ಬೀದಿನಾಯಿಗಳ ದಾಳಿಗೆ ಕುರಿಗಳು ಬಲಿ!
ಬೀದಿ ನಾಯಿಗಗಳು ದಾಳಿ ಮಾಡಿ 4 ಕುರಿಗಳನ್ನು ಕೊಂದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ, ಜನವರಿ 26: ಬೀದಿನಾಯಿಗಳು ದಾಳಿ ನಡೆಸಿ ನಾಲ್ಕು ಕುರಿಗಳನ್ನು ಸಾಯಿಸಿ, ಎಂಟು ಕುರಿಗಳನ್ನು ಗಾಯಗೊಳಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ನಡೆದಿದೆ.
ಬೆಳಚಲವಾಡಿ ಗ್ರಾಮದ ಪುಟ್ಟಮ್ಮ ಹಾಗೂ ಸಣ್ಣಮ್ಮ ಎಂಬುವವರು ತಮ್ಮ ಕುಟುಂಬದ ನಿರ್ವಹಣೆಗಾಗಿ ಕುರಿ ಸಾಕಾಣಿಕೆಯನ್ನೇ ಅವಲಂಬಿಸಿದ್ದಾರೆ. ಇದೀಗ ಬೀದಿ ನಾಯಿಗಳು ಕೃತ್ಯದಿಂದ ಅವರೆಲ್ಲಾ ತಮ್ಮ ಕುರಿಗಳನ್ನು ಕಳೆದುಕೊಂಡು ಆತಂಕಕ್ಕೀಡಾಗಿದ್ದಾರೆ.[ಬೀದಿ ನಾಯಿ ದತ್ತು ಪಡೆವ ಅಭಿಯಾನಕ್ಕೆ ಭಾರೀ ಸ್ಪಂದನೆ]
ಎಂದಿನಂತೆ ಪುಟ್ಟಮ್ಮ ಮತ್ತು ಸಣ್ಣಮ್ಮ ಗ್ರಾಮದ ಸಮೀಪದಲ್ಲಿ ಕುರಿಗಳನ್ನು ಮೇಯಲು ಬಿಟ್ಟಿದ್ದಾರೆ. ಆಗ ಕುರಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ಎಂಟು ಬೀದಿ ನಾಯಿಗಳ ಹಿಂಡು ಸಿಕ್ಕ ಸಿಕ್ಕ ಕುರಿಗಳನ್ನು ಕಚ್ಚಲು ಆರಂಭಿಸಿವೆ. ವಿಷಯ ತಿಳಿದು ಸ್ಥಳಕ್ಕೆ ಹೋಗುವ ವೇಳೆಗೆ ನಾಯಿಗಳು ಓಡಿ ಹೋಗಿವೆ. ಆದರೆ ಅಷ್ಟರಲ್ಲಾಗಲೇ ನಾಯಿಗಳು 4 ಕುರಿಗಳ ಕುತ್ತಿಗೆಗೆ ಕಚ್ಚಿ ರಕ್ತ ಕುಡಿದು ಸಾಯಿಸಿವೆ. 8 ಕುರಿಗಳು ನಾಯಿಗಳ ದಾಳಿಗೆ ಗಂಭೀರ ಗಾಯಗೊಂಡಿವೆ.
ಪುಟ್ಟಮ್ಮ ಮತ್ತು ಸಣ್ಣಮ್ಮ ಅವರಿಗೆ ಸೇರಿದ ತಲಾ 2 ಕುರಿಗಳು ಸತ್ತಿವೆ. ನಾಯಿಯ ದಾಳಿಯಿಂದ ಬೆಚ್ಚಿರುವ ಗ್ರಾಮಸ್ಥರು 'ರಕ್ತದ ರುಚಿಕಂಡಿರುವ ಈ ನಾಯಿಗಳು ಮಕ್ಕಳ ಮತ್ತು ಜಾನುವಾರುಗಳ ಮೇಲೂ ದಾಳಿ ನಡೆಸಬಹುದೆಂದು ಆತಂಕ ವ್ಯಕ್ತಪಡಿಸಿದ್ದಾರೆ.[ಡಿಕೆ ಶಿವಕುಮಾರ್ ಗೆ ಕಚ್ಚಿದ ಕನಕಪುರ ಬೀದಿ ನಾಯಿ]
ಬೇಗೂರು ಗ್ರಾ.ಪಂ ವ್ಯಾಪ್ತಿಗೆ ಬರುವ ಬೆಳಚಲವಾಡಿ ಗ್ರಾಮದಲ್ಲಿ ಕಳೆದ ತಿಂಗಳಷ್ಟೇ ನಾಯಿಗಳು ದಾಳಿ ನಡೆಸಿ ಸುಮಾರು ಎಂಟು ಕುರಿಗಳನ್ನು ತಿಂದು ಹಾಕಿದ್ದವು. ಈ ಪ್ರಕರಣ ಹಸಿರಿರುವಾಗಲೇ ಇದೀಗ ಮತ್ತೊಂದು ಪ್ರಕರಣ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೀಡು ಮಾಡಿದೆ. ಈ ಕೂಡಲೇ ಗ್ರಾಪಂ ಅಧಿಕಾರಿಗಳು ನಾಯಿಗಳನ್ನು ಓಡಿಸಬೇಕು ಮತ್ತು ಕುರಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಎಂಬ ಬೇಡಿಕೆ ಕೇಳಿ ಬಂದಿದೆ.