ಅರಣ್ಯ ಇಲಾಖೆಯಿಂದ ದೇಶದಲ್ಲೇ ಮೊದಲ ಹಳ್ಳಿಕಾರ್ ತಳಿಯ ಹಾಲಿನ ಡೈರಿ ಸ್ಥಾಪನೆ
ಚಾಮರಾಜನಗರ, ಜುಲೈ 29: ಅರಣ್ಯ ಇಲಾಖೆಯ ಮಲೆ ಮಹದೇಶ್ವರ ವನ್ಯಜೀವಿ ವಿಭಾಗವು ರೈತರ ಅನುಕೂಲಕ್ಕಾಗಿ ದೇಸಿ ತಳಿಯ ಹಳ್ಳಿಕಾರ್ ಗೋವಿನ ಉತ್ಪನ್ನಗಳ ಮಾರುಕಟ್ಟೆಗಾಗಿ ಹಾಲಿನ ಡೈರಿಯೊಂದನ್ನು ಸ್ಥಾಪಿಸಲು ಮುಂದಾಗಿದೆ.
ಈ ಯೋಜನೆಯು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕೊಂಡಲು ಕಲ್ಪನೆಯ ಕೂಸು ಆಗಿದೆ. ಗುರುವಾರ ಈ ವಿಚಾರವಾಗಿ ವರದಿಗಾರರೊಂದಿಗೆ ಮಾತನಾಡಿದ ಅವರು, "ದೇಸಿ ಜಾನುವಾರು ತಳಿ ಹಳ್ಳಿಕಾರ್ ಗೋವಿನ ಹಾಲು ಮತ್ತು ತುಪ್ಪವನ್ನು ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತಿರುವುದು ದೇಶದಲ್ಲೇ ಮೊದಲನೆಯದಾಗಿದೆ,'' ಎಂದರು.
ಮಲೆಮಹದೇಶ್ವರ ಬೆಟ್ಟದಲ್ಲಿ ನಿಲ್ಲದ ಅರಣ್ಯ ಅಪರಾಧ: ಬೆಚ್ಚಿಬೀಳಿಸಿದ ಅಂಕಿಅಂಶ
"ಈಗಾಗಲೇ ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ನಡುವೆ ಮಾತುಕತೆ ನಡೆದಿದ್ದು, ಪೊನ್ನಾಚಿಯಲ್ಲಿ ಡೈರಿ ಸ್ಥಾಪಿಸಲಾಗುವುದು, ಇದನ್ನು ಹಾಲು ಉತ್ಪಾದಕರು ಸಹಕಾರಿ ತತ್ವದ ಆಧಾರದ ಮೇಲೆ ನಡೆಸುತ್ತಾರೆ. ಪ್ಯಾಕಿಂಗ್ ಯಂತ್ರೋಪಕರಣಗಳು ಮತ್ತು ಕಟ್ಟಡಕ್ಕಾಗಿ ಡೈರಿ ಸ್ಥಾಪಿಸಲು 20 ಲಕ್ಷ ರೂ. ಹೂಡಿಕೆಯ ಅಗತ್ಯವಿದೆ, ಅದನ್ನು ದಾನಿಗಳಿಂದ ಸಂಗ್ರಹಿಸಲಾಗುವುದು,'' ಎಂದು ಹೇಳಿದರು.
"ಎಲ್ಲಾ ಸದಸ್ಯರು ಡೈರಿಯ ಮಾಲೀಕರಾಗಿರುತ್ತಾರೆ. ಅರಣ್ಯ ಇಲಾಖೆ ಹಳ್ಳಿಕಾರ್ ತಳಿ ದನಗಳನ್ನು ಸಾಕಲು ಸಹಾಯ ಮಾಡುತ್ತದೆ. ದೇಶದಲ್ಲಿ ಸಾವಯವ ಉತ್ಪನ್ನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗ ಮಾರುಕಟ್ಟೆಯಲ್ಲಿ ಉತ್ಪಾದನೆಗಳ ಲಭ್ಯತೆಯಿಲ್ಲ. ಈಗಿನ ಬಿಗಿ ನಿಯಮಾವಳಿಗಳ ಕಾರಣದಿಂದ ವನ್ಯಜೀವಿ ಅಭಯಾರಣ್ಯದೊಳಗೆ ದನಕರುಗಳನ್ನು ಬಿಡಲು ಸಾದ್ಯವಿಲ್ಲ.
