ನಾನೂ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿರುತ್ತಿದ್ದೆ: BSP ಉಚ್ಛಾಟಿತ ಶಾಸಕ ಎನ್.ಮಹೇಶ್!
ಚಾಮರಾಜನಗರ, ಜೂ. 05: ರಾಜ್ಯದಲ್ಲಿ ಮೈತ್ರಿ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಲ್ಲಿದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರ ಪಾತ್ರವಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಮಾಜಿ ಸಚಿವ, ಶಾಸಕ ಎನ್. ಮಹೇಶ್ ಅವರೂ ಕೂಡ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾಗಿದ್ದರು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದರು. ಆ ಮೂಲಕ ಸೈದ್ದಾಂತಿಕ ನಿಲುವುಗಳು ಕೇವಲ ಚುನಾವಣೆ ಗೆಲ್ಲಲು ಮಾತ್ರವಾ ಎಂಬ ಚರ್ಚೆಯೂ ನಡೆದಿತ್ತು. ಆದರೆ ಅದಕ್ಕೆಲ್ಲ ಈಗ ಮಾಜಿ ಸಚಿವ, ಬಿಎಸ್ಪಿಯಿಂದ ಉಚ್ಚಾಟಿತರಾಗಿರುವ ಶಾಸಕ ಎನ್. ಮಹೇಶ್ ಸ್ಪಷ್ಟನೆ ಕೊಟ್ಟಿದ್ದಾರೆ.
Recommended Video
ಚಾಮರಾಜನಗರದಲ್ಲಿ ಮಾತನಾಡಿರುವ ಶಾಸಕ ಎನ್. ಮಹೇಶ್ ಅವರು, ಬಿಜೆಪಿ ಸರ್ಕಾರ ರಚನೆಯಲ್ಲಿ ನನ್ನ ಪಾತ್ರವಿಲ್ಲ. ನನ್ನ ಪಾತ್ರವಿದ್ದಿದ್ದರೇ ನಾನೂ ಸರ್ಕಾರದ ಭಾಗವಾಗುತ್ತಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆ ಆಗಿದ್ದರೆ ನಾನೂ ಸಿಎಂ ಯಡಿಯೂರಪ್ಪ ಅವರಿಗೆ ಓಟ್ ಹಾಕುತ್ತಿದ್ದೆ. ಆದರೆ ಆಗ ತಟಸ್ಥವಾಗಿರುವಂತೆ ಹೈಕಮಾಂಡ್ ಆದೇಶ ಮಾಡಿತ್ತು. ಹೈಕಮಾಂಡ್ ಆದೇಶದಂತೆ ನಡೆದುಕೊಂಡಿದ್ದೇನೆ. ಸರ್ಕಾರ ರಚನೆಯಲ್ಲಿ ನನ್ನ ಪಾತ್ರ ಶೂನ್ಯ. ರಮೇಶ್ ಜಾರಕಿಹೊಳಿ ಅವರು ಭಾವಾಶೇಷದಿಂದ ಮಾತನಾಡಿದ್ದಾರೆ ಅಷ್ಟೇ ಎಂದಿದ್ದಾರೆ.
ಪರಿಷತ್ ಚುನಾವಣೆ: ಯುಟರ್ನ್ ಹೊಡೆದ ಎಸ್.ಟಿ. ಸೋಮಶೇಖರ್?
ಮೈತ್ರಿ ಸರ್ಕಾರ ಕೆಡವಲು, ಬಿಜೆಪಿ ಸರ್ಕಾರ ತರುವುದಕ್ಕೆ ನಡೆದ ಹೋರಾಟದಲ್ಲಿ ನಾನು ಭಾಗಿಯಾಗಿಲ್ಲ. ಈಗಲೂ ನಾನು ಸ್ವತಂತ್ರ ಶಾಸಕ, ಬಿಎಸ್ಪಿಯೂ ಅಲ್ಲ, ಬಿಜೆಪಿ, ಕಾಂಗ್ರೆಸ್ಸು ಅಲ್ಲ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತಂದವರು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಎಂದು ಚಾಮರಾಜನಗರದಲ್ಲಿ ಬಿಎಸ್ಪಿ ಉಚ್ಚಾಟಿತ ಶಾಸಕ ಎನ್ ಮಹೇಶ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.