೋಮ ಎಂದೇ ಕರೆಯಲಾಗುತ್ತಿತ್ತಂತೆ. ಕಲ್ಲುಬಂಡೆಗಳ ಪರ್ವತ ಹೊಂದಿರುವ ಇಲ್ಲಿಂದ ನಿಂತು ಇಣುಕಿದರೆ ಸುಂದರ ನಿಸರ್ಗ ರಮಣೀಯ ನೋಟ ಲಭ್ಯವಾಗುತ್ತದೆ.
ಈ ಬೆಟ್ಟದಲ್ಲಿ ಹೊಯ್ಸಳರ ಕಾಲದ್ದು ಎನ್ನಲಾದ ಸಂಜೀವಿನಿ ಆಂಜನೇಯಗುಡಿಯಿದ್ದು, ಈ ಗುಡಿಯಲ್ಲಿ ಸುಮಾರು ಎರಡೂವರೆ ಅಡಿ ಎತ್ತರದ ಕರಿವರದರಾಜ ವೆಂಕಟರಮಣಸ್ವಾಮಿಯ ಸುಂದರ ಮೂರ್ತಿಯೂ ಇದೆ. ಈ ದೇವಸ್ಥಾನಕ್ಕೆ ಸುಮಾರು ಮೂರು ಶತಮಾನಗಳ ಇತಿಹಾಸವಿದ್ದು ಕ್ರಿ.ಶ. 1688ರಲ್ಲಿ ನಿರ್ಮಾಣ ಮಾಡಿರಬಹುದೆಂದು ಹೇಳಲಾಗುತ್ತಿದೆ. [ವಿಶೇಷ ಲೇಖನ: ಕಾವೇರಿ ನದಿ ದಡ 'ಗುಹ್ಯ'ದ ಗುಟ್ಟು]
ಮೈಸೂರು ಒಡೆಯರ್ ಕಾಲದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಬೆಟ್ಟಕ್ಕೆ ಭೇಟಿ ನೀಡಿದ್ದರು, ಅಲ್ಲದೆ ದೇವಸ್ಥಾನಕ್ಕೆ ಕಚ್ಚಾ ರಸ್ತೆ ಹಾಗೂ ಮೆಟ್ಟಿಲನ್ನು ನಿರ್ಮಿಸಲು ವ್ಯವಸ್ಥೆ ಮಾಡಿದ್ದರು. ನಗರಕ್ಕೆ ಹೊಂದಿಕೊಂಡಿರುವುದರಿಂದ ತೆರಳಲು ಅನುಕೂಲವಿದೆ. ಈ ತಾಣವನ್ನು ಇನ್ನಷ್ಟು ಅಭಿವೃದ್ಧಿ ಮಾಡಿದ್ದೇ ಆದರೆ ಪ್ರವಾಸಿಗರ ಗಮನಸೆಳೆಯುವುದರಲ್ಲಿ ಸಂಶಯವಿಲ್ಲ.