Recommended Video
"ಇದೇ ಕಾರಣಕ್ಕೆ ಇಲಾಖೆ ಮತ್ತು ರೈತರ ನಡುವೆ ಸಂಘರ್ಷವೂ ಉಂಟಾಗಿತ್ತು. ಇದನ್ನು ನಿವಾರಿಸಲು ಈಗ ಇಲಾಖೆಯೇ ಡೈರಿ ಸ್ಥಾಪನೆಗೆ ಮುಂದಾಗುವ ಮೂಲಕ ರೈತರು ಅರಣ್ಯಕ್ಕೆ ಕಡಿಮೆ ಅವಲಂಬಿತರಾಗುವಂತೆ ಮಾಡಲಾಗುತ್ತಿದೆ. ಅರಣ್ಯ ಇಲಾಖೆಯು 3- 4 ರೈತರಿಗೆ ಒಂದರಂತೆ ಬೋರ್ವೆಲ್ ಸೌಲಭ್ಯವನ್ನು ಒದಗಿಸುವ ಮೂಲಕ ರೈತರು ತಮ್ಮ ಹೊಲಗಳಲ್ಲಿ ಹುಲ್ಲು ಬೆಳೆಸಿಕೊಂಡು ಹಸು ಸಾಕಲು ಯೋಜಿಸಲಾಗಿದೆ,'' ಎಂದು ಹೇಳಿದರು.
"ಮುಂದಿನ ಆಗಸ್ಟ್ ತಿಂಗಳ ಅಂತ್ಯದಲ್ಲಿ ಡೈರಿಯ ಕಾಮಗಾರಿ ಆರಂಭಗೊಳ್ಳಲಿದ್ದು, ಹಳ್ಳಿಕಾರ್ ಸಾವಯವ ತುಪ್ಪದ ಬ್ರಾಂಡ್ ಹೆಸರಿನಲ್ಲಿ ಉತ್ಪನ್ನಗಳನ್ನು ಪ್ಯಾಕ್ ಮಾಡಿ ಮಾರಾಟ ಮಾಡುತ್ತದೆ. ಪೊನ್ನಾಚಿ ಗ್ರಾಮದಲ್ಲಿ 1500ಕ್ಕೂ ಹೆಚ್ಚು ಹಳ್ಳಿಕಾರ್ ತಳಿ ದನಗಳಿದ್ದು, ಈಗ ಇವರು ಹಾಲನ್ನು ಕೆಎಂಎಫ್ಗೆ ನೀಡುತ್ತಿದ್ದು, ಅಲ್ಲಿ ಯಾವುದೇ ಬ್ರಾಂಡ್ ಇಲ್ಲ.''
"ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಚಾಮರಾಜನಗರ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಸಣ್ಣ ರೈತರನ್ನು ಹೊಂದಿದೆ. ಡೈರಿ ಕೃಷಿ ಉತ್ತಮ ಆದಾಯವನ್ನು ನೀಡುತ್ತದೆ ಮತ್ತು ರೈತ ಮಹಿಳೆಯರಿಗೆ ಉದ್ಯೋಗವನ್ನು ನೀಡುತ್ತದೆ. ಜೀವನೋಪಾಯಕ್ಕಾಗಿ ಡೈರಿಯನ್ನು ಅವಲಂಬಿಸಿ ಸಾವಿರಾರು ಕುಟುಂಬಗಳಿವೆ. ಆದರೆ ಇಲ್ಲಿಯವರೆಗೆ ಯಾವುದೇ ಬ್ರಾಂಡ್ ಇಲ್ಲ.''
ಅರಣ್ಯ ಇಲಾಖೆಯ ಈ ಯೋಜನೆ ಜಿಲ್ಲೆಯಲ್ಲಿ ಹೈನುಗಾರಿಕೆ ಮತ್ತು ರೈತರ ಆರ್ಥಿಕತೆಯನ್ನು ಬಲಪಡಿಸಲಿದೆ. ಈ ಕುರಿತು ಮಾತನಾಡಿದ ಪೊನ್ನಾಚಿಯ ರೈತ ತಂಗವೇಲು, "ನಮಗೆ ಇಲ್ಲಿಯೇ ಹಾಲನ್ನು ಡೈರಿಗೆ ಹಾಕುವುದರಿಂದ ಮತ್ತು ಹುಲ್ಲು ಬೆಳೆಸಲೂ ಸಹಾಯ ನೀಡಲು ಇಲಾಖೆ ಮುಂದಾಗಿರುವುದರಿಂದ ಹೆಚ್ಚು ಅನುಕೂಲವಾಗಲಿದೆ'' ಎಂದರು.