ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರವಾಸಿಗರಿಗಿಲ್ಲ ಹೊಸವರ್ಷದ ಖುಷಿ!
ಚಾಮರಾಜನಗರ, ಜನವರಿ 02: ಸಾಮಾನ್ಯ ದಿನಗಳಲ್ಲೇ ಚಾಮರಾಜನಗರ ಜಿಲ್ಲೆಯಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವವರು ಬಸ್ ಸೌಲಭ್ಯವಿಲ್ಲದೆ ಪರದಾಡುವುದು ಮಾಮೂಲಿ. ಇನ್ನು ಹೊಸವರ್ಷದಂದು ಸಹಸ್ರಾರು ಸಂಖ್ಯೆಯಲ್ಲಿ ಜನ ಆಗಮಿಸಿದರೆ ಪರಿಸ್ಥಿತಿ ಹೇಗಿರಬಹುದು ನೀವೇ ಊಹೆ ಮಾಡಿ.
ನಿಸರ್ಗ ಪ್ರೇಮಿಗಳ ಸ್ವರ್ಗ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಹೊಸವರ್ಷದಂದು(ಜನವರಿ 1, 2018) ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಿ ಬರೋಣ ಎಂದು ಹೆಚ್ಚಿನವರು ಬಯಸುತ್ತಾರೆ. ಅದರಂತೆ ಈ ಬಾರಿಯೂ ಜನ ತೆರಳಿದ್ದರು. ದೇವರ ದರ್ಶನ ಮಾಡುವುದರೊಂದಿಗೆ ನಿಸರ್ಗದ ಮಡಿಲಲ್ಲಿ ತಮ್ಮ ಜಂಜಾಟ ಮರೆತು ಒಂದಷ್ಟು ಹೊತ್ತು ಕಳೆದು ಬರೋಣ ಎನ್ನುವುದು ಅವರ ಇರಾದೆಯಾಗಿತ್ತು.
ಆದರೆ ಹಾಗೆಹೋದವರ ಪೈಕಿ ಕೆಲವರು ಹೇಗೋ ನೂಕು ನುಗ್ಗಲಿನಲ್ಲಿ ಸಾರಿಗೆ ಬಸ್ನೊಳಕ್ಕೆ ನುಗ್ಗಿ ಪ್ರಯಾಣ ಮಾಡಿ ಬಂದಿದ್ದರೆ, ಮತ್ತೆ ಕೆಲವರು ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂತಿರುಗಿದ್ದಾರೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರವಾಸವೀಗ ಪ್ರಯಾಸ!
ಇಷ್ಟಕ್ಕೂ ಹಿಮವದ್ ಗೋಪಾಲ ಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಅವಕಾಶವಿಲ್ಲ. ಆದ್ದರಿಂದ ಗುಂಡ್ಲುಪೇಟೆಯಿಂದ ಸಾರಿಗೆ ವಾಹನದಲ್ಲೇ ತೆರಳಬೇಕು. ಆದರೆ ಹೊಸವರ್ಷದಂದು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಗಳ ವ್ಯವಸ್ಥೆ ಮಾಡದ ಕಾರಣ ಸಹಸ್ರಾರು ಸಂಖ್ಯೆಯಲ್ಲಿ ಬಂದ ಪ್ರವಾಸಿಗರು ಇರುವ ಬಸ್ನಲ್ಲಿ ಪ್ರಯಾಣಿಸಲು ಸಾಧ್ಯವಾಗದೆ ಪರದಾಡುವಂತಾಯಿತು. ಕೆಲವರು ಆಕ್ರೋಶಗೊಂಡು ಕಾಲ್ನಡಿಗೆಯಲ್ಲೇ ಬೆಟ್ಟಕ್ಕೆ ತೆರಳಲು ಮುಂದಾದ ಘಟನೆಯೂ ನಡೆಯಿತು.
ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದ ಜನರಿಗೆ ಕೇವಲ ನಾಲ್ಕು ಮಿನಿಬಸ್ 6 ಸಫಾರಿವಾಹನಗಳನ್ನು ನಿಯೋಜನೆ ಮಾಡಿದ್ದರಿಂದ ಈ ವಾಹನಗಳಲ್ಲಿ ಹೆಚ್ಚಿನ ಜನರನ್ನು ಕರೆದೊಯ್ಯಲು ಸಾಧ್ಯವಾಗಲೇ ಇಲ್ಲ.
ನಿಸರ್ಗಪ್ರೇಮಿಗಳಿಗೆ ವರದಾನ ಕರಿವರದರಾಜಸ್ವಾಮಿ ಬೆಟ್ಟ
ಬೆಳಗಿನಿಂದ ಗಂಟೆಗಟ್ಟಲೆ ಕಾದುನಿಂತ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸದಕ್ಕೆ ಸಾರಿಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಸಹನೆ ಕಳೆದುಕೊಂಡ ಕೆಲವರು ಗೇಟ್ ತೆಗೆದು ಕಾಲ್ನಡಿಗೆಯಲ್ಲಿ ತೆರಳಲು ಮುಂದಾದರಾದರೂ ಅರಣ್ಯ ಸಿಬ್ಬಂದಿ ಅದಕ್ಕೆ ಅವಕಾಶ ನೀಡಲಿಲ್ಲ.
ಕೆಲವರು ಕಾದು ಕುಳಿತು ಅವಕಾಶ ಮಾಡಿಕೊಂಡು ಬಸ್ಸೇರಿ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿದರಾದರೂ ಇನ್ನು ಕೆಲವರು ಕಾದು ಸುಸ್ತಾಗಿ ಹಿಂತಿರುಗಿದ್ದಾರೆ. ಒಟ್ಟಾರೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುತ್ತೇವೆ ಎಂದು ಖುಷಿಯಾಗಿ ಹೊಸ ವರ್ಷದಂದು ತೆರಳಿದ ಬಹುತೇಕರಿಗೆ ನಿರಾಸೆಯಾಗಿದ್ದಂತು ನಿಜ.