ಫಾನಿ ಚಂಡಮಾರುತದ ಪ್ರಭಾವದಿಂದ ಗುಂಡ್ಲುಪೇಟೆ ಸುತ್ತ ಭಾರೀ ಮಳೆ
ಗುಂಡ್ಲುಪೇಟೆ (ಚಾಮರಾಜನಗರ), ಏಪ್ರಿಲ್ 29: ಚಾಮರಾಜನಗರ ಜಿಲ್ಲೆಯ ತಮಿಳುನಾಡು ಗಡಿ ಭಾಗವಾದ ಗುಂಡ್ಲುಪೇಟೆಯ ವಿವಿಧೆಡೆ ಸೋಮವಾರ ಸಂಜೆ ನಾಲ್ಕು ಗಂಟೆಯಿಂದ ಏಳರವರೆಗೆ ಗಾಳಿ, ಗುಡುಗು ಸಹಿತ ಭಾರಿ ಮಳೆಯಾಗಿದೆ. ಫಾನಿ ಚಂಡಮಾರುತದ ಪ್ರಭಾವದಿಂದಲೇ ಬಂಡೀಪುರ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗಿದೆ.
ಆದರೆ, ಗುಂಡ್ಲುಪೇಟೆ ಪಟ್ಟಣದಲ್ಲಿ ಮಳೆಯೇನೂ ಇಲ್ಲ. ಇನ್ನು ಅಡ್ಡಾದಿಡ್ಡಿ ಮಳೆ ಚಚ್ಚಿರುವುದರಿಂದ ಜನಜೀವನ ಅಸ್ತವ್ಯಸ್ತ. ಹಂಗಳ ಗ್ರಾಮದಲ್ಲಿ ಬೃಹತ್ ಆಲದ ಮರ ಧರೆಗುರುಳಿ, ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಅದನ್ನು ತೆರವುಗೊಳಿಸಲಾಯಿತು. ಬಂಡೀಪುರದ ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿತ್ತು.
ಪಥ ಬದಲಾಯಿಸಿದ ಫ್ಯಾನಿ, ತಮಿಳುನಾಡಿನಲ್ಲಿ ಕಡಿಮೆ, ಒಡಿಶಾದಲ್ಲಿ ಭಾರಿ ಮಳೆ ಸಾದ್ಯತೆ
ಅಂದಹಾಗೆ ಭಾನುವಾರವೂ ಮಳೆಯಾಗಿತ್ತು. ಗಾಳಿಗೆ ಎರಡು- ಮೂರು ಅಂಗಡಿಗಳ ಛಾವಣಿ ಹಾರಿಹೋಗಿದ್ದವು. ಬೇಸಿಗೆಯಲ್ಲಿ ಕಾಳ್ಗಿಚ್ಚಿನಿಂದ ಸುಟ್ಟುಹೋಗಿದ್ದ ಬಂಡೀಪುರದಲ್ಲಿ ಸತತ ಮಳೆಯಾಗುತ್ತಿದ್ದು, ಬೇಸಿಗೆ ಬಳಿಕ ಈ ಭಾಗದಲ್ಲಿ ಆರನೇ ಮಳೆಯಾಗಿದೆ.
ಸುಟ್ಟುಹೋಗಿದ್ದ ಪ್ರದೇಶಗಳಲ್ಲಿ ಹಸಿರು ಮತ್ತೆ ಚಿಗುರುತ್ತಿದ್ದು, ಅರಣ್ಯ ಮನತಣಿಸುತ್ತಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಕಾಡಿನಲ್ಲಿರುವ ಕೆರೆಗಳಲ್ಲಿ ನೀರಿನ ಕೊರತೆ ಇರಲಿಲ್ಲ. ಈಗ ಎಲ್ಲ ಕೆರೆ- ಹೊಂಡಗಳೂ ಭರ್ತಿಯಾಗಿವೆ.