ಚಾಮರಾಜನಗರ ಜಿಲ್ಲಾಧಿಕಾರಿಯಿಂದ ಹಾಡಿಗಳ ರಿಯಾಲಿಟಿ ಚೆಕ್
ಚಾಮರಾಜನಗರ, ಫೆಬ್ರವರಿ 3: ಚಾಮರಾಜನಗರ ಜಿಲ್ಲೆಯ ಅರಣ್ಯ ಪ್ರದೇಶಗಳ ಅಂಚಿನಲ್ಲಿ, ಬೆಟ್ಟಗಳ ಹಾಡಿಯಲ್ಲಿ ವಾಸಿಸುವ ಬುಡಕಟ್ಟು ಜನಾಂಗ ಇಂದಿಗೂ ಆಧುನಿಕತೆಗೆ ತೆರೆದುಕೊಂಡಿಲ್ಲ. ಸೌಲಭ್ಯ ವಂಚಿತ ಬದುಕು ಅವರದ್ದಾಗಿದೆ. ಬಹಳಷ್ಟು ಕಡೆಗಳಲ್ಲಿ ಬಡಜನರಿಗೆ ಸರ್ಕಾರ ಸೌಲಭ್ಯ ಒದಗಿಸುತ್ತಿದ್ದರೂ ಅದು ಸರಿಯಾಗಿ ತಲುಪುತ್ತಿಲ್ಲ. ಹೀಗಾಗಿ ಬಡವರ ಬದುಕು ಹಸನಾಗುತ್ತಿಲ್ಲ.
ದಾಖಲೆಗಳಲ್ಲಿ, ಅಂಕಿ ಅಂಶಗಳಲ್ಲಿ ಬುಡಕಟ್ಟು ಸಮುದಾಯದ ಅಭಿವೃದ್ಧಿಯ ಚಿತ್ರಣಗಳು ಸಿಗುತ್ತಿವೆಯಾದರೂ, ಅಲ್ಲಿ ತನಕ ಹೋಗಿ ಹೆಚ್ಚಿನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿಲ್ಲ. ಹಾಗಾಗಿ ಸಂಕಷ್ಟದಲ್ಲಿ ಜೀವನ ಸಾಗಿಸುವುದು ಅನಿವಾರ್ಯವಾಗಿದೆ. ಹೀಗಿರುವಾಗಲೇ ಚಾಮರಾಜನಗರದ ಕ್ರಿಯಾಶೀಲ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ನೇರವಾಗಿ ಹಾಡಿಗಳಿಗೆ ಭೇಟಿ ನೀಡಿ ರಿಯಾಲಿಟಿ ಚೆಕ್ ಮಾಡಿದ್ದಾರೆ. ಹಾಡಿಯ ವಾಸಿಗಳನ್ನು ಮಾತನಾಡಿಸಿ ಅವರಿಂದ ಮಾಹಿತಿ ಪಡೆದು ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡುವ ಮೂಲಕ ಗಮನಸೆಳೆದಿದ್ದಾರೆ.
ಹಾಡಿಗಳಿಗೆ ತೆರಳಿದ ಜಿಲ್ಲಾಧಿಕಾರಿ
ಚಾಮರಾಜನಗರ ಜಿಲ್ಲೆಯ ಬೇಡಗುಳಿ, ಮಾರಿಗುಡಿ, ಕಾಡಿಗೇರೆ, ಬಿಸಿಲಗೇರೆ ಪೋಡುವಿಗೆ ಭೇಟಿ ನೀಡಿ ಸೋಲಿಗರ ಕುಂದುಕೊರತೆ ವಿಚಾರಿಸಿದ ಜಿಲ್ಲಾಧಿಕಾರಿಗಳು ಹಾಡಿ, ಪೋಡುವಿಗಳಿಗೆ ಕಲ್ಪಿಸಲಾಗಿರುವ ವಿದ್ಯುತ್, ಕುಡಿಯುವ ನೀರು, ಶೌಚಾಲಯ ಇನ್ನಿತರ ಮೂಲ ಸೌಕರ್ಯಗಳನ್ನು ಪರಿಶೀಲನೆ ಮಾಡಿದ್ದಾರೆ. ಜತೆಗೆ ಗಿರಿಜನ ಸೋಲಿಗರಿಗೆ ನೀಡಿರುವ ಪೌಷ್ಠಿಕ ಆಹಾರವನ್ನು ವೀಕ್ಷಿಸಿ, ಪೌಷ್ಟಿಕ ಆಹಾರ ಸೂಕ್ತ ಸಮಯಕ್ಕೆ ತಲಪುತ್ತಿದೆಯೇ? ಎಂಬ ಬಗ್ಗೆ ಗಿರಿಜನರಿಂದಲೇ ಕೇಳಿ ತಿಳಿದುಕೊಂಡಿದ್ದಾರೆ.
ಚಾಮರಾಜನಗರ; ಆನೆ ದಂತ ಹಿಡಿದು ಆಟವಾಡಿದ ಹಾಡಿಯ ಮಕ್ಕಳು
ಸೋಲಿಗರ ಕುಂದುಕೊರತೆ ವಿಚಾರಣೆ
ಜತೆಗೆ ಪೌಷ್ಠಿಕ ಆಹಾರ ಸದ್ಬಳಕೆ ಮಾಡಿಕೊಳ್ಳುವಂತೆಯೂ ಹಾಡಿವಾಸಿಗಳಿಗೆ ಸಲಹೆ ನೀಡಿದ್ದಾರೆ. ಸುಮಾರು ನಾಲ್ಕು ದಶಕಗಳ ಹಿಂದೆ ನಿರ್ಮಾಣವಾಗಿರುವ ಗಿರಿಜನರ ಕೆಲ ಮನೆಗಳು ಶಿಥಿಲವಾಗಿರುವುದನ್ನು ಗಮನಿಸಿದ ಅವರು ಮನೆಗಳ ಸಮೀಕ್ಷೆ ಕೈಗೊಂಡು ಎಷ್ಟು ಮನೆಗಳನ್ನು ಹೊಸದಾಗಿ ನಿರ್ಮಾಣ ಮಾಡಬೇಕಿದೆ ಎಂಬುದರ ಬಗ್ಗೆ ಕ್ರಿಯಾಯೋಜನೆ ಅಂದಾಜು ಪ್ರಸ್ತಾವನೆ ಸಲ್ಲಿಸುವಂತೆ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಹೊನ್ನೆಗೌಡ ಅವರಿಗೆ ಸೂಚಿಸಿದ್ದಾರೆ.
ಸಮಸ್ಯೆ ಪರಿಹರಿಸಲು ನಿರ್ದೇಶನ
ಇನ್ನು ಗಿರಿಜನರ ಹಾಡಿಗಳಿಗೆ ಭೇಟಿ ನೀಡಿದ ವೇಳೆ ಅಲ್ಲಿನ ಜನರೊಂದಿಗೆ ಬೆರೆತು ಆತ್ಮೀಯವಾಗಿ ಮಾತನಾಡಿದ ಜಿಲ್ಲಾಧಿಕಾರಿ ಮುಂದೆ ಮುಕ್ತವಾಗಿ ಸ್ಥಳೀಯರು, ತಮ್ಮ ಕೆಲವು ಸಮಸ್ಯೆಗಳನ್ನು ಹೇಳಿಕೊಂಡರು. ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುತ್ತಿರುವ ಪಿಂಚಣಿ ಕೆಲವರಿಗೆ ತಡವಾಗಿ ತಲುಪುತ್ತಿದೆ. ಇನ್ನು ಕೆಲವರಿಗೆ ಸೌಲಭ್ಯ ದೊರಕಬೇಕಿದೆ. ಪಡಿತರ ವಿತರಣೆ ವ್ಯವಸ್ಥೆಯು ಇನ್ನಷ್ಟು ಅನುಕೂಲವಾಗಬೇಕಿದೆ ಎಂದು ಹೇಳಿದರು. ಅವರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿಗಳು ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ಒತ್ತು ನೀಡಿ
ಮಾರಿಗುಡಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ವೈದ್ಯರ ನೇಮಕಾತಿ ಮಾಡಿಕೊಡುವಂತೆ ಸ್ಥಳೀಯರು ಗಮನ ಸೆಳೆದರು. ಈ ವೇಳೆ ವೈದ್ಯರ ನೇಮಕ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ನೀಡಿದರು. ಆ ನಂತರ ಬೇಡಗುಳಿ ಆಶ್ರಮ ಶಾಲೆಗೆ ಭೇಟಿ ನೀಡಿ ಮಕ್ಕಳ ದಾಖಲಾತಿ ವಿವರವನ್ನು ಪರಿಶೀಲಿಸಿದರು. ಈ ವೇಳೆ ಅಲ್ಲಿನ ಅಧಿಕಾರಿಗೆ ಶಿಕ್ಷಣ ಸೌಲಭ್ಯಗಳಿಗೆ ಅನುಸಾರವಾಗಿ ಮಕ್ಕಳ ಪ್ರವೇಶ ದಾಖಲಾತಿಯನ್ನು ಹೆಚ್ಚಳ ಮಾಡಬೇಕು. ಶಾಲೆಯಿಂದ ಯಾರೂ ಹೊರಗುಳಿಯಬಾರದು. ಶಿಕ್ಷಣ ವಂಚಿತರಾಗದಂತೆ ಮಕ್ಕಳನ್ನು ಜವಾಬ್ದಾರಿಯುತವಾಗಿ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಹಾಡಿ ಜನರೊಂದಿಗೆ ಮಾತನಾಡಿ ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ಒತ್ತು ನೀಡಲು ಸಲಹೆ ನೀಡಿದರು.