ಗುಂಡ್ಲುಪೇಟೆ ಮಾರುಕಟ್ಟೆಯಲ್ಲಿ ಕೊಳೆತ ತರಕಾರಿಗಳಿಂದ ಫಜೀತಿ
ಗುಂಡ್ಲುಪೇಟೆ, ಅಕ್ಟೋಬರ್ 8: ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ತರಕಾರಿಗಳು ಕೊಳೆತು ನಾರುತ್ತಿದ್ದು ಅಶುಚಿತ್ವ ತಾಂಡವವಾಡುತ್ತಿದೆ. ಆದರೂ ಇದನ್ನು ತೆರವುಗೊಳಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳಿನಿಂದ ಉತ್ತಮ ಮಳೆಯಾಗುತ್ತಿದ್ದು, ರೈತರು ಹಣ್ಣು-ತರಕಾರಿಗಳನ್ನು ಸಮೃದ್ಧವಾಗಿ ಬೆಳೆದು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ತರುತ್ತಿದ್ದಾರೆ. ಆದರೆ ಕಳೆದ ವಾರದಿಂದ ಬೀಳುತ್ತಿರುವ ಮಳೆಯಿಂದಾಗಿ ಟೊಮೆಟೋ ಸೇರಿದಂತೆ ಹಲವಾರು ತರಕಾರಿಗಳಿಗೆ ಹೆಚ್ಚಿನ ಬೇಡಿಕೆಯಿಲ್ಲದಂತಾಗಿದೆ.
ಇದರಿಂದ ಬೆಲೆ ಕುಸಿತವುಂಟಾಗಿದ್ದು ಕಾರ್ಮಿಕರ ಕೂಲಿ ಹಾಗೂ ಉತ್ಪಾದನಾ ವೆಚ್ಚವೂ ದೊರಕದ ರೈತರು ತಮ್ಮ ತರಕಾರಿಗಳನ್ನು ಹರಾಜು ಕಟ್ಟೆಗಳಲ್ಲಿಯೇ ಬಿಟ್ಟು ತೆರಳುತ್ತಿದ್ದಾರೆ. ಇವುಗಳಲ್ಲಿ ಚೆನ್ನಾಗಿರುವ ತರಕಾರಿಗಳನ್ನು ಪ್ರತ್ಯೇಕಿಸಿ ಮಾರಾಟ ಮಾಡುವ ವರ್ತಕರು ಉಳಿದ ಹಾಗೂ ಉಪಯೋಗಕ್ಕೆ ಬಾರದ ತರಕಾರಿಗಳನ್ನು ಮಾರುಕಟ್ಟೆಯ ಚರಂಡಿಗಳು ಹಾಗೂ ರಸ್ತೆಯಲ್ಲಿಯೇ ಸುರಿಯುತ್ತಿದ್ದಾರೆ. ಹೀಗಾಗಿ ಎಲ್ಲಿ ನೋಡಿದರೂ ಕೊಳೆತ ತರಕಾರಿಗಳ ರಾಶಿಯೇ ಆವರಿಸಿದೆ.
ಇಡೀ ಮಾರುಕಟ್ಟೆಯ ತುಂಬಾ ಕೊಳೆತ ತರಕಾರಿಗಳು ರಾಶಿಯಾಗಿ ಬಿದ್ದಿದ್ದು ಕಾಲಿಡಲೂ ಸಾಧ್ಯವಾಗದಂತಾಗಿದೆ. ಅಲ್ಲದೆ ಪೇಪರ್ ಲೋಟಗಳಲ್ಲಿ ಟೀ ಕುಡಿದ ನಂತರ ಎಸೆಯುತ್ತಿದ್ದು, ಇನ್ನೂ ಹೆಚ್ಚಿನ ಅಶುಚಿತ್ವಕ್ಕೆ ಕಾರಣವಾಗುತ್ತಿದೆ.
ಮಳೆಯ ನೀರು ಚರಂಡಿಗಳಲ್ಲಿ ತುಂಬಿಕೊಂಡು ರಸ್ತೆಯುದ್ದಕ್ಕೂ ಹರಿಯುತ್ತಿದೆ. ಪರಿಣಾಮವಾಗಿ ಇಡೀ ಮಾರುಕಟ್ಟೆಯ ಆವರಣದಲ್ಲಿ ಕೊಳೆತ ತರಕಾರಿಗಳ ಗಬ್ಬು ವಾಸನೆ ಹರಡಿಕೊಂಡಿದೆ. ಇದರಿಂದ ಮಾರುಕಟ್ಟೆಗೆ ಬರುವ ರೈತರು, ವ್ಯವಹಾರ ನಡೆಸುವ ವ್ಯಾಪಾರಿಗಳು ಗಬ್ಬು ವಾಸನೆಯನ್ನು ಸಹಿಸಿಕೊಳ್ಳಬೇಕಾಗಿದೆ.
ಇನ್ನಾದರೂ ಎಪಿಎಂಸಿಯವರು ಕೊಳೆತ ತರಕಾರಿಗಳನ್ನು ತೆರವುಗೊಳಿಸಿ ಉತ್ತಮ ಪರಿಸರ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.