ಸ್ವಾತಂತ್ರ್ಯ ಬರುವವರೆಗೆ ಮದುವೆಯಾಗಲ್ಲ ಎಂದು ಶಪಥ ಮಾಡಿದ್ದ ಚಾಮರಾಜನಗರದ ಹೋರಾಟಗಾರ ಶಂಕರಪ್ಪ
ಚಾಮರಾಜನಗರ, ಆಗಸ್ಟ್ 14: ದೇಶಕ್ಕೆ ಸ್ವಾತಂತ್ರ್ಯ ಸಿಗುವ ತನಕ ತಾನು ಮದುವೆಯಾಗಲ್ಲ ಎಂದು ಶಪಥ ಗೈದ ಯುವಕನೋರ್ವ ಅದೇ ರೀತಿ ನಡೆದು ಕೊನೆಗೇ ಸ್ವಾತಂತ್ರ್ಯ ಹೋರಾಟಗಾರರ ನೇತೃತ್ವದಲ್ಲಿ ವೈವಾಹಿಕ ಬಂಧನಕ್ಕೆ ಕಾಲಿಟ್ಟ ಅಪರೂಪದ ಘಟನೆ ಅಂದಿನ ಅವಿಭಜಿತ ಮೈಸೂರು ಜಿಲ್ಲೆಗೆ ಒಳಪಟ್ಟ ಚಾಮರಾಜನಗರದಲ್ಲಿ ನಡೆದಿತ್ತು.
ಚಾಮರಾಜನಗರ ತಾಲೂಕಿನ ದೊಡ್ದರಾಯಪೇಟೆ ಗ್ರಾಮದ ಶಂಕರಪ್ಪ ಎಂಬವರು ಮಹಾತ್ಮ ಗಾಂಧಿ ಅವರ ಭಾರತ ಬಿಟ್ಟು ತೊಲಗಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಒಂದು ವರ್ಷ ಸೆರೆಮನೆ ವಾಸ ಅನುಭವಿಸಿ ಅಪ್ಪಟ ಗಾಂಧಿವಾದ ರೂಢಿಸಿಕೊಂಡಿದ್ದರು.
ಠಾಣೆ ಮೇಲೆ ಧ್ವಜ ಹಾರಿಸಿ ಸೆರೆವಾಸ, ಪೊಲೀಸರ ಲಾಠಿ ಕಿತ್ತು ಬಿಸಾಕುತ್ತಿದ್ದ ಲಲಿತಾ ಟಾಗೆಟ್
ಮಹಾತ್ಮ ಗಾಂಧಿ ಅವರ ಕ್ವಿಟ್ ಇಂಡಿಯಾ ಚಳವಳಿಯನ್ನು ಚಾಮರಾಜನಗರ ಗ್ರಾಮೀಣ ಭಾಗಕ್ಕೂ ಪಸರಿಸಿ ದೇಶದ ಕಿಚ್ಚನ್ನು ಹೆಚ್ಚಿಸಿದ ಕೀರ್ತಿ ದೊಡ್ಡರಾಯಪೇಟೆ ಶಂಕರಪ್ಪ( ಡಿ.ಜಿ.ಶಂಕರಪ್ಪ, ರಂಗಸ್ವಾಮಿ, ವೆಂಕಟರಾವ್, ಸಿ.ಗೋಪಾಲರಾವ್, ಕೆ.ವಿ.ಕೃಷ್ಣಮೂರ್ತಿ, ನಾಗೇಶ್ ಎಂಬ ಈ ಹೋರಾಟಗಾರರ ಗುಂಪಿಗೆ ಸಲ್ಲಲಿದೆ.
ಸ್ವಾತಂತ್ರ್ಯ ಕಿಚ್ಚು ಹತ್ತಿಸಿಕೊಂಡು ಪ್ರಾಥಮಿಕ ಶಾಲಾ ಅವಧಿಯಲ್ಲೇ ಓದು ಬಿಟ್ಟು ಹೋರಾಟಕ್ಕಿಳಿದ ಶಂಕರಪ್ಪ ಅವರಿಗೆ ಮದುವೆ ಮಾಡಬೇಕೆಂದು ಮನೆಯವರು ಪಟ್ಟು ಹಿಡಿಯುತ್ತಾರೆ, ಸ್ನೇಹಿತರು ಒತ್ತಾಯಿಸುತ್ತಾರೆ. ಯಾರಾ ಮಾತಿಗೂ ಸೊಪ್ಪು ಹಾಕದ ಶಂಕರಪ್ಪ ದೇಶ ಸ್ವಾತಂತ್ರ್ಯಗೊಳ್ಳುವ ತನಕ ತಾನು ವಿವಾಹ ಆಗಲ್ಲ ಎಂದು ಶಪಥಗೈದು ಕೊನೆಗೇ ದೇಶ ಸ್ವಾತಂತ್ರ್ಯಗೊಂಡ ಬಳಿಕವೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ.
ಶಂಕರಪ್ಪ ಅವರ ಶಪಥದ ಬಗ್ಗೆ ಮಾಹಿತಿ ಅರಿತಿದ್ದ ತಗಡೂರು ರಾಮಚಂದ್ರರಾಯರು, ದೊರೆಸ್ವಾಮಿ ಹಾಗೂ ಇನ್ನಿತರ ಹೋರಾಟಗಾರರು ಸೇರಿ ಮದುವೆ ಮಾಡಿ ಶಪಥಕ್ಕೆ ಮಂಗಳ ಹಾಡುತ್ತಾರೆ. ಶಂಕರಪ್ಪ ಮದುವೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರೇ ಓಡಾಡಿ ಒಡನಾಡಿಯ ವಿವಾಹ ಸಂಭ್ರಮ ಹೆಚ್ಚಿಸುತ್ತಾರೆ.
ಮೊದಲ ಮಗಳಿಗೆ ಸರ್ವೋದಯ ಎಂದು ಹೆಸರು
ಶಂಕರಪ್ಪ ಅಪ್ಪಟ ಗಾಂಧಿವಾದಿಯಾಗಿದ್ದು ಗಾಂಧಿ ತತ್ವಗಳು ತಮ್ಮ ಮನೆಯಲ್ಲಿ ಹಾಸುಹೊಕ್ಕಾಗಿರಲು ಪ್ರಯತ್ನಿ ಸಫಲರೂ ಆಗುತ್ತಾರೆ. ಸ್ವಾತಂತ್ರ್ಯ ಸಿಕ್ಕ ಬಳಿಕ ಮದುವೆಯಾಗಿ ಹುಟ್ಟಿದ ಮೊದಲ ಮಗುವಿಗೆ "ಸರ್ವೋದಯ" ಎಂದು ನಾಮಕರಣ ಮಾಡಿದ್ದರು. ಬಳಿಕ ಸರ್ವೋದಯಮ್ಮ ಎಂದು ಕರೆಯಲಾಗುತ್ತಿತ್ತು. ಹೀಗೆ ಮಗಳ ಹೆಸರಲ್ಲೂ ಗಾಂಧಿಯನ್ನು ಕಾಣುತ್ತಿದ್ದರು.
ಈ ಕುರಿತು, ಶಂಕರಪ್ಪ ಮಗ ಪರಿಸರವಾದಿ ಪುಣಜನೂರು ದೊರೆಸ್ವಾಮಿ ಮಾತನಾಡಿ, ನನ್ನ ತಂದೆ ಶಂಕರಪ್ಪ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿ ಒಂದು ವರ್ಷ ಸೆರೆಮನೆ ಅನುಭವಿಸಿದ್ದರು. ಸ್ವಾತಂತ್ರ್ಯ ಸಿಗುವ ತನಕ ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿ, ಅದರಂತೆ ನಡೆದುಕೊಂಡರು. ನನಗೂ ಕೂಡ ಚಿಕ್ಕಂದಿನಿಂದಲೇ ಖಾದಿ ಬಟ್ಟೆ ತೊಡುವಂತೆ ಪ್ರೇರೇಪಿಸಿದರು, ಅದರಂತೆ ಇಂದಿಗೂ ನಾನು ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದೇನೆ ಎಂದು ತಿಳಿಸಿದರು.
ಭಾರತ ಬಿಟ್ಟು ತೊಲಗಿ ಹೋರಾಟದಲ್ಲಿ ಭಾಗಿ
ಶಂಕರಪ್ಪ, ಮಹಾತ್ಮಾ ಗಾಂಧೀಜಿ ಆರಂಭಿಸಿದ ಭಾರತ ಬಿಟ್ಟು ತೊಲಗಿ ಹೋರಾಟಕ್ಕೆ ಕಿವಿಗೊಟ್ಟ ಚಾಮರಾಜನಗರ ಭಾಗದ ಯುವಕರು ಮನೆಮನೆಗೂ ಹೋರಾಟದ ಕಿಚ್ಚನ್ನು ಪಸರಿಸಿದರು. ಚಾಮರಾಜನಗರ ಹೃದಯಭಾಗವಾಗವಾದ ಮಾರಿಗುಡಿ ಸಮೀಪ ಹತ್ತಾರು ತರುಣರ ಗುಂಪು ಮಾರಿಗುಡಿ, ಗುರುನಂಜಶೆಟ್ಟರ ಛತ್ರ ಸಮೀಪ ಗುಪ್ತ ಸಭೆಗಳನ್ನು ಸೇರಿಸಿ ಹೋರಾಟದ ರೂಪುರೇಷೆ ರಚಿಸುತ್ತಿದ್ದರು.
ಎಚ್.ಎಸ್.ದೊರೆಸ್ವಾಮಿ ಹೊರತರುತ್ತಿದ್ದ ಪೌರವಾಣಿ ಪತ್ರಿಕೆ, ಕರಪತ್ರಗಳನ್ನು ಕಾಂಗ್ರೆಸ್ ಪಕ್ಷದ ಪರ ಒಲವು ಹಾಗೂ ಇಲ್ಲದವರ ಮನೆ ಮನೆಗಳಿಗೂ ಹಂಚಿ ಸ್ವಾತಂತ್ರ್ಯದ ಕಿಚ್ಚನ್ನು ಪಸರಿಸಿ, ಬ್ರಿಟಿಷ್ ಅಧಿಕಾರಿಗಳಿಗೆ ತಲೆನೋವಾಗಿದ್ದರು. ಮೈಸೂರಿನ ಸುಬ್ಬರಾಯನಕೆರೆಯಲ್ಲಿ ಆಗುತ್ತಿದ್ದ ಸ್ವಾತಂತ್ರ್ಯ ಹೋರಾಟದ ಸಭೆಗಳಿಗೆ ತಪ್ಪದೇ ಹೋಗುತ್ತಿದ್ದ ಚಾಮರಾಜನಗರದ ತರುಣರ ಗುಂಪು ಅಲ್ಲಿಂದ ಎಚ್.ಎಸ್.ದೊರೆಸ್ವಾಮಿ ಸೇರಿದಂತೆ ಇನ್ನಿತರ ಮುಖಂಡರನ್ನು ಚಾಮರಾಜನಗರಕ್ಕೆ ಕರೆತಂದು ಸಭೆಗಳನ್ನು ಮಾಡಿಸುತ್ತಿದ್ದರು. ತರುಣರ ಎಲ್ಲಾ ಮಾತುಕತೆಗಳಿಗೆ ಮಾರಿಗುಡಿ ವೇದಿಕೆಯಾಗಿತ್ತು. ಗುಪ್ತ ಸಭೆಗಳನ್ನು ಸೇರಿ ಹೋರಾಟವನ್ನು ಅನುಷ್ಠಾನಕ್ಕೆ ತರುತ್ತಿದ್ದರು ಪುಣಜನೂರು ದೊರೆಸ್ವಾಮಿ ಎಂದು ಮಾಹಿತಿ ನೀಡಿದರು.