ಕಿಚ್ಚುಗತ್ತಿ ಮಾರಮ್ಮನ 'ಅನ್ನ ಪ್ರಸಾದ' ತಿಂದ ಭಕ್ತರು ದುರ್ಮರಣ
ಹನೂರು(ಚಾಮರಾಜನಗರ), ಡಿಸೆಂಬರ್ 14: ಹನೂರು ತಾಲೂಕಿನ ಸಾಲ್ವಡಿ ಗ್ರಾಮದ ಕಿಚ್ಚುಗತ್ತಿ ಮಾರಮ್ಮನ ದೇಗುಲದ ಸಮಾರಂಭದ ಸಂಭ್ರಮಕ್ಕೆ ಸೂತಕದ ಛಾಯೆ ಬಡಿದಿದೆ.
ದೇಗುಲದ ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಕ್ತದಿಂದ ಪಾಲ್ಗೊಂಡಿದ್ದವರಿಗೆ ಅನ್ನ ಪ್ರಸಾದವನ್ನು ನೀಡಲಾಗಿತ್ತು. ಆದರೆ, ಪ್ರಸಾದ ಸೇವಿಸಿದ 40ಕ್ಕೂ ಅಧಿಕ ಭಕ್ತರ ಪೈಕಿ ಐವರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತರನ್ನು ಗೋಪಿಯಣ್ಣ, ಶಾಂತ, ಪಾಪಣ್ಣ, ಅಣ್ಣಯಪ್ಪ, ಅಡುಗೆ ಭಟ್ಟರ ಮಗಳು ಅನಿತಾ ಎಂದು ಗುರುತಿಸಲಾಗಿದೆ. ಪ್ರಸಾದವನ್ನು ಸೇವಿಸಿದ 20ಕ್ಕೂ ಅಧಿಕ ಕಾಗೆಗಳು ಕೂಡಾ ಅಸ್ವಸ್ಥಗೊಂಡು ಜೀವನ್ಮರಣ ಹೋರಾಟ ನಡೆಸಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಅನ್ನ ಪ್ರಸಾದವನ್ನು ತಿಂದು ಒದ್ದಾಡುತ್ತಿದ್ದ ಅನೇಕ ಭಕ್ತರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ ಹನೂರಿನ ಶಾಸಕ ನಾಗೇಂದ್ರ ಅವರು, ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ, ಅನ್ನ ಪ್ರಸಾದದ ಸ್ಯಾಂಪಲ್ ಪಡೆದು ಲ್ಯಾಬ್ ಗೆ ಕಳಿಸಲಾಗುತ್ತಿದೆ. ಮೃತಪಟ್ಟವರ ಕುಟುಂಬಕ್ಕೆ ನನ್ನ ಸಾಂತ್ವನವನ್ನು ತಿಳಿಸುತ್ತಿದ್ದೇನೆ. ಸದ್ಯ ಬೆಳಗಾವಿಯಲ್ಲಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದೇನೆ. ಆದಷ್ಟು ಬೇಗ ಹನೂರಿಗೆ ತೆರಳುತ್ತೇನೆ ಎಂದರು.