ಐದು ದಿನಗಳ ಐತಿಹಾಸಿಕ ಚಿಕ್ಕಲೂರು ಜಾತ್ರೆ ಆರಂಭ
ಚಾಮರಾಜನಗರ, ಜನವರಿ 12 : ಕೊಳ್ಳೇಗಾಲ ಬಳಿಯ ಇತಿಹಾಸ ಪ್ರಸಿದ್ಧ ಚಿಕ್ಕಲೂರು ಜಾತ್ರಾ ಮಹೋತ್ಸವ ಗುರುವಾರ(ಜ.12)ದಿಂದ ಆರಂಭಗೊಂಡಿದೆ.
ದೂರದೂರುಗಳಿಂದ ಆಗಮಿಸಿದ ಭಕ್ತರು ಚಂದ್ರಮಂಡಲ ವೀಕ್ಷಿಸುವುದರೊಂದಿಗೆ ಐದು ದಿನಗಳ ಜಾತ್ರೆಗೆ ಮುನ್ನುಡಿ ಬರೆದರು.ಗುರುವಾರ ಆರಂಭವಾಗಿರುವ ಜಾತ್ರಾಮಹೋತ್ಸವ ಜ.16ರಂದು ಸೋಮವಾರ ನಡೆಯುವ ಮುತ್ತರಾಯನ ಸೇವೆಯೊಂದಿಗೆ ತೆರಕಾಣಲಿದೆ.
ಜ.15 ಮತ್ತು 16ರಂದು ವಿಜೃಂಭಣೆಯ ಕಾರ್ಯಕ್ರಮಗಳು ನಡೆಯಲಿವೆ. ಜಾತ್ರೆಗೆ ಜಿಲ್ಲಾಡಳಿತ ಹಾಗೂ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ.
ಜಾತ್ರೆ ಪ್ರತಿ ವರ್ಷವೂ ಸುಗ್ಗಿಕಾಲದಲ್ಲಿ ನಡೆಯುತ್ತಿದ್ದು, ಇದಕ್ಕಾಗಿ ರಾಜ್ಯದ ವಿವಿಧ ಕಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ತಮ್ಮ ಆರಾಧ್ಯ ದೈವದ ಸನ್ನಿಧಿಯಲ್ಲಿ ವಾರಗಟ್ಟಲೇ ಬಿಡಾರ ಹೂಡುವ ಮೂಲಕ ತಮ್ಮ ಹರಕೆ ಕಾಣಿಕೆಗಳನ್ನು ಸಲ್ಲಿಸುತ್ತಾರೆ.
ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಜವಾಬ್ದಾರಿ ದೇವಸ್ಥಾನ ಆಡಳಿತ ಮಂಡಳಿ, ತೆಳ್ಳನೂರು ಗ್ರಾಮಪಂಚಾಯಿತಿ ಹಾಗೂ ಜಿಲ್ಲಾಡಳಿತ ವಹಿಸಿಕೊಂಡಿದೆ.
ಇದುವರೆಗೆ ಹಳೇಮಠ ಸಮೀಪದ ಬಾಣೂರು ಹಳ್ಳದಲ್ಲಿ ನೀರು ಹರಿಯುತ್ತಿತ್ತಾದರೂ ಈ ಬಾರಿ ಬರದಿಂದ ಬತ್ತಿದೆ. ಇದರಿಂದ ಜಾತ್ರೆಯಲ್ಲಿ ನೀರಿನ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಜಾತ್ರೆಗೆ ಬರುವ ಸಹಸ್ರಾರು ಭಕ್ತರು ವಾಸ್ತವ್ಯಕ್ಕೆ ದೇವಸ್ಥಾನ ಸುತ್ತ ಇರುವ ಖಾಸಗಿ ಜಮೀನುಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಹೆಚ್ಚುವರಿ ಶೌಚಾಲಯ ಹಾಗೂ ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಕೊಳ್ಳೇಗಾಲದಿಂದ ಖಾಸಗಿ ಬಸ್ಸುಗಳನ್ನು ಹೊರತು ಪಡಿಸಿ 150ಕ್ಕೂ ಹೆಚ್ಚು ಸಾರಿಗೆ ಬಸ್ಗಳನ್ನು ಬಿಡಲಾಗಿದೆ.
ಜಾತ್ರೆಗೆ ಮೂರು ದಿನಗಳಿರುವಾಗಲೇ ಅಂಗಡಿ, ಮಳಿಗೆಗಳು ತಲೆ ಎತ್ತಿವೆ. ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇಬ್ಬರು ಡಿಎಸ್ಪಿ, 10 ಇನ್ಸ್ಪೆಕ್ಟರ್, 15 ಪಿಎಸ್ಐ, 50 ಎಎಸ್ಐ, 54 ಹೆಡ್ಕಾನ್ಸ್ಟೇಬಲ್, 135 ಪೇದೆ, 250 ಗೃಹರಕ್ಷಕದಳ ಸಿಬ್ಬಂದಿ, 2 ಕೆಎಸ್ಆರ್ಪಿ ಹಾಗೂ 8 ಜಿಲ್ಲಾ ಶಸಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ.