ಚಾಮರಾಜನಗರದಲ್ಲಿ ತೋಳ ಪತ್ತೆಯಾಗಿರುವುದಲ್ಲಿ ವಿಶೇಷ ಏನಿದೆ?
ಚಾಮರಾಜನಗರ, ಮೇ 09: ಜಿಲ್ಲೆಯಲ್ಲಿರುವ ಅಭಯಾರಣ್ಯಗಳಲ್ಲಿ ಚಿರತೆ, ಹುಲಿ, ಜಿಂಕೆ, ಕಾಡೆಮ್ಮೆ, ಕಾಡಾನೆಯನ್ನಷ್ಟೆ ನೋಡಿದ ಜನಕ್ಕೆ ಇದೀಗ ಕೊಳ್ಳೇಗಾಲ ತಾಲೂಕಿನ ಕಾವೇರಿ ವನ್ಯಜೀವಿಧಾಮದ ಕೊತ್ತನೂರು ವಲಯದಲ್ಲಿ ಮೊದಲ ಬಾರಿಗೆ ತೋಳವೊಂದು ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ. ಜತೆಗೆ ನಾಯಿ ಜಾತಿಗೆ ಸೇರಿರುವ ನಾಲ್ಕು ಪ್ರಭೇದಗಳು ಚಾಮರಾಜನಗರದಲ್ಲಿರುವುದು ದಾಖಲಾದಂತಾಗಿದೆ.
ಇತ್ತೀಚೆಗೆ ನೇಚರ್ ಕನ್ಸರ್ವೇಷನ್ ಫೌಂಡೇಶನ್ ನ ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಮತ್ತು ಅವರ ತಂಡ ಚಿರತೆಗಳ ಕುರಿತು ಅಧ್ಯಯನಕ್ಕಾಗಿ ಹಾಕಿದ್ದ ಕ್ಯಾಮರಾ ಟ್ರ್ಯಾಪ್ ನಲ್ಲಿ, ಕಾವೇರಿ ವನ್ಯಜೀವಿಧಾಮದ ಕೊತ್ತನೂರು ವಲಯದಲ್ಲಿ ತೋಳವೊಂದು ಸಂಚರಿಸಿರುವುದು ಸೆರೆಯಾಗಿದೆ.
ಗಿರ್ ಅರಣ್ಯದಲ್ಲಿ ಮೂರು ತಿಂಗಳ ಅಂತರದಲ್ಲಿ 23 ಸಿಂಹಗಳ ಸಾವು
ತೋಳ ಕಾಣಿಸಿಕೊಂಡಿರುವುದರಲ್ಲಿ ಅಂಥದ್ದೇನಿದೆ?
ಇಷ್ಟಕ್ಕೂ ತೋಳ ಸೆರೆಯಾಗಿರುವುದರಲ್ಲಿ ವಿಚಿತ್ರ ಏನಿದೆ ಎಂಬ ಪ್ರಶ್ನೆ ಎಲ್ಲರನ್ನು ಕಾಡಬಹುದು. ಆದರೆ ಈ ಪ್ರದೇಶದಲ್ಲಿ ತೋಳಗಳು ವಾಸಿಸುವುದು ಅಪರೂಪವಾಗಿದೆ. ಅವು ಏನಿದ್ದರೂ ಒಣ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಆದರೆ ಇಲ್ಲಿ ಕಾಣಿಸಿಕೊಂಡಿರುವುದೇ ಅಚ್ಚರಿ ಮೂಡಿಸಿದೆ.
ಚಾಮರಾಜನಗರದಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ತಂದಿದೆ
ಕರ್ನಾಟಕದಲ್ಲಿ ಹಾವೇರಿ, ಕೊಪ್ಪಳ, ತುಮಕೂರು, ರಾಯಚೂರು, ಬಳ್ಳಾರಿ ಮತ್ತಿತರ ಜಿಲ್ಲೆಗಳಲ್ಲಿ ಕಂಡು ಬರುತ್ತವೆ. ಜತೆಗೆ ಹೆಚ್ಚಾಗಿ ಒಣ ಹುಲ್ಲುಗಾವಲು, ಕುರುಚಲು ಕಾಡುಗಳಲ್ಲಿ, ಎಲೆ ಉದುರುವ ಕಾಡುಗಳಲ್ಲಿ ಕಂಡು ಬರುತ್ತವೆ ಎನ್ನಲಾಗುತ್ತದೆ. ಹೀಗಿರುವಾಗ ಚಾಮರಾಜನಗರದ ಕಾಡುಗಳಲ್ಲಿ ತೋಳ ಕಂಡು ಬಂದಿರುವುದು ಈಗ ಅಚ್ಚರಿಗೆ ಕಾರಣವಾಗಿದೆ.
ಇಲ್ಲಿ ಎಂದಿಗೂ ತೋಳ ಇರುವುದು ದಾಖಲಾಗಿಲ್ಲ
ಹಾಗೆ ನೋಡಿದರೆ ತೋಳಗಳು ಕೂಡ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಗುಂಪಿಗೆ ಸೇರಿದೆ. ಹಲವು ಕಾರಣಗಳಿಗೆ ಅವುಗಳು ನಾಶವಾಗುತ್ತಿದ್ದು, ಇವುಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಶೆಡ್ಯೂಲ್ - 1ರಲ್ಲಿ ಸಂರಕ್ಷಿತವಾಗಿವೆ. ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಕಾವೇರಿ ವನ್ಯಜೀವಿಧಾಮ ಮತ್ತು ಮಲೈ ಮಹದೇಶ್ವರ ವನ್ಯಜೀವಿಧಾಮಗಳು, ಬಿಳಿಗಿರಿರಂಗನಬೆಟ್ಟ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹಿಂದೆ ಕೈಗೊಂಡ ಯಾವುದೇ ಅಧ್ಯಯನಗಳಲ್ಲೂ ತೋಳಗಳು ದಾಖಲಾಗಿರಲಿಲ್ಲ.
ಕ್ಯಾಮೆರಾದಲ್ಲಿ ಸೆರೆಯಾಗಿರುವ ತೋಳ
ಇದೀಗ ತೋಳ ಕ್ಯಾಮರಾದಲ್ಲಿ ಸೆರೆಯಾಗಿರುವುದರಿಂದ ದಕ್ಷಿಣ ಭಾರತದಲ್ಲಿ ನಾಯಿ ಜಾತಿಗೆ ಸೇರಿರುವ ನಾಲ್ಕು ಪ್ರಭೇದಗಳಾದ ಸೀಳು ನಾಯಿ, ತೋಳ, ಗುಳ್ಳೆ ನರಿ ಮತ್ತು ಕಪ್ಪಲು ನರಿ ಸೇರಿದಂತೆ ಎಲ್ಲ ವನ್ಯಜೀವಿಗಳು ಚಾಮರಾಜನಗರ ಜಿಲ್ಲೆಯಲ್ಲಿರುವುದಕ್ಕೆ ಹೆಮ್ಮೆಪಡುವಂತಾಗಿದೆ.