ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ನಂಗಾನಾಚ್ ಬೇಕಿತ್ತಾ?
ಚಾಮರಾಜನಗರ, ಆಗಸ್ಟ್ 29: ಪವಿತ್ರ ಕ್ಷೇತ್ರವಾದ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದ ರಸಮಂಜರಿಯಲ್ಲಿ ಹುಡುಗಿಯರ ನಂಗಾನಾಚ್ ನಡೆಸಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಪವಿತ್ರಕ್ಷೇತ್ರ ಮಾತ್ರವಲ್ಲದೆ, ಪವಿತ್ರ ಕಾರ್ಯಕ್ರಮದಲ್ಲಿ ಇಂತಹದೊಂದು ನೃತ್ಯ ಅವಶ್ಯಕತೆಯಿತ್ತೆ ಎಂದು ಪ್ರಶ್ನೆ ಕೇಳುತ್ತಿರುವ ಜನರು, ಕಾರ್ಯಕ್ರಮ ಹಮ್ಮಿಕೊಂಡಿದ್ದ ಮಲೆಮಹದೇಶ್ವರ ಬೆಟ್ಟದ ನೌಕರರ ಸಂಘದ ವಿರುದ್ದವೇ ಹರಿಹಾಯ್ದಿದ್ದಾರೆ. ಮಹದೇಶ್ವರ ಬೆಟ್ಟದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಅದರಂತೆ ಈ ಬಾರಿಯೂ ರಸಮಂಜರಿಯನ್ನು ಸೋಮವಾರ ರಾತ್ರಿ ಹಮ್ಮಿಕೊಳ್ಳಲಾಗಿತ್ತು.
ಇದರಲ್ಲಿ ವಿವಿಧ ಸಿನಿಮಾ ಗೀತೆಗಳ ಗಾಯನ ನಡೆದಿತ್ತಲ್ಲದೆ, ತುಂಡುಡುಗೆ ತೊಟ್ಟ ಮಹಿಳಾ ಕಲಾವಿದೆಯೊಬ್ಬಳು, ಮೂರೇ ಮೂರು ಪೆಗ್ಗಿಗೆ ತಲೆ ಗಿರ್ರ ಗಿರ್ರ ತಿರುಗಿದೆ ಎಂಬ ಹಾಡಿಗೆ ಹೆಜ್ಜೆ ಹಾಕುತ್ತಿದ್ದರೆ ಪಡ್ಡೆ ಹುಡುಗರು ಎದ್ದು ಬಿದ್ದು ಕುಣಿಯುತ್ತಿದ್ದರು. ವಯಸ್ಸಾದವರು ಹಿಡಿ ಶಾಪ ಹಾಕುತ್ತಾ ಕುಳಿತಿದ್ದರು.
ಇನ್ನೂ ಕೆಲವರು ದೇವರ ಸನ್ನಿಧಿಯಲ್ಲಿ ಇದನ್ನೆಲ್ಲ ಮಾಡಬೇಡಿ ಎಂದು ಕಿರುಚುತ್ತಿದ್ದರೂ ಅದಕ್ಕೆ ಸೊಪ್ಪು ಹಾಕದೆ ಇದ್ದದ್ದು ಕಂಡು ಬಂದಿತು.
ಮಾದಪ್ಪನ ಸನ್ನಿಧಿಯಲ್ಲಿ ಇಂತಹದೊಂದು ಕಾರ್ಯಕ್ರಮ ಬೇಕಿತ್ತಾ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಮಲೆಮಹದೇಶ್ವರ ಪ್ರಾಧಿಕಾರಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಗಾಯತ್ರಿ ಅವರೇ ಕಾರ್ಯದರ್ಶಿಯಾಗಿದ್ದು, ಅವರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದೇ ಪ್ರಶ್ನೆಯಾಗಿದೆ.