ಬಂಡೀಪುರದಲ್ಲಿರುವ 100 ವರ್ಷದ ಬ್ರಿಟಿಷರ ಕಾಲದ ಅತಿಥಿಗೃಹ ನೋಡಿದ್ದೀರಾ?
ಕೆಲವು ಅರಣ್ಯಗಳಲ್ಲಿ ಇಂದಿಗೂ ಬ್ರಿಟಿಷರ ಕಾಲದ ಅತಿಥಿ ಗೃಹಗಳಿರುವುದನ್ನು ಕಾಣಬಹುದು. ಇದೇ ರೀತಿಯ ಅತಿಥಿಗೃಹ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯದಲ್ಲಿದೆ. ಬಂಡೀಪುರದ ಮೂಲೆಹೊಳೆ ವಲಯದಲ್ಲಿನ ಚಮ್ಮನಹಳ್ಳ ಪ್ರದೇಶದಲ್ಲಿರುವ ಬ್ರಿಟಿಷರ ಕಾಲದ ಈ ಅತಿಥಿಗೃಹಕ್ಕೆ ಬರೋಬ್ಬರಿ ನೂರು ವರ್ಷ.
ಕಲ್ಲು, ಇಟ್ಟಿಗೆ, ಗಾರೆಯಿಂದ ನಿರ್ಮಿಸಿದ ಮಂಗಳೂರು ಹೆಂಚು ಛಾವಣಿ ಹೊಂದಿರುವ ಈ ಕಟ್ಟಡ ಅಂದಿನ ಬ್ರಿಟಿಷ್ ಅಧಿಕಾರಿಗಳು ಮತ್ತು ಮೈಸೂರು ಒಡೆಯರ್ ಊಟಿಗೆ ತೆರಳಿ, ಮೈಸೂರಿಗೆ ಹಿಂತಿರುಗುವಾಗ ವಿಶ್ರಾಂತಿ ಪಡೆಯಲು ಅನುಕೂಲವಾಗಲೆಂದು ಕಟ್ಟಿದರೆಂಬುದಾಗಿ ಇತಿಹಾಸ ಹೇಳುತ್ತದೆ.
ಬಸ್ಅನ್ನೇ ಅಟ್ಟಿಸಿದ ಆನೆ: ಬಂಡಿಪುರದ ಘಟನೆಯ ವೈರಲ್ ವಿಡಿಯೋ
ಬಂಡೀಪುರ ವ್ಯಾಪ್ತಿಯ ಮೂಲೆಹೊಳೆ ವಲಯದಲ್ಲಿನ ದಟ್ಟ ಅರಣ್ಯ ಪ್ರದೇಶದ ಚಮ್ಮನಹಳ್ಳದಲ್ಲಿ 1917ರಲ್ಲಿ ಅತಿಥಿ ಗೃಹದ ಕಟ್ಟಡವನ್ನು ನಿರ್ಮಿಸಲಾಗಿದೆ. ಅಂದಿನ ಕಾಲದಲ್ಲಿ ಈ ಕಟ್ಟಡ ಬಹಳಷ್ಟು ಖ್ಯಾತಿಯನ್ನು ಪಡೆದಿತ್ತಲ್ಲದೆ, ಬ್ರಿಟಿಷ್ ಅಧಿಕಾರಿಗಳು ಮತ್ತು ಮೈಸೂರು ಒಡೆಯರ್ ರಾತ್ರಿ ಇಲ್ಲಿ ತಂಗಿದ್ದು, ಮುಂಜಾನೆ ಈ ವ್ಯಾಪ್ತಿಯಲ್ಲಿ ಅಡ್ಡಾಡುವ ಪ್ರಾಣಿಗಳನ್ನು ನೋಡಿ ಖುಷಿ ಪಡುತ್ತಿದ್ದರು.
ಸ್ವಾತಂತ್ರ್ಯಾ ನಂತರ ಅರಣ್ಯ ಇಲಾಖೆಯ ಅತಿಥಿಗೃಹವಾಗಿ ಮುಂದುವರೆಯಿತಲ್ಲದೆ, 2000ರಲ್ಲಿ ಈ ಅತಿಥಿಗೃಹದ ಮೇಲ್ಭಾಗದಲ್ಲಿ ವೀಕ್ಷಣಾ ಗೋಪುರವನ್ನು ನಿರ್ಮಿಸಲಾಯಿತು. ಈ ಗೋಪುರ ನಿರ್ಮಾಣದ ಬಳಿಕ ಕಾಡು ಪ್ರಾಣಿಗಳ ಚಲನವಲನ ವೀಕ್ಷಣೆಗೆ ಅನುಕೂಲವಾಯಿತು.
ಅಲ್ಲದೆ ಇಲ್ಲಿಂದ ನಿಂತು ನೋಡಿದರೆ ಕೇರಳ, ಗೋಪಾಲಸ್ವಾಮಿ ಬೆಟ್ಟ, ಮೂಲೆಹೊಳೆ, ಬಂಡೀಪುರ ವಲಯದ ಅರಣ್ಯ ಪ್ರದೇಶ ಕಾಣುವುದರಿಂದ ಬೇಸಿಗೆಯಲ್ಲಿ ಕಾಡ್ಗಿಚ್ಚು ಕಾಣಿಸಿದರೆ, ವಲಯ ಪತ್ತೆ ಹಚ್ಚಿ ಬೆಂಕಿ ನಂದಿಸಲು ಅನುಕೂಲವಾಗುತ್ತಿತ್ತು.
ಹಿಂದೆ ಬಂಡೀಪುರ ಹುಲಿ ಯೋಜನೆಗೆ ಸೇರಿರುವ ಈ ಅತಿಥಿಗೃಹದಲ್ಲಿ ತಂಗಲು ರಜಾ ದಿನಗಳಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಗಿಬೀಳುತ್ತಿದ್ದರು. ಇದಕ್ಕಾಗಿ ಮಂತ್ರಿಗಳಿಂದಲೂ ಪ್ರಭಾವ ಬೀರುತ್ತಿದ್ದರು. ಹೆಚ್ಚಿನವರು ಮೋಜು- ಮಸ್ತಿ ಮಾಡುವ ಸಲುವಾಗಿ ಆಗಮಿಸುತ್ತಿದ್ದರು.
ಇಂತಹವರನ್ನು ಸುರಕ್ಷಿತವಾಗಿ ಕರೆದೊಯ್ದು, ವಾಪಸ್ ಕರೆತರುವುದು ಅರಣ್ಯ ಇಲಾಖೆ ಸಿಬ್ಬಂದಿಗೆ ದೊಡ್ಡ ತಲೆನೋವಾಗಿತ್ತು. ಜತೆಗೆ ಪರಿಸರ ಸೂಕ್ಷ್ಮ ವಲಯದಲ್ಲಿ ವಾಹನಗಳ ಸಂಚಾರ ಹಾಗೂ ಅತಿಥಿಗಳ ಗದ್ದಲದಿಂದ ವನ್ಯಜೀವಿಗಳು ತೊಂದರೆ ಎದುರಿಸುತ್ತಿದ್ದವು.
ಬಂಡೀಪುರದಲ್ಲಿನ ಸಫಾರಿ ಜಂಗಲ್ ಲಾಡ್ಜ್ ಗೆ ಹಸ್ತಾಂತರ?
ಇಂತಹ ತೊಂದರೆಗಳನ್ನೆಲ್ಲ ಕಣ್ಣಾರೆ ಕಂಡ ಅರಣ್ಯಾಧಿಕಾರಿಗಳು ಅತಿಥಿಗೃಹಕ್ಕೆ ಸಾರ್ವಜನಿಕರ ಪ್ರವೇಶ ನಿರಾಕರಿಸಿದರು. ಹೀಗಾಗಿ ಜನರ ಗಲಾಟೆಯಿಲ್ಲದೆ ಅತಿಥಿಗೃಹ ಈಗ ಪ್ರಶಾಂತವಾಗಿದೆ. ಅರಣ್ಯಾಧಿಕಾರಿಗಳು, ಸಿಬ್ಬಂದಿ ಹೊರತು ಪಡಿಸಿದರೆ ಇದರತ್ತ ಯಾರೂ ಸುಳಿಯುತ್ತಿಲ್ಲ. ಕಟ್ಟಡಕ್ಕೆ ಬೆಳಕಿನ ವ್ಯವಸ್ಥೆಗೆ ಸೋಲಾರ್ ದೀಪವನ್ನು ಅಳವಡಿಸಲಾಗಿದೆ. ಸಮೀಪದ ಕೆರೆಯ ಬಳಿ ಕೊಳವೆಬಾವಿಯಿಂದ ನೀರು ಒದಗಿಸಲಾಗಿದೆ.
ಅರಣ್ಯದ ನಡುವೆ ಮಳೆ- ಗಾಳಿ, ಚಳಿಯ ಹೊಡೆತವನ್ನು ಸಹಿಸುತ್ತಾ ಬಂದಿರುವ ಈ ಕಟ್ಟಡಕ್ಕೆ ಈಗ ಶತಮಾನ ಪೂರೈಸಿದ ಸಂಭ್ರಮ. ಇಂತಹ ಕಟ್ಟಡಕ್ಕೆ ಪಾರಂಪರಿಕ ಮಾನ್ಯತೆ ನೀಡಿದರೆ ಇದರ ಖ್ಯಾತಿ ಇನ್ನಷ್ಟು ಪಸರಿಸುವುದು ಖಚಿತ.