ಆಕ್ಸಿಜನ್ ದುರಂತದ ನ್ಯಾಯಾಂಗ ತನಿಖೆ ಆರಂಭ; ನ್ಯಾಯ ಸಿಗುತ್ತಾ?
ಚಾಮರಾಜನಗರ, ಜೂನ್ 02; ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ಮೇ 2ರಂದು ನಡೆದಿದ್ದ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೇಮಿಸಿದ್ದ ಕಾನೂನು ಸೇವೆಗಳ ಪ್ರಾಧಿಕಾರದ ಉನ್ನತ ಮಟ್ಟದ ಸಮಿತಿ ಈಗಾಗಲೇ ಪ್ರಾಥಮಿಕ ತನಿಖೆ ನಡೆಸಿ ಮದ್ಯಂತರ ವರದಿ ಸಲ್ಲಿಸಿದೆ.
ಮತ್ತೊಂದು ಕಡೆ ಹೈಕೋರ್ಟ್ ಸೂಚನೆಯಂತೆ ರಾಜ್ಯ ಸರ್ಕಾರ ಆದೇಶಿದ್ದ ನ್ಯಾಯಾಂಗ ತನಿಖೆಯು ಆರಂಭಗೊಂಡಿದೆ. ತನಿಖೆಗೆ ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಬಿ. ಎ. ಪಾಟೀಲ್ ಸೋಮವಾರ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಂದಿನ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿದರು.
ಚಾಮರಾಜನಗರ ಆಕ್ಸಿಜನ್ ದುರಂತ; ಪಟ್ಟಿಯಲ್ಲಿ ಮೃತಪಟ್ಟವರ ಹೆಸರಿಲ್ಲ
ಘಟನೆ ನಡೆದ 29 ದಿನಗಳ ಬಳಿಕ ಮೊದಲ ಬಾರಿಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ನಿವೃತ್ತ ನ್ಯಾಯಾಧೀಶರಾದ ಬಿ. ಎ. ಪಾಟೀಲ್ ಜಿಲ್ಲಾಸ್ಪತ್ರೆಯ ಟ್ರಯಾಜ್ ವಿಭಾಗ ಹಾಗೂ ಆಕ್ಸಿಜನ್ ಘಟಕದ ಪರಿಶೀಲನೆ ನಡೆಸಿದರು.
ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ?
ಬಳಿಕ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ಗೂ ಭೇಟಿ ಪರಿಶೀಲಿಸಿದ ಬಳಿಕ ಜಿಲ್ಲಾಸ್ಪತ್ರೆಯ ಕಚೇರಿಯಲ್ಲಿ ಚಾಮರಾಜನಗರದ ಸರ್ಕಾರಿ ಮೆಡಿಕಲ್ ಕಾಲೇಜಿನ ಡೀನ್ ಹಾಗೂ ಜಿಲ್ಲಾಸ್ಪತ್ರೆಯ ವೈದ್ಯಧಿಕಾರಿಗಳೊಂದಿಗೆ ಕೆಲ ಹೊತ್ತು ಸಭೆ ನಡೆಸಿ ಮಾಹಿತಿ ಪಡೆದರು.
ಚಾಮರಾಜನಗರ ಜಿಲ್ಲೆಯಲ್ಲಿ ಏರುತ್ತಲೇ ಇದೆ ಸಾವಿನ ಸಂಖ್ಯೆ
ಇದಕ್ಕೂ ಮೊದಲು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದರೂ ಪಟ್ಟಿಯಲ್ಲಿ ಹೆಸರು ಕೈ ಬಿಟ್ಟು ಪರಿಹಾರ ವಂಚಿತರಾಗಿರುವ ಕೆಲವು ಸಂತ್ರಸ್ತರು ನಿವೃತ್ತ ನ್ಯಾಯಾಧೀಶರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಆಕ್ಸಿಜನ್ ಕೊರತೆಯಿಂದ 24 ಮಂದಿ ಮೃತಪಟ್ಟ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡಲು ರಾಜ್ಯ ಸರ್ಕಾರ ಐಎಎಸ್ ಅಧಿಕಾರಿ, ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ನಿಯೋಜಿಸಿತ್ತು. ಮರುದಿನವೇ ಹೈಕೋರ್ಟ್ ಈ ಪ್ರಕರಣದ ಬಗ್ಗೆ ಸ್ವಯಂಪ್ರೇರಿತ ವಿಚಾರಣೆ ನಡೆಸಿ ನಿವೃತ್ತ ನ್ಯಾಯಮೂರ್ತಿ ವೇಣುಗೋಪಾಲಗೌಡ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರದ ಉನ್ನತ ಮಟ್ಟದ ಸಮಿತಿಯನ್ನು ನೇಮಿಸಿತ್ತು.
ಅದೇ ದಿನ ರಾಜ್ಯ ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ನ್ಯಾಯಾಂಗ ತನಿಖೆ ಒಂದು ತಿಂಗಳ ಒಳಗೆ ವರದಿ ನೀಡಲು ನಿವೃತ್ತ ನ್ಯಾಯಮೂರ್ತಿ ಬಿ. ಎ. ಪಾಟೀಲ್ ನೇಮಿಸಿತ್ತು. ಆದರೆ, ರಾಜ್ಯ ಸರ್ಕಾರದ ಈ ನಡೆಗೆ ಹೈಕೋರ್ಟ್ ತೀವ್ರ ಅಸಮಧಾನ ವ್ಯಕ್ತಪಡಿಸಿತ್ತು.
ಈ ನಡುವೆ ನಿವೃತ್ತ ನ್ಯಾಯಮೂರ್ತಿ ವೇಣುಗೋಪಾಲಗೌಡ ನೇತೃತ್ವದ ಸಮಿತಿ ಮೇ 12 ರಂದು ಹೈಕೋರ್ಟ್ಗೆ ವರದಿ ಸಲ್ಲಿಸಿತ್ತು. ಆಕ್ಸಿಜನ್ ಬಿಕ್ಕಟ್ಟಿನ ಸಮಯವನ್ನು ಜಿಲ್ಲಾಧಿಕಾರಿ ತಮ್ಮ ಕ್ರಿಯಾಶೀಲ ಹಾಗೂ ನಾಯಕತ್ವ ಗುಣಗಳಿಂದ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಡಾ. ಎಂ. ಆರ್ ರವಿ ತಮ್ಮ ಕರ್ತವ್ಯವನ್ನು ಸರಿಯಾಗಿ ಪಾಲನೆ ಮಾಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಇದಲ್ಲದೆ ಮೆಡಿಕಲ್ ಕಾಲೇಜಿನ ಡೀನ್, ಜಿಲ್ಲಾಸ್ಪತ್ರೆಯ ಪ್ರಭಾರ ಜಿಲ್ಲಾ ಸರ್ಜನ್ ಕರ್ತವ್ಯಲೋಪಗಳ ಬಗ್ಗೆಯು ಬೊಟ್ಟು ಮಾಡಿತ್ತು. ಆಕ್ಸಿಜನ್ ಕೊರತೆಯಿಂದ 36 ಜನ ಮೃತಪಟ್ಟಿದ್ದಾರೆಂದು ವರದಿ ಹೇಳಿತ್ತು. ಅಲ್ಲದೆ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಶಿಫಾರಸ್ಸು ಮಾಡಿತ್ತು. ಈ ಹಿನ್ನಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 24 ಮಂದಿಯ ಕುಟುಂಬಗಳಿಗೂ ರಾಜ್ಯ ಸರ್ಕಾರ ತಲಾ ಎರಡು ಲಕ್ಷ ರೂಪಾಯಿ ಮದ್ಯಂತರ ಪರಿಹಾರ ವಿತರಿಸಿದೆ.
ಪರಿಹಾರ ದ ಮೊತ್ತವನ್ನು ಹೆಚ್ಚಿಸುವ ಬಗ್ಗೆಯು ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ಸೂಚನೆ ನೀಡಿದ್ದು ವಿಚಾರಣೆ ಮುಂದುವರಿದಿದೆ. ಒಟ್ಟಾರೆ ಇಡೀ ಪ್ರಕರಣದ ವಿಚಾರಣೆ ಹೈಕೋರ್ಟ್ ಅಂಗಳದಲ್ಲಿ ಇದೆಯಾದರೂ ಇನ್ನೊಂದು ಕಡೆ ನ್ಯಾಯಾಂಗ ತನಿಖೆಯು ಆರಂಭಗೊಂಡಿರುವುದರಿಂದ ಪ್ರಕರಣ ವಿಚಾರಣೆ ಗೊಂದಲಕಾರಿಯಾಗಿದೆ.
ಈ ಪ್ರಕರಣದಲ್ಲಿ ಬಹುಮುಖ್ಯವಾಗಿ ತೀರ್ಮಾನ ಆಗಬೇಕಿರುವುದು ಒಟ್ಟು ಎಷ್ಟು ಮಂದಿ ರೋಗಿಗಳು ಆಕ್ಸಿಜನ್ ಸಿಗದೆ ಮೃತರಾಗಿದ್ದಾರೆ ಎಂಬ ವಿಷಯ. ಏಕೆಂದರೆ ಮೃತರ ಸಂಖ್ಯೆಯ ವಿಷಯದಲ್ಲಿ ಇನ್ನೂ ಗೊಂದಲಗಳಿವೆ. ರಾಜ್ಯ ಆರೋಗ್ಯ ಸಚಿವರು ದುರಂತ ನಡೆದ ಎರಡನೇ ದಿನವೇ ಪತ್ರಿಕಾಗೋಷ್ಠಿ ನಡೆಸಿ ಮೃತಪಟ್ಟವರು ಬರೇ ಮೂರೇ ಸೋಂಕಿತರು ಎಂದು ಹೇಳಿ ಪ್ರಕರಣವನ್ನೇ ಮುಚ್ಚಿ ಹಾಕಲು ನೋಡಿದ್ದರು.
ಹೈ ಕೋರ್ಟ್ ನೇಮಿಸಿದ್ದ ಮೂವರು ಸದಸ್ಯರ ಸಮಿತಿಯು ಆಗಲೇ ಆಸ್ಪತ್ರೆಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿ ಮೃತಪಟ್ಟಿರುವವರ ಸಂಖ್ಯೆ 36 ಎಂದು ದೃಢಪಡಿಸಿತ್ತು. ಅಲ್ಲದೆ ದಾಖಲಾತಿಗಳನ್ನೇ ತಿದ್ದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ದಾಖಲಾತಿಗಳನ್ನು ವಶಪಡಿಸಿಕೊಳ್ಳುವಂತೆಯೂ ಶಿಫಾರಸು ಮಾಡಿತ್ತು.
ಇದೀಗ ಮೃತಪಟ್ಟಿರುವ ಇತರ 12 ಸಂತ್ರಸ್ಥ ಕುಟುಂಬಗಳ ಸದಸ್ಯರೂ ನ್ಯಾಯಾಂಗ ತನಿಖೆಯ ವರದಿಯನ್ನೇ ಬಹಳ ಕಾತರದಿಂದ ನೋಡುತಿದ್ದಾರೆ. ಏಕೆಂದರೆ ಇಲ್ಲಿ ಮೃತರಾಗಿರುವವರೆಲ್ಲ ಬಡ ಮತ್ತು ಮದ್ಯಮ ವರ್ಗದವರೇ ಆಗಿದ್ದು ಅನೇಕ ಕುಟುಂಬಗಳು ತಮ್ಮ ದುಡಿಯುವ ಪ್ರಮುಖ ವ್ಯಕ್ತಿಯನ್ನೇ ಕಳೆದುಕೊಂಡಿದ್ದು ಕಣ್ಣೀರಿನಿಂದ ಕೈ ತೊಳೆಯುತಿದ್ದಾರೆ.
ಮತ್ತೊಂದೆಡೆ ಸೋಂಕಿತರ ಸಂಖ್ಯೆಯೂ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿದೆ. ಈ ಜಿಲ್ಲೆಯಲ್ಲಿ ಆದಿವಾಸಿ ಸೋಲಿಗ ಸಮುದಾಯದ ಜನಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿದೆ. ಸೋಲಿಗ ಸಮುದಾಯದವರು ಲಸಿಕೆಯೇ ಬೇಡ ಎಂದು ಹಿಂಜರಿಯುತಿದ್ದಾರೆ. ಅವರನ್ನು ಮನವೊಲಿಸಿ ಲಸಿಕೆ ಹಾಕಿಸಬೇಕಿದೆ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಈಗಲೂ ಸೋಂಕು ಕಡಿಮೆ ಆಗಿಲ್ಲ.
Recommended Video
ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಈ ಜಿಲ್ಲೆಯ ನೊಂದವರಿಗೆ ನ್ಯಾಯ ಸಿಕ್ಕೀತೆ ಎಂಬುದು ಈಗಿನ ಪ್ರಶ್ನೆಯಾಗಿದೆ.