ಬಿಜೆಪಿ ಸೇರಲು ಸಿದ್ದ, ಕೊಳ್ಳೇಗಾಲ ಶಾಸಕ ಎನ್.ಮಹೇಶ್: ಬಟ್ ಕಂಡೀಷನ್ ಅಪ್ಲೈ
ಚಾಮರಾಜನಗರ, ಜ 5: ಪಕ್ಷ ವಿರೋಧಿ ಚಟುವಟಿಕೆಗಾಗಿ ಬಹುಜನ ಸಮಾಜಪಕ್ಷದಿಂದ (ಬಿಎಸ್ಪಿ) ಉಚ್ಚಾಟಿತಗೊಂಡಿರುವ, ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅವರು ಬಿಜೆಪಿ ಸೇರುವ ಬಗ್ಗೆ ಹರಿದಾಡುತ್ತಿರುವ ಸುದ್ದಿಗೆ ಸ್ಪಷ್ಟನೆಯನ್ನು ನೀಡಿದ್ದಾರೆ.
ಬಿಳಿಗಿರಿರಂಗನ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, "ನಾನು ಬಿಜೆಪಿಗೆ ಸೇರಲು ಸಿದ್ದನಿದ್ದೇನೆ. ಕಾರ್ಯಕರ್ತರು ನನ್ನ ಮೇಲೆ ಬಹಳ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ"ಎಂದು ಮಹೇಶ್ ಹೇಳಿದರು.
ಬಿಎಸ್ಪಿ ಕಾರ್ಯಕರ್ತರ ಮೇಲೆ ಹಲ್ಲೆ: ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಬೆಂಬಲಿಗರ ಬಂಧನ
"ನಾನು ಸದ್ಯ ಸ್ವತಂತ್ರನಾಗಿದ್ದೇನೆ, ನನಗೆ ಸಚಿವ ಸ್ಥಾನವನ್ನು ಕೊಟ್ಟರೆ ನಾನು ಕೂಡಲೇ ಬಿಜೆಪಿಗೆ ಸೇರಲು ಸಿದ್ದನಿದ್ದೇನೆ"ಎನ್ನುವ ಕಂಡೀಷನ್ ಅನ್ನು ಮಹೇಶ್ ಹಾಕಿದ್ದಾರೆ. ಇದಕ್ಕೆ ಬಿಜೆಪಿ ಇನ್ನೂ ಪ್ರತಿಕ್ರಿಯೆಯನ್ನು ನೀಡಲಿಲ್ಲ.
"ಕ್ಷೇತ್ರದ ಅಭಿವೃದ್ದಿಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಿ ಎನ್ನುವ ಒತ್ತಡ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರಿಂದ ಬರುತ್ತಿದೆ. ಹಾಗಾಗಿ, ಸಚಿವ ಸ್ಥಾನ ಸಿಕ್ಕರೆ, ಬಿಜೆಪಿ ಸೇರುವ ನಿರ್ಧಾರಕ್ಕೆ ಬಂದಿದ್ದೇನೆ"ಎಂದು ಮಹೇಶ್ ಸ್ಪಷ್ಟ ಪಡಿಸಿದರು.
ಬಿಜೆಪಿ ಸರ್ಕಾರ ರಚನೆಯಲ್ಲಿ ನನ್ನ ಪಾತ್ರವಿಲ್ಲ. ನನ್ನ ಪಾತ್ರವಿದ್ದಿದ್ದರೇ ನಾನೂ ಸರ್ಕಾರದ ಭಾಗವಾಗುತ್ತಿದ್ದೆ ಎಂದು ಮಹೇಶ್ ಈ ಹಿಂದೆ ಸ್ಪಷ್ಟ ಪಡಿಸಿದ್ದರು. ಬಿಜೆಪಿ ಸರಕಾರ ರಚನೆಯಲ್ಲಿ ಮಹೇಶ್ ಅವರ ಪಾತ್ರವೂ ಇತ್ತು ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದರು.
"ಅವಿಶ್ವಾಸ ನಿರ್ಣಯದ ವೇಳೆ, ತಟಸ್ಥವಾಗಿರುವಂತೆ ಹೈಕಮಾಂಡ್ ಆದೇಶ ಮಾಡಿತ್ತು. ಹೈಕಮಾಂಡ್ ಆದೇಶದಂತೆ ನಡೆದುಕೊಂಡಿದ್ದೇನೆ. ಸರ್ಕಾರ ರಚನೆಯಲ್ಲಿ ನನ್ನ ಪಾತ್ರ ಶೂನ್ಯ. ರಮೇಶ್ ಜಾರಕಿಹೊಳಿ ಅವರು ಭಾವಾಶೇಷದಿಂದ ಮಾತನಾಡಿದ್ದಾರೆ ಅಷ್ಟೇ"ಎಂದು ಮಹೇಶ್ ಈ ಹಿಂದೆ ಹೇಳಿದ್ದರು.