ಲಾಕ್ಡೌನ್ ತೆರವಿನ ಬಳಿಕ ಮತ್ತೆ ಕೋಟ್ಯಾಧೀಶನಾದ ಮಾದೇಶ್ವರ!
ಬೆಂಗಳೂರು, ಸೆ. 19: ಕೊರೊನಾ ಸಂಕಷ್ಟದ ಸಮಯದಲ್ಲಿ ಭಕ್ತರಿಗೆ ಪ್ರವೇಶ ನಿಷೇಧದ ನಡುವೆಯೂ ಮಾಯ್ಕಾರ ಮಾದಪ್ಪ ಕೋಟ್ಯಧಿಪತಿಯಾಗಿದ್ದಾನೆ. ಕಳೆದ 82 ದಿನಗಳ ಬಳಿಕ ಚಾಮರಾಜನಗರ ಹನೂರು ತಾಲೂಕಿನ ಮಲೈ ಮಹದೇಶ್ವರ ಬೆಟ್ಟದ ಹುಂಡಿ ಹಣ ಎಣಿಕೆ ಮಾಡಲಾಗಿದೆ.
82 ದಿನಗಳಲ್ಲಿ ಮಹದೇಶ್ವರನ ಹುಂಡಿಯಲ್ಲಿ ಬರೊಬ್ಬರಿ ಒಂದು ಕೋಟಿ 47 ಲಕ್ಷ 14 ಸಾವಿರದ 348 ರೂಪಾಯಿ ಸಂಗ್ರಹವಾಗಿದೆ. ಜೊತೆಗೆ 17 ಗ್ರಾಂ ಚಿನ್ನ, 985 ಗ್ರಾಂ ಬೆಳ್ಳಿಯನ್ನು ಕಾಣಿಕೆ ಹುಂಡಿಗೆ ಭಕ್ತರು ಹಾಕಿದ್ದಾರೆ. ಪ್ರತಿ ತಿಂಗಳು ಕೊನೆಯ ವಾರದಲ್ಲಿ ಹುಂಡಿ ಹಣ ಎಣಿಕೆಯಾಗುತ್ತಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಈಗ ಪ್ರತಿ ತಿಂಗಳು ಹುಂಡಿ ಹಣ ಎಣಿಕೆ ಮಾಡುವುದಿಲ್ಲ. ಜೊತೆಗೆ ವಿಶೇಷ ದಿನಗಳಲ್ಲಿ ಅಪಾರ ಭಕ್ತರು ಸೇರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಹಿತ ದೃಷ್ಟಿಯಿಂದ ಪ್ರವೇಶ ನಿಷೇಧ ಮಾಡಲಾಗುತ್ತಿದೆ.
ಈ ಬಾರಿ ಐವತ್ತು ಸಾವಿರಕ್ಕೂ ಹೆಚ್ಚು ಜನ ಸೇರುವ ಮಹಾಲಯ ಅಮಾವಾಸ್ಯೆ ದಿನ ಜಾತ್ರೆ ರದ್ದಾಗಿ ದೇಗುಲವೇ ಬಂದಾಗಿದ್ದರಿಂದ ಕಾಣಿಕೆ ಸಂಗ್ರಹಕ್ಕೆ ಹಿನ್ನಡೆಯಾಗಿದೆ. ತಿಂಗಳಲ್ಲಿ 10ಕ್ಕೂ ಹೆಚ್ಚು ದಿನಗಳ ಕಾಲ ದೇಗುಲವನ್ನು ಭಕ್ತರಿಗೆ ಮುಚ್ಚಿದ್ದರಿಂದ ಆದಾಯದಲ್ಲಿ ಕೊರತೆಯಾಗಿದೆ. ಕೊರೊನಾದಿಂದ ಲಾಡು ಪ್ರಸಾದಕ್ಕೆ ಬೇಡಿಕೆ ಕುಸಿದಿದೆ, ಭಕ್ತರ ಸಂಖ್ಯೆಯಲ್ಲಿ ಈಗೀಗ ಏರಿಕೆಯಾಗುತ್ತಿದೆ ಎಂದು ತಿಳಿದು ಬಂದಿದೆ.
ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ನಿನ್ನೆ ಬೆಳಿಗ್ಗೆ ಆರಂಭಗೊಂಡಿದ್ದ ಹುಂಡಿ ಹಣ ಎಣಿಕೆ ಕಾರ್ಯ ರಾತ್ರಿಗೆ ಮುಗಿದಿದೆ. ಹುಂಡಿ ಹಣ ಎಣಿಕೆ ಬಗ್ಗೆ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಮಾಹಿತಿ ನೀಡಿದೆ. ಇದಕ್ಕಿಂತ ಮೊದಲು ಕಳೆದ ಜೂನ್ 26 ರಂದು ಹುಂಡಿ ಹಣ ಎಣಿಕೆ ನಡೆದಿತ್ತು.
Recommended Video
ಲಾಕ್ನಾ ಡೌನ್ ಅವಧಿಯ 4 ತಿಂಗಳಲ್ಲಿ ಮಾದಪ್ಪನ ಹುಂಡಿಗೆ 96 ಲಕ್ಷ ರೂ. ಸಂದಾಯವಾಗಿತ್ತು. ಲಾಕ್ ಡೌನ್ ಸಂಪೂರ್ಣ ತೆರವಿನ ನಂತರದ 82 ದಿನಗಳಲ್ಲಿ ಮಾದಪ್ಪನ ಆದಾಯದಲ್ಲಿ ಭಾರಿ ಹೆಚ್ಚಳವಾಗಿದೆ.