ಅಚ್ಚರಿ ಮೂಡಿಸಿದ ಎಚ್ ವಿಶ್ವನಾಥ್-ಶ್ರೀನಿವಾಸ್ ಪ್ರಸಾದ್ ಭೇಟಿ
ಚಾಮರಾಜನಗರ, ಜೂನ್ 14: ಇತ್ತೀಚೆಗಷ್ಟೇ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹುಣಸೂರು ಶಾಸಕ ಎಚ್ ವಿಶ್ವನಾಥ್ ಅವರು ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಲೋಕಸಭೆ ಚುನಾವಣೆಯ ಸೋಲಿಗೆ ನೈತಿಕ ಹೊಣೆ ಹೊತ್ತು ಎಚ್ ವಿಶ್ವನಾಥ್ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಇದೀಗ ಅವರು ಚಾಮರಾಜನಗರದ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಮನೆಯಲ್ಲಿ ಕಾಣಿಸಿಕೊಂಡಿರುವುದು ವಿಶ್ವನಾಥ್ ಬಿಜೆಪಿ ಸೇರುತ್ತಾರಾ ಎಂಬ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ತೀರ್ಮಾನ ಮರು ಪರಿಶೀಲಿಸಲು ಎಚ್.ವಿಶ್ವನಾಥ್ಗೆ ದೇವೇಗೌಡರ ಸಲಹೆ
ಆದರೆ ಈ ಮೊದಲೂ ಅವರು ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿದ್ದರು. "ನಾನು ಶ್ರೀನಿವಾಸ್ ಪ್ರಸಾದ್ ಇಬ್ಬರೂ ಬಾಲ್ಯ ಸ್ನೇಹಿತರು. ರಾಜಕೀಯವಾಗಿ ಬೇರೆ ಬೇರೆ ಪಕ್ಷದಲ್ಲಿದ್ದೇವೆ ಎಂಬ ಮಾತ್ರಕ್ಕೆ ಸೌಹಾರ್ದ ಭೇಟಿಯನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ. ನಾನು ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರನ್ನೂ ಭೇಟಿಯಾಗಿದ್ದೇನೆ. ನಾವೆಲ್ಲರೂ ಸ್ನೇಹಿತರು ಅಷ್ಟೆ. ನನ್ನ ಶ್ರೀನಿವಾಸ್ ಪ್ರಸಾದ್ ಭೇಟಿಗೆ ಬೇರೆ ಅರ್ಥವಿಲ್ಲ" ಎಂದಿದ್ದರು.
ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿದ ವಿಶ್ವನಾಥ್ ಅವರು, ಸಚಿವ ಸ್ಥಾನ ಸಿಕ್ಕರೆ ಸಂತೋಷ ಎಂದಿದ್ದರು. ಆದರೆ ಮೈತ್ರಿ ಸರ್ಕಾರದ ಸಚಿವ ಸಂಪುಟದಲ್ಲಿ ಶುಕ್ರವಾರ ಕೆಲವು ಬದಲಾವಣೆಗಳು ಆಗಲಿದ್ದು, ಸಂಪುಟಕ್ಕೆ ವಿಶ್ವನಾಥ್ ಅವರನ್ನು ಸೇರಿಸಿಸಕೊಳ್ಳುವುದು ದೂರದ ಮಾತು. ಈ ಎಲ್ಲಾ ಕಾರಣಗಳಿಂದ ವಿಶ್ವನಾಥ್ ಅವರ ಭೇಟಿಗೆ ಬೇರೆಯದೇ ಆಯಾಮ ಸಿಕ್ಕಿದೆ.
ಬಿಜೆಪಿ ಸೇರುವ ಬಗ್ಗೆ ಸ್ಪಷ್ಟನೆ ನೀಡಿದ ಎಚ್.ವಿಶ್ವನಾಥ್
ಕಾಂಗ್ರೆಸ್ ನಲ್ಲಿದ್ದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಎದ್ದ ಮನಸ್ತಾಪದಿಂದಾಗಿ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು. ಆದರೆ ವಿಧಾನಸಭೆ ಚುನಾವಣೆಯ ನಂತರ ಜೆಡಿಎಸ್, ಕಾಂಗ್ರೆಸ್ ನೊಂದಿಗೆ ಕೈಜೋಡಿಸುವುದು ಅವರಿಗೆ ಇಷ್ಟವರಿಲಿಲ್ಲ. ಇದೇ ಅವರು ಸರ್ಕಾರದ ಮೇಲೆ ಮುನಿಸಿಕೊಳ್ಳುವುದುಕ್ಕೆ ಮುಖ್ಯ ಕಾರಣವಾಗಿತ್ತು.