ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಸಿಡಿಲು ಬಡಿದು ಮನೆ ಭಸ್ಮ
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೆನ್ನಮಲ್ಲಿಪುರದಲ್ಲಿ ಭಾನುವಾರ ರಾತ್ರಿ ಸಿಡಿಲು ಬಡಿದು ಮನೆಯೊಂದು ಭಸ್ಮವಾಗಿ, ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳು ನಾಶವಾಗಿವೆ
ಗುಂಡ್ಲುಪೇಟೆ, ಮೇ 8: ತಾಲೂಕಿನ ಚೆನ್ನಮಲ್ಲಿಪುರ ಗ್ರಾಮದಲ್ಲಿ ಸಿಡಿಲು ಬಡಿದು ಜಮೀನೊಂದರಲ್ಲಿದ್ದ ಮನೆ ಭಸ್ಮವಾದ ಘಟನೆ ಸಂಭವಿಸಿದೆ. ತಾಲೂಕಿನ ಚೆನ್ನಮಲ್ಲಿಪುರ ಗ್ರಾಮದ ಗಿರಿಯಪ್ಪರವರ ಪತ್ನಿ ನಂದ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ನಡೆದಿದೆ.
ಭಾನುವಾರ ರಾತ್ರಿ ಮಳೆ, ಭಾರೀ ಸಿಡಿಲಿಗೆ ಮನೆಯೊಳಗಿದ್ದ ಸಿಲಿಂಡರ್ ಸ್ಫೋಟಗೊಂಡು ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಭಸ್ಮಗೊಂಡಿವೆ. ಚನ್ನಮಲ್ಲೀಪುರ ಗ್ರಾಮದ ನಂದ ಎಂಬುವವರು ಗ್ರಾಮದ ಹೊರವಲಯದ ಜಮೀನಿನಲ್ಲಿ ವಾಸವಾಗಿದ್ದು, ಭಾನುವಾರ ರಾತ್ರಿ ಸುಮಾರು 9ರ ಸಮಯದಲ್ಲಿ ಸಿಡಿಲು ಸಮೇತ ಮಳೆ ಪ್ರಾರಂಭಗೊಂಡಿತು.[ಗುಂಡ್ಲುಪೇಟೆಯಲ್ಲಿ ಮಳೆ ಅವಾಂತರ: ಇಬ್ಬರು ಬಲಿ]
ಸಿಡಿಲಿನ ಅಬ್ಬರಕ್ಕೆ ಮನೆಯ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯು ಹೆಚ್ಚಾಗಲು ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದೇ ಕಾರಣ ಎನ್ನಲಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಜನ- ಜಾನುವಾರಿಗೆ ತೊಂದರೆಯಾಗಿಲ್ಲ. ಆದರೆ ಕೃಷಿಗೆ ಸಂಬಂಧಿಸಿದ ಡ್ರಿಪ್ ಪದಾರ್ಥಗಳಾದ ಲ್ಯಾಟರ್, ಪೈಪು ಸ್ಪ್ರಿಂಕ್ಲರ್ ಸೆಟ್ ಹಾಗೂ ಬೆಲೆಬಾಳುವ ಮರದ ಸಾಮಗ್ರಿಗಳು ಬೆಂಕಿಯಲ್ಲಿ ನಾಶವಾಗಿವೆ.