ಕೊನೆಗೂ ಚಾಮರಾಜನಗರದ ಪರವಾಶು ದೇಗುಲಕ್ಕೆ ಅಭಿವೃದ್ಧಿ ಭಾಗ್ಯ
ಚಾಮರಾಜನಗರ, ಸೆಪ್ಟೆಂಬರ್ 18: ಕೊನೆಗೂ ಜಿಲ್ಲೆಯ ಗುಂಡ್ಲುಪೇಟೆ ಬಳಿ ಪಾಳುಬಿದ್ದಿದ್ದ ಪುರಾತನ ಪರವಾಶು ದೇಗುಲಕ್ಕೆ ಅಭಿವೃದ್ಧಿಯ ಭಾಗ್ಯ ಒದಗಿಬಂದಿದೆ. ಕೆಲವು ವಾರಗಳ ಹಿಂದೆ ಈ ಪಾಳುಬಿದ್ದ ದೇಗುಲದ ಬಗ್ಗೆ ಗಮನ ಸೆಳೆಯಲಾಗಿತ್ತು. ಇದೀಗ ಗುಂಡ್ಲುಪೇಟೆ ಪುರಸಭೆ ವತಿಯಿಂದ ದೇಗುಲದ ಸುತ್ತಮುತ್ತ ಬೆಳೆದಿದ್ದ ಕಾಡುಗಳನ್ನು ತೆರವುಗೊಳಿಸುವ ಮೂಲಕ ಸ್ವಚ್ಛಗೊಳಿಸಲಾಗಿದ್ದು, ದೇವಾಲಯಕ್ಕೆ ಹೊಸ ಕಳೆ ಬಂದಿದೆ.
17ನೇ ಶತಮಾನದಲ್ಲಿ ಮೈಸೂರಿನ ಚಿಕ್ಕದೇವರಾಜು ನಿರ್ಮಾಣ ಮಾಡಿದ ಪುರಾತನ ದೇಗುಲ ಇದಾಗಿದ್ದು, ಇಲ್ಲಿರುವ ವಿಗ್ರಹಗಳು ಗತಕಾಲದ ಇತಿಹಾಸವನ್ನು ನೆನಪಿಸುತ್ತಿವೆ. ಆದರೆ ದೇಗುಲದ ಸುತ್ತ ಕಾಡು ಬೆಳೆದು ಪಾಳು ಬಿದ್ದ ಕಾರಣ ಜನ ಇತ್ತ ತೆರಳಲು ಭಯಪಡುತ್ತಿದ್ದರು. ಪುರಾತನ ದೇಗುಲವಾದ್ದರಿಂದ ನಿಧಿಕಳ್ಳರು ಆಗಾಗ್ಗೆ ಹೊಂಡ ತೋಡಿ ನಿಧಿ ಹುಡುಕುವ ಪ್ರಯತ್ನ ಮಾಡುತ್ತಲೇ ಇದ್ದರು.
Recommended Video
ಪಾಳುಬಿದ್ದ ಪರವಾಶು ದೇಗುಲದ ಅಭಿವೃದ್ಧಿ ಕಾರ್ಯ ಯಾವಾಗ?
ಪರವಾಶು ದೇವಾಲಯ ತಲಕಾಡಿನ ವೈದ್ಯೇಶ್ವರ ದೇವಸ್ಥಾನವನ್ನು ಹೋಲುತ್ತದೆಯಲ್ಲದೆ, ದೊಡ್ಡ ಕಲ್ಲಿನ ಕಟ್ಟಡವನ್ನು ಹೊಂದಿದ್ದು ಇಡೀ ದೇವಸ್ಥಾನ ಕಲ್ಲಿನ ತಳಹದಿಯ ಮೇಲೆ ನಿಂತಿರುವುದರಿಂದ ಗುಂಡ್ಲುಪೇಟೆ ತಹಸೀಲ್ದಾರ್ ಎಂ.ನಂಜುಂಡಯ್ಯ ಅವರು ಪುರಾತತ್ತ್ವ ಸಂಗ್ರಹಣೆ ಮತ್ತು ಪರಂಪರೆ ಆಯ್ತುಕರಿಗೆ ಪತ್ರ ಬರೆದು ಈ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡುವಂತೆ ಕೋರಿದ್ದರು.
ಪರವಾಶು ದೇವರ ಮೂರ್ತಿ ಹಸ್ತಿನಾವತಿಯಲ್ಲಿತ್ತು: ಇತಿಹಾಸವನ್ನು ತಿರುವುತ್ತಾ ಹೋದರೆ ಪರವಾಶು ದೇವರ ಉತ್ಸವಮೂರ್ತಿ ಹಸ್ತಿನಾವತಿಯಲ್ಲಿತ್ತು ಎಂಬುದು ತಿಳಿದುಬರುತ್ತದೆ. ನಂತರ ಮೂರ್ತಿಯನ್ನು ಶಿವನಸಮುದ್ರಕ್ಕೆ ತಂದು ನಂತರ ಇಲ್ಲಿಗೆ ತರಲಾಯಿತು. ಇಲ್ಲಿದ್ದ ಎಲ್ಲ ವಿಗ್ರಹಗಳನ್ನು ವಿಜಯನಾರಾಯಣಸ್ವಾಮಿ ದೇವಸ್ಥಾನದ ನವರಂಗಕ್ಕಿಡಲಾಯಿತು ಎನ್ನಲಾಗಿದೆ. ಈ ಪರವಾಶು ದೇವಸ್ಥಾನ ಎದುರು ಲಕ್ಷ್ಮಿ ಕಲ್ಯಾಣಿ ಎಂಬ ಪುಷ್ಕರಣಿಯಿದೆ. ದೇವಸ್ಥಾನದ ಜೀರ್ಣೋದ್ಧಾರಕ್ಕೆ 2009ರಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿಯಾಗಿದ್ದ ಅಮರ ನಾರಾಯಣ ಅವರು ಮುಂದಾಗಿದ್ದರು. ಅವತ್ತು ಅರ್ಧ ಭಾಗದಷ್ಟು ಕೆಲಸಗಳು ಮುಗಿದಿತ್ತು. ಆದರೆ ಆ ನಂತರ ಜಿಲ್ಲಾಧಿಕಾರಿ ವರ್ಗಾವಣೆಯಾಗುತ್ತಿದ್ದಂತೆಯೇ ಕೆಲಸ ಅಲ್ಲಿಗೆ ನಿಂತಿದ್ದರಿಂದ ದೇವಾಲಯ ಅಭಿವೃದ್ಧಿ ಕಂಡಿರಲಿಲ್ಲ.
ಪಾಳುಬಿದ್ದ ದೇಗುಲಕ್ಕೀಗ ಹೊಸ ಕಳೆ: ಇದೀಗ ಗುಂಡ್ಲುಪೇಟೆಗೆ ತಹಸೀಲ್ದಾರ್ ಆಗಿ ಬಂದಂತಹ ನಂಜುಂಡಯ್ಯ ಅವರು ದೇವಸ್ಥಾನ ಇತಿಹಾಸವನ್ನು ತಿಳಿದು ಅದರ ರಕ್ಷಣೆಗೆ ಮುಂದಾಗಿ ಪುರಾತತ್ವ ಇಲಾಖೆಯ ಆಯುಕ್ತರಿಗೆ ಪತ್ರಬರೆದು ಜೀರ್ಣೋದ್ಧಾರ ಮಾಡುವ ಕೆಲಸಕ್ಕೆ ಶ್ರಮವಹಿಸಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅವರು ಕೂಡ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನ ಸುತ್ತಮುತ್ತ ಬೆಳೆದಿರುವ ಗಿಡಗಂಟಿಗಳು ತೆಗೆಸುವಂತೆ ಸೂಚಿಸಿದ್ದರು. ಇದೀಗ ಎಲ್ಲರ ಸಹಕಾರದಲ್ಲಿ ಪಾಳು ಬಿದ್ದ ದೇಗುಲಕ್ಕೆ ಅಭಿವೃದ್ಧಿಯ ಭಾಗ್ಯ ದೊರೆಯುವಂತಾಗಿರುವುದು ಸಂತಸದ ವಿಷಯವಾಗಿದೆ